
ವಿರಾಜಪೇಟೆ: ‘ಪ್ರತಿ ಮಗುವಿಗೂ ಮೌಲ್ಯಯುತ ಶಿಕ್ಷಣ ನೀಡಬೇಕು’ ಎಂದು ಸಮೀಪದ ಅರಮೇರಿಯ ಕಳಂಚೇರಿ ಮಠದ ಪೀಠಾಧಿಪತಿ ಶಾಂತಮಲ್ಲಿಕಾರ್ಜುನ ಸ್ವಾಮೀಜಿ ಹೇಳಿದರು.
ಸಮೀಪದ ಅರಮೇರಿ ಕಳಂಚೇರಿ ಮಠದ ಲಿಂಗರಾಜೇಂದ್ರ ಭವನದಲ್ಲಿ ಭಾನುವಾರ ನಡೆದ ಹೊಂಬೆಳಕು ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿ ಮಾತನಾಡಿ, ‘ಪ್ರತಿಯೊಬ್ಬರು ಭೂಮಿಯ ಸ್ವಚ್ಚತೆ ಹಾಗೂ ಸೌಂದರ್ಯ ಕಾಪಾಡಬೇಕು. ಮುಂದಿನ ಪೀಳಿಗೆಗೆ ಪರಿಸರವನ್ನು ಉಳಿಸಿ ಬೆಳೆಸುವಂತಾಗಬೇಕು’ ಎಂದರು.
ಗೋಣಿಕೊಪ್ಪಲಿನ ಲೇಖಕಿ ಕೆ.ಟಿ.ವಾತ್ಸಲ್ಯ ಮಾತನಾಡಿ, ‘ಜಗತ್ತಿನಲ್ಲಿ ಶಾಂತಿ ಮೂಡಿಸುವಲ್ಲಿ ಶಿಕ್ಷಣದ ಪಾತ್ರ ಮಹತ್ವವಾದದ್ದು. ಭಾರತ ದೇಶ ವಿಶೇಷವಾದ ಸಂಸ್ಕೃತಿಯನ್ನು ಹೊಂದಿದೆ’ ಎಂದರು.
ಕೃಷಿಕರಾದ ಆಶಾ ತಿಮ್ಮಪ್ಪಯ್ಯ ಕಾರ್ಯಕ್ರಮಕ್ಕೆ ಚಾಲನೆ ನೀಡಿ ಮಾತನಾಡಿದರು.
ಜಿಲ್ಲಾ ಪಂಚಾಯಿತಿ ಮಾಜಿ ಸದಸ್ಯೆ ಕಾಂತಿ ಸತೀಶ್, ಕೃಷಿಕ ತಿಮ್ಮಪ್ಪಯ್ಯ, ನಿವೃತ್ತ ಶಿಕ್ಷಕ ಲಕ್ಷ್ಮೀ ನಾರಾಯಣ, ನರಸಿಂಹನ್ ಮಾತನಾಡಿದರು.