ADVERTISEMENT

ಮಡಿಕೇರಿ: ವೃತ್ತಿ ಬದ್ಧತೆ ತೋರಿದ ಶಿಕ್ಷಕಿಗೆ ಉಸ್ತುವಾರಿ ಸಚಿವರ ಪ್ರಶಂಸೆ

​ಪ್ರಜಾವಾಣಿ ವಾರ್ತೆ
Published 15 ಜುಲೈ 2020, 13:16 IST
Last Updated 15 ಜುಲೈ 2020, 13:16 IST
ವಿ.ಸೋಮಣ್ಣ
ವಿ.ಸೋಮಣ್ಣ   

ಮಡಿಕೇರಿ: ತನ್ನ ತಾಯಿ ಮೃತಪಟ್ಟಿದ್ದರೂ, ಸೋಮವಾರ ಆರಂಭಗೊ೦ಡ ಎಸ್ಸೆಸ್ಸೆಲ್ಸಿ ಪರೀಕ್ಷೆಯ ಮೌಲ್ಯಮಾಪನಕ್ಕೆ ಹಾಜರಾಗಿ ವೃತ್ತಿ ಬದ್ಧತೆ ಮೆರೆದಿರುವ ಮಡಿಕೇರಿ ತಾಲ್ಲೂಕಿನ ಬೆಟ್ಟಗೇರಿ ಉದಯ ವಿದ್ಯಾಸಂಸ್ಥೆಯ ಶಿಕ್ಷಕಿ ಕವಿತಾ ಅವರನ್ನು ಕೊಡಗು ಜಿಲ್ಲಾ ಉಸ್ತುವಾರಿ ಸಚಿವ ವಿ.ಸೋಮಣ್ಣ ಅವರು ಪ್ರಶಂಸಿಸಿದ್ದಾರೆ.

ಕೊರೊನಾ ಹಿನ್ನೆಲೆಯಲ್ಲಿ ಎಸ್ಸೆಸ್ಸೆಲ್ಸಿ ಪರೀಕ್ಷೆಗಳು ತಡವಾಗಿ ನಡೆದಿವೆ. ಮಕ್ಕಳ ಭವಿಷ್ಯದ ಹಿತದೃಷ್ಟಿಯಿಂದ ಶಿಕ್ಷಕಿ ಕವಿತಾ ಅವರು ತಮ್ಮ ತಾಯಿ ನಿಧನರಾಗಿದ್ದರೂ ಸಹ ಮೌಲ್ಯಮಾಪನಕ್ಕೆ ಹಾಜರಾಗಿ, ವಿದ್ಯಾರ್ಥಿಗಳ ಭವಿಷ್ಯದ ಬಗೆಗಿನ ಅವರ ಕಾಳಜಿಯನ್ನು ಮತ್ತು ಕರ್ತವ್ಯ ನಿಷ್ಠೆಯನ್ನು ಮೆರೆದಿದ್ದಾರೆ. ವೃತ್ತಿಯಲ್ಲಿ ತೃಪ್ತಿ ಕಾಣುವ ಕವಿತಾ ಅವರ ಈ ಕಾರ್ಯ ನಿಜಕ್ಕೂ ಶ್ಲಾಘನೀಯ ಮತ್ತು ಇತರರಿಗೂ ಮಾದರಿ ಎಂದು ಸಚಿವರು ಪ್ರಶಂಸೆ ವ್ಯಕ್ತಪಡಿಸಿದ್ದಾರೆ.

ಶಿಕ್ಷಕಿ ಕವಿತಾ ಅವರ ತಾಯಿ 103 ವರ್ಷದ ಎಂ.ಪಿ.ಮುತ್ತವ್ವ ಅವರು ಸೋಮವಾರ ಬೆಳಿಗ್ಗೆ ವಯೋಸಹಜ ಕಾಯಿಲೆಯಿಂದ ಮೃತಪಟ್ಟಿದ್ದರು. ಆದರೂ ವಿದ್ಯಾರ್ಥಿಗಳ ಭವಿಷ್ಯದ ದೃಷ್ಟಿಯಿಂದ ನಗರದ ಸೇಂಟ್‌ ಮೈಕಲ್‌ ಶಾಲೆಯಲ್ಲಿ ನಡೆಯುತ್ತಿರುವ ಪರೀಕ್ಷಾ ಮೌಲ್ಯಮಾಪನಕ್ಕೆ ಆಗಮಿಸಿದ್ದರು. ಬಳಿಕ ಮಡಿಕೇರಿ ತಾಲ್ಲೂಕಿನ ಆವಂದೂರಿನಲ್ಲಿ ನಡೆದ ಅಂತ್ಯಸಂಸ್ಕಾರದಲ್ಲಿ ಪಾಲ್ಗೊಂಡಿದ್ದರು.

ADVERTISEMENT

‘ಕರ್ತವ್ಯ ಪ್ರಜ್ಞೆ ತೋರಿದ ಶಿಕ್ಷಕಿ’ ಶೀರ್ಷಿಕೆ ಅಡಿ ‘ಪ್ರಜಾವಾಣಿ’ಯ ಮುಖಪುಟದಲ್ಲಿ ಈ ಸುದ್ದಿ ಪ್ರಕಟವಾಗಿತ್ತು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.