ADVERTISEMENT

ಮಡಿಕೇರಿ | ನಾಲ್ವರು ಬೈಕ್ ಕಳವು ಆರೋಪಿಗಳ ಸೆರೆ, ಐದು ಬೈಕ್‌, ರಿವಾಲ್ವರ್‌ ವಶಕ್ಕೆ

​ಪ್ರಜಾವಾಣಿ ವಾರ್ತೆ
Published 19 ಮೇ 2020, 11:25 IST
Last Updated 19 ಮೇ 2020, 11:25 IST
ಬೈಕ್‌ ಕಳವು ಆರೋಪಿಗಳನ್ನು ಬಂಧಿಸಿದ ಮಡಿಕೇರಿ ನಗರ ಠಾಣೆ ಪೊಲೀಸರು
ಬೈಕ್‌ ಕಳವು ಆರೋಪಿಗಳನ್ನು ಬಂಧಿಸಿದ ಮಡಿಕೇರಿ ನಗರ ಠಾಣೆ ಪೊಲೀಸರು   

ಮಡಿಕೇರಿ: ಜಿಲ್ಲೆಯ ವಿವಿಧೆಡೆ ಬೈಕ್‌ ಕಳವು ಮಾಡಿ ಪರಾರಿಯಾಗಿ ಪೊಲೀಸರಿಗೇ ಇಷ್ಟು ದಿವಸ ಚಳ್ಳೆಹಣ್ಣು ತಿನ್ನಿಸುತ್ತಿದ್ದ ಆರೋಪಿಗಳ ತಂಡವನ್ನು ಕಡೆಗೂ ಮಡಿಕೇರಿ ನಗರ ಠಾಣೆಯ ಪೊಲೀಸರು ಪತ್ತೆಹಚ್ಚಿ ಬಂಧಿಸುವಲ್ಲಿ ಯಶಸ್ವಿ ಆಗಿದ್ದಾರೆ.

ತಾಲ್ಲೂಕಿನ ಮೂರ್ನಾಡು ಗ್ರಾಮ ಕೆ.ಬಿ.ಅರುಣ್‌, 2ನೇ ಮೊಣ್ಣಂಗೇರಿ ನಿವಾಸಿ ಸಚಿನ್ ಎಂ,. ಮೂರ್ನಾಡು ಗ್ರಾಮದ ಕಾರ್ತಿಕ್, ಐಕೊಳ ಗ್ರಾಮದ ಕೆ.ಆರ್‌.ವಾಸು ಬಂಧಿತರು.

ಜಿಲ್ಲೆಯ ವಿವಿಧೆಡೆ ಕಳವು ಮಾಡಿದ್ದ 5 ಬೈಕ್, ಒಂದು ರಿವಾಲ್ವರ್ ವಶಕ್ಕೆ ಪಡೆಯಲಾಗಿದೆ ಎಂದು ಜಿಲ್ಲಾ ಪೊಲೀಸ್‌ ವರಿಷ್ಠಾಧಿಕಾರಿ ಸುಮನ್‌ ಡಿ. ಪನ್ನೇಕರ್ ಅವರು ಮಂಗಳವಾರ ಪತ್ರಿಕಾಗೋಷ್ಠಿಯಲ್ಲಿ ಹೇಳಿದರು.

ಕಳೆದ ಜ.16ರಂದು ನಗರದ ಜಿಲ್ಲಾ ಆಸ್ಪತ್ರೆಯ ವಸತಿ ಗೃಹದ ಆವರಣದಲ್ಲಿ ಆಸ್ಪತ್ರೆಯ ಸಿಬ್ಬಂದಿಯೊಬ್ಬರ ಹೀರೋ ಹೋಂಡಾ ಬೈಕ್‌ ಕಳವು ಮಾಡಿರುವ ಸಂಬಂಧ ಪ್ರಕರಣ ದಾಖಲಾಗಿತ್ತು. ಇನ್ನೂ ವಿವಿಧೆಡೆ ಕಳವು ನಡೆದಿರುವ ಬಗ್ಗೆಯೂ ದೂರು ದಾಖಲಾಗಿದ್ದವು. ಅದರ ಜಾಡು ಹಿಡಿದು ಹೋದಾಗ ಆರೋಪಿಗಳು ಸೆರೆ ಸಿಕ್ಕಿದ್ದಾರೆ. ಇದೇ ತಂಡವು ಕಾಫಿ ಬೆಳೆಗಾರರೊಬ್ಬರ ಮನೆಯಲ್ಲಿ ರಿವಾಲ್ವಾರ್‌ ಸಹ ಕಳವು ಮಾಡಿತ್ತು. ಅದನ್ನೂ ವಶಕ್ಕೆ ಪಡೆಯಲಾಗಿದೆ ಎಂದು ಮಾಹಿತಿ ನೀಡಿದರು.

ನಗರ ಸಿ.ಪಿ.ಐ ನೇತೃತ್ವದಲ್ಲಿ ರಚಿಸಲಾಗಿದ್ದ ತನಿಖಾ ತಂಡವು ಬೈಕ್ ಕಳವು ಆರೋಪಿಗಳನ್ನು ಬಂಧಿಸಲು ಯಶಸ್ವಿಯಾಗಿದೆ ಎಂದು ಎಸ್‌ಪಿ ಮಾಹಿತಿ ನೀಡಿದರು.

ನಗರ ವೃತ್ತದ ಸಿಪಿಐ ಅನೂಪ್ ಮಾದಪ್ಪ, ನಗರ ಠಾಣೆ ಪಿಎಸ್‌ಐ ಅಂತಿಮ ಎಂ.ಟಿ, ಎಎಸ್‌ಐ ಹೊನ್ನಪ್ಪ, ಸಿಬ್ಬಂದಿ ಕಿರಣ್ , ಚರ್ಮಣ, ದಿನೇಶ್, ಶ್ರೀನಿವಾಸ, ಪ್ರವೀಣ್, ನಾಗರಾಜ್ ಕೆ., ಅರುಣ್ ಕುಮಾರ್, ಉತ್ತಪ್ಪ, ಸುನಿಲ್, ನಂದಕುಮಾರ್, ಓಮನ, ಭವಾನಿ, ಸೌಮ್ಯಾ, ಗಿರೀಶ್, ರಾಜೇಶ್ ಅವರು ಕಾರ್ಯಾಚರಣೆಯಲ್ಲಿ ಪಾಲ್ಗೊಂಡಿದ್ದರು ಎಂದು ಹೇಳಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.