ಮಡಿಕೇರಿ: ‘ಯುವಕರೇ ಹೆಚ್ಚಿರುವ ದೇಶದಲ್ಲಿ ಅಭಿವೃದ್ಧಿಗೆ ಯುವ ಪೀಳಿಗೆ ಕೈಜೋಡಿಸಬೇಕು’ ಎಂದು ತೂಗು ಸೇತುವೆಗಳ ಸರದಾರ ಅರಂಬೂರು ಡಾ.ಗಿರೀಶ್ ಭಾರದ್ವಾಜ್ ಇಲ್ಲಿ ಕರೆ ನೀಡಿದರು.
ನೆಹರೂ ಯುವ ಕೇಂದ್ರ, ಯುವಜನ ವ್ಯವಹಾರ ಹಾಗೂ ಕ್ರೀಡಾ ಸಚಿವಾಲಯ ವತಿಯಿಂದ ಪೊಲೀಸ್ ಮೈತ್ರಿ ಭವನದಲ್ಲಿ ಬುಧವಾರ ನಡೆದ ‘ಯುವ ಮುಂದಾಳತ್ವ ಹಾಗೂ ಸಮುದಾಯ ಅಭಿವೃದ್ಧಿ ತರಬೇತಿ’ಗೆ ಅವರು ಚಾಲನೆ ನೀಡಿ ಮಾತನಾಡಿದರು.
‘ಸಮಾಜದ ಅಭಿವೃದ್ಧಿಗೆ ಯುವಜನರ ಪಾತ್ರ ಪ್ರಮುಖವಾಗಿದ್ದು, ಯುವ ಪ್ರತಿಭೆಗಳನ್ನು ಮುಖ್ಯವಾಹಿನಿಗೆ ತರಲು ಹಿರಿಯರು ಹಾಗೂ ಶಿಕ್ಷಕರು ಪ್ರಯತ್ನಿಸಬೇಕು’ ಎಂದು ನುಡಿದರು.
‘ಪ್ರೀತಿ– ವಿಶ್ವಾಸದಿಂದ ಮಾತ್ರಸಮಾಜದಲ್ಲಿ ಗೆಲುವು ಸಾಧಿಸಲು ಸಾಧ್ಯ. ಯುವಕರ ಉನ್ನತ ವಿದ್ಯಾಭ್ಯಾಸದ ನಂತರ ಸ್ವಾವಲಂಬಿಯಾಗಿ ಬದುಕು ಕಟ್ಟಿಕೊಂಡು ಸಮಾಜದ ಅಭಿವೃದ್ಧಿಗೂ ನೆರವಾಗಬೇಕು’ ಎಂದು ಕೋರಿದರು.
ನೆಹರೂ ಯುವ ಕೇಂದ್ರದ ಜಿಲ್ಲಾ ಯುವ ಸಮನ್ವಯಾಧಿಕಾರಿ ಕೆ.ಟಿ.ಕೆ.ಉಲ್ಲಾಸ್ ಮಾತನಾಡಿ, ನೆಹರೂ ಯುವ ಕೇಂದ್ರವು ಗ್ರಾಮೀಣ ಯುವಜನರನ್ನು ಸಂಘಟಿಸುವಲ್ಲಿ ಪ್ರಮುಖ ಪಾತ್ರ ವಹಿಸುತ್ತದೆ. ಯುವಜನರು ಕ್ರೀಡಾ ಚಟುವಟಿಕೆಗಳಲ್ಲಿ ತೊಡಗಿಸಿಕೊಳ್ಳಲು ಸಹಕರಿಸುತ್ತಿದೆ ಎಂದರು.
ತಾಲ್ಲೂಕು ಯುವ ಒಕ್ಕೂಟದ ಅಧ್ಯಕ್ಷ ನವೀನ್ ದೇರಳ ಮಾತನಾಡಿ, ನಾಯಕತ್ವ ಗುಣಗಳನ್ನು ಬೆಳೆಸಿಕೊಳ್ಳಲು ನೆಹರೂ ಯುವ ಕೇಂದ್ರ ಸಹಕಾರಿಯಾಗಿದೆ. ಈ ಬಗ್ಗೆ ಶಿಬಿರಗಳನ್ನು ಆಯೋಜಿಸಲಾಗುತ್ತಿದೆ ಎಂದು ತಿಳಿಸಿದರು.
ನೆಹರೂ ಯುವ ಕೇಂದ್ರದ ನಿಕಟಪೂರ್ವ ಸ್ವಯಂ ಸೇವಕ ಎಂ.ವಿ.ವಿವೇಕ್, ಜಿಲ್ಲಾ ಯುವ ಒಕ್ಕೂಟದ ಕಾರ್ಯದರ್ಶಿ ಕೆ.ಕೆ.ಗಣೇಶ್, ನೆಹರೂ ಯುವ ಕೇಂದ್ರದ ಫ್ರಾನ್ಸಿಸ್, ಮಹೇಶ್ ಇದ್ದರು.
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.