ADVERTISEMENT

ಅಕಾಲಿಕ ಮಳೆ: ಕಾಫಿ ಬೆಳೆಗಾರರಿಗೆ ಅಪಾರ ನಷ್ಟ

​ಪ್ರಜಾವಾಣಿ ವಾರ್ತೆ
Published 7 ಜನವರಿ 2021, 10:47 IST
Last Updated 7 ಜನವರಿ 2021, 10:47 IST
ಮಳೆಯಿಂದ ಒದ್ದೆಯಾದ ಕಾಫಿಯನ್ನು ಕೊಡಗಿನ ನಾಪೋಕ್ಲುವಿನಲ್ಲಿ ಒಣಗಲು ಹಾಕಿರುವ ದೃಶ್ಯ
ಮಳೆಯಿಂದ ಒದ್ದೆಯಾದ ಕಾಫಿಯನ್ನು ಕೊಡಗಿನ ನಾಪೋಕ್ಲುವಿನಲ್ಲಿ ಒಣಗಲು ಹಾಕಿರುವ ದೃಶ್ಯ   

ಮಡಿಕೇರಿ: ಕೊಡಗು ಜಿಲ್ಲೆಯಲ್ಲಿ ಕಾಫಿ ಕೊಯ್ಲು ನಡೆಯುತ್ತಿದ್ದು, ಅಕಾಲಿಕ ಮಳೆಯಿಂದ ಬೆಳೆಗಾರರು ಸಂಕಷ್ಟಕ್ಕೆ ಸಿಲುಕಿದ್ದಾರೆ. ಮೋಡ ಕವಿದ ವಾತಾವರಣ, ಧಾರಾಕಾರ ಮಳೆಯಿಂದ ಬೆಳೆಗಾರರು ಕಂಗಾಲಾಗಿದ್ದಾರೆ.

ಕೊಯ್ಲು ಮಾಡದೆ ಗಿಡದಲ್ಲಿಯೇ ಉಳಿದಿರುವ ರೋಬಸ್ಟಾ ಕಾಫಿ ನೆಲಕ್ಕೆ ಉದುರುತ್ತಿದೆ. ಇನ್ನು ಕೊಯ್ಲು ಮಾಡಿರುವ ಕಾಫಿಯನ್ನು ಒಣಗಿಸುವುದು ಕಷ್ಟವಾಗಿದೆ. ಒಣಗಲು ಹಾಕಿದ ಕಾಫಿ, ಮಳೆಗೆ ನೆನೆದು ಕೊಳೆಯುತ್ತಿದೆ. ಬೆಳೆಗಾರರಿಗೆ ಅಪಾರ ನಷ್ಟವಾಗಿದೆ.

ಈ ಬಾರಿಯ ಕಾಫಿ ಕೊಯ್ಲಿಗೆ ಕಾರ್ಮಿಕರ ಕೊರತೆಯಾಗಿದೆ. ಲಾಕ್‌ಡೌನ್‌ ವೇಳೆ ಊರಿಗೆ ತೆರಳಿದ್ದ ಕಾರ್ಮಿಕರು ವಾಪಸ್‌ ಬಂದಿಲ್ಲ. ಸ್ಥಳೀಯವಾಗಿಯೂ ಕಾರ್ಮಿಕರು ಸಿಗುತ್ತಿಲ್ಲ. ಹೀಗಾಗಿ, ಕೊಯ್ಲು ವಿಳಂಬವಾಗುತ್ತಿದೆ ಎನ್ನುತ್ತಾರೆ ಬೆಳೆಗಾರರು.

ADVERTISEMENT

‘ದಿಢೀರ್ ಮಳೆ ಸುರಿದರೆ ಒಣಗಲು ಹಾಕಿದ ಕಾಫಿ ಸಂರಕ್ಷಿಸಲು ಸಾಧ್ಯವಾಗುವುದಿಲ್ಲ. ಕಾಫಿಯ ಗುಣಮಟ್ಟವು ಕುಸಿದರೆ ಉತ್ತಮ ಧಾರಣೆ ಸಹ ಸಿಗುವುದಿಲ್ಲ. ತೇವಾಂಶವಿದ್ದರೆ ವ್ಯಾಪಾರಸ್ಥರು ಖರೀದಿಸುವುದಿಲ್ಲ. ಅಕಾಲಿಕ ಮಳೆಯಿಂದ ಅವಧಿಗೂ ಮೊದಲೇ ಕಾಫಿ ಹೂವು ಅರಳುವ ಸಾಧ್ಯತೆಯೂ ಇದೆ’ ಎಂದು ಸೋಮವಾರಪೇಟೆಯ ಗಿರೀಶ್‌ ನೋವು ತೋಡಿಕೊಳ್ಳುತ್ತಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.