ಸುಂಟಿಕೊಪ್ಪ: ಇಲ್ಲಿನ ಮಾದಾಪುರ ರಸ್ತೆಯಲ್ಲಿರುವ ನಾಡ ಕಚೇರಿಗೆ ತೆರಳುವ ರಸ್ತೆ ಗುಂಡಿ ಬಿದ್ದಿದ್ದು, ವಾಹನ ಚಾಲಕರಿಗೆ ಅಪಾಯವೊಡ್ಡುತ್ತಿದೆ.
ಕಳೆದೆರಡು ವರ್ಷಗಳ ಹಿಂದೆ ರಸ್ತೆ ಕಾಮಗಾರಿ ಮಾಡಲಾಗಿದ್ದು, ಇದೀಗ ಗುಂಡಿ ಬಿದ್ದು ಬೈಕು, ಕಾರುಗಳು ಓಡಾಡಲು ಅಡ್ಡಿಯಾಗಿದೆ.
ಈ ರಸ್ತೆಯ ಮೂಲಕ ನಾಡಕಚೇರಿ ಹಾಗೂ ಕೃಷಿ ಇಲಾಖೆಗೆ ಪ್ರತಿನಿತ್ಯ ನೂರಾರು ಸಂಖ್ಯೆಯಲ್ಲಿ ಜನ ಸಂಚರಿಸುತ್ತಾರೆ. ಕೆಲಸಕ್ಕೆ ತೆರಳುವ ಬಹಳಷ್ಟು ಮಂದಿ ಬೈಕು ಸವಾರರು ನಿಯಂತ್ರಣ ತಪ್ಪಿ, ಕೆಳಗೆ ಬಿದ್ದು ಗಾಯಗೊಂಡಿದ್ದಾರೆ. ಈ ರಸ್ತೆಯಲ್ಲಿ ಕಾರು ನಿಯಂತ್ರಣ ತಪ್ಪಿ, ಅಡ್ಡಾದಿಡ್ಡಿ ಸಂಚರಿಸಿ ಸಣ್ಣಪುಟ್ಟ ಅಪಘಾತಗಳು ಸಂಭವಿಸಿವೆ. ಮಹಿಳೆಯರಂತೂ ತಮ್ಮ ದ್ವಿಚಕ್ರ ವಾಹನವನ್ನು ಮುಖ್ಯರಸ್ತೆಯಲ್ಲಿ ನಿಲ್ಲಿಸಿ ತಾವು ಹಾಗೂ ತಮ್ಮೊಂದಿಗೆ ಕರೆತರುವ ವೃದ್ಧರನ್ನು ಕಷ್ಟದಿಂದ ಕಾಲ್ನಡಿಗೆಯಲ್ಲಿ ಈ ಇಲಾಖೆಗೆ ಕರೆ ತರುವುದು ಸರ್ವೆಸಾಮಾನ್ಯವಾಗಿದೆ.
ಗ್ರಾಮ ಪಂಚಾಯಿತಿಗೆ ಮನವಿ ಸಲ್ಲಿಸಿದರೂ ಯಾವುದೇ ಪ್ರಯೋಜನವಾಗುತ್ತಿಲ್ಲ ಎನ್ನುತ್ತಾರೆ ನಾಗರಿಕರು.
ನಾಡ ಕಚೇರಿಗೆ ತೆರಳುವ ರಸ್ತೆಯು ಹದಗೆಟ್ಟಿರುವುದು ನಮ್ಮ ಗಮನಕ್ಕೂ ಬಂದಿದ್ದು, ಮಳೆ ನಿಂತ ಕೂಡಲೇ ಗ್ರಾಮ ಪಂಚಾಯಿತಿ ನಿಧಿಯಿಂದ ಈ ರಸ್ತೆಯ ಕಾಮಗಾರಿ ಮಾಡಲಾಗುವುದು ಎಂದು ಗ್ರಾಮ ಪಂಚಾಯಿತಿ ಅಧ್ಯಕ್ಷ ಪಿ.ಆರ್.ಸುನಿಲ್ ಕುಮಾರ್ ‘ಪ್ರಜಾವಾಣಿ’ಗೆ ಪ್ರತಿಕ್ರಿಯೆ ನೀಡಿದರು.
ನಾಡಕಚೇರಿಗೆ ಬರುವವರಿಗೆ ಈ ರಸ್ತೆಯಲ್ಲಿನ ಗುಂಡಿಗಳಿಂದ ಅಪಾಯ ಕಟ್ಟಿಟ್ಟ ಬುತ್ತಿಯಾಗಿದೆ. ಗುರುವಾರ ಕಾರೊಂದು ರಸ್ತೆ ಗುಂಡಿಯಿಂದ ನಿಯಂತ್ರಣ ತಪ್ಪಿ ರಾಜ್ಯ ಹೆದ್ದಾರಿಯಲ್ಲಿ ಬರುತ್ತಿದ್ದ ವಾಹನಕ್ಕೆ ಡಿಕ್ಕಿಯಾಗಿದೆ. ಸಂಬಂಧಪಟ್ಟ ಅಧಿಕಾರಿಗಳು ಕೂಡಲೇ ಗಮನಹರಿಸಿ, ರಸ್ತೆ ಗುಂಡಿಗೆ ಮುಕ್ತಿ ಕಾಣಿಸಬೇಕು
ಅಬ್ದುಲ್ ರಜಾಕ್, ಹೊಸ ಬಡಾವಣೆಯ ನಿವಾಸಿ
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.