ADVERTISEMENT

ಕೊಡಗು | ಸಿಹಿಗೆಣಸು ಧಾರಣೆ ಕುಸಿತ

ಕೆಜಿ ಒಂದಕ್ಕೆ ₹35ರಿಂದ 40ರ ಆಸುಪಾಸಿನಲ್ಲಿದ್ದ ಬೆಲೆ, ಈಗ ಕೇವಲ ₹6

ಡಿ.ಪಿ.ಲೋಕೇಶ್
Published 12 ಜೂನ್ 2025, 3:12 IST
Last Updated 12 ಜೂನ್ 2025, 3:12 IST
ಸೋಮವಾರಪೇಟೆ ತಾಲ್ಲೂಕಿನ ಎರಪಾರೆ ಗ್ರಾಮದ ನಾಗೇಶ್ ಅವರು ಬೆಳೆದಿರುವ ಸಿಹಿಗೆಣಸಿನ ಫಸಲನ್ನು ಟ್ರಾಕ್ಟರ್ ಮೂಲಕ ಹೊರ ತೆಗೆಯುತ್ತಿರುವುದು 
ಸೋಮವಾರಪೇಟೆ ತಾಲ್ಲೂಕಿನ ಎರಪಾರೆ ಗ್ರಾಮದ ನಾಗೇಶ್ ಅವರು ಬೆಳೆದಿರುವ ಸಿಹಿಗೆಣಸಿನ ಫಸಲನ್ನು ಟ್ರಾಕ್ಟರ್ ಮೂಲಕ ಹೊರ ತೆಗೆಯುತ್ತಿರುವುದು    

ಸೋಮವಾರಪೇಟೆ (ಕೊಡಗು ಜಿಲ್ಲೆ): ಪ್ರತಿ ಕೆ.ಜಿಗೆ ₹35ರಿಂದ ₹40ರ ಆಸುಪಾಸಿನಲ್ಲಿದ್ದ ಸಿಹಿ ಗೆಣಸಿನ ದರ ಕೇವಲ ₹6ಕ್ಕೆ ಕುಸಿದಿದೆ.

ತಾಲ್ಲೂಕಿನ ಬಾಣವಾರ, ಗಣಗೂರು, ಎರಪಾರೆ, ಗೋಣಿಮರೂರು, ಅಬ್ಬೂರುಕಟ್ಟೆ, ಅಳುವಾರ ಸೇರಿ ಕಡಿಮೆ ಮಳೆ ಬೀಳುವೆಡೆ ರೈತರು ಗೆಣಸು ಬೆಳೆದಿದ್ದಾರೆ. ಫಸಲನ್ನು 6 ತಿಂಗಳ ನಂತರ ಕೀಳಲಾರಂಭಿಸಿ 8 ತಿಂಗಳವರೆಗೆ ಕಾಯ್ದುಕೊಳ್ಳಬಹುದಾರೂ, ದರ ಕುಸಿದಿರುವುದರಿಂದ ಸಂಪೂರ್ಣವಾಗಿ ಕೀಳಲೇಬೇಕಾಗಿದೆ. ಹುಳು ಕಾಟ, ಇಲಿ ಹೆಗ್ಗಣ, ಕಾಡು ಪ್ರಾಣಿಗಳಿಂದಲೂ ರಕ್ಷಿಸಿಕೊಳ್ಳಬೇಕು.

‘ವರ್ಷಕ್ಕೆರಡು ಬಾರಿ ಬೆಳೆಯುವ ಸಿಹಿಗೆಣಸು ಹೆಚ್ಚಿನ ನೀರು ಬೇಡುವುದಿಲ್ಲ. ಬಳ್ಳಿಯನ್ನು ನೆಟ್ಟು, ನೀರು ಹಾಯಿಸಿ, ನಿಯಮಿತವಾಗಿ ಗೊಬ್ಬರ ಹಾಕಿದರೆ 6 ತಿಂಗಳಲ್ಲಿ ಸಿದ್ಧವಾಗುತ್ತದೆ. ಆಗ  ಬೆಲೆ ಎಷ್ಟಿದ್ದರೂ ಮಾರಬೇಕಾಗುತ್ತದೆ’ ಎನ್ನುತ್ತಾರೆ ಗಣಗೂರಿನ ಋಷಿ.

ADVERTISEMENT

‘ಗೆಣಸನ್ನು ಚಿಪ್ಸ್, ಪೌಡರ್‌ ನಿರ್ಮಾಣಕ್ಕೆಂದು ಮಂಗಳೂರು, ಕೇರಳಕ್ಕೆ ಸಾಗಿಸಲಾಗುತ್ತದೆ. ಸಂಗ್ರಹಿಸಿಡಲು ಶೀತಲೀಕರಣ ವ್ಯವಸ್ಥೆ ಇದ್ದರೆ ಮಾತ್ರ ಲಾಭವಾಗುತ್ತದೆ’ ಎಂಬುದು ಗೋಣಿಮರೂರಿನ ಹರೀಶ್‌ ಅಭಿಮತ. 

ಸೋಮವಾರಪೇಟೆ ತಾಲ್ಲೂಕಿನ ಎರಪಾರೆ ಗ್ರಾಮದಲ್ಲಿ ಬೆಳೆದಿರುವ ಗೆಣಸನ್ನು ಸಂಗ್ರಹಿಸುತ್ತಿರುವ ಕಾರ್ಮಿಕರು.
ಯರಪಾರೆ ಗ್ರಾಮದ ರೈತ ನಾಗೇಶ್ 

ತಾಲ್ಲೂಕಿನಲ್ಲಿ 57 ಹೆಕ್ಟೇರ್ ಪ್ರದೇಶದಲ್ಲಿ ಕೃಷಿ

ಜಿಲ್ಲೆಯಲ್ಲಿ ಸಿಹಿಗೆಣಸನ್ನು ಸುಮಾರು 150 ಹೆಕ್ಟೇರ್ ಪ್ರದೇಶದಲ್ಲಿ ಮಾತ್ರ ಬೆಳೆಯಲಾಗುತ್ತದೆ. ಸೋಮವಾರಪೇಟೆ ತಾಲ್ಲೂಕಿನ ಗಣಗೂರು ನೇರುಗಳಲೆ ಅಲೂರು ಸಿದ್ದಾಪುರ ಗ್ರಾಮ ಪಂಚಯಿತಿ ವ್ಯಾಪ್ತಿಯಲ್ಲಿ ಹಾಗೂ ಕುಶಾಲನಗರದ ಶಿರಂಗಾಲ ತೊರೆನೂರು ಹೆಬ್ಬಾಲೆ ಸೇರಿದಂತೆ ಕೆಲವು ಗ್ರಾಮ ಪಂಚಾಯಿತಿ ವ್ಯಾಪ್ತಿಯಲ್ಲಿ ಬೆಳೆಯುತ್ತಾರೆ. ಪ್ರಸಕ್ತ ಸಾಲಿನಲ್ಲಿ ಸೋಮವಾರಪೇಟೆ ತಾಲ್ಲೂಕಿನಲ್ಲಿ 57 ಹೆಕ್ಟೇರ್ ಪ್ರದೇಶದಲ್ಲಿ ಸಿಹಿಗೆಣಸಿನ ಕೃಷಿ ಮಾಡಲಾಗಿದೆ ಎಂದು ತೋಟಗಾರಿಕಾ ಇಲಾಖೆಯ ಹಿರಿಯ ಸಹಾಯಕ ಅಧಿಕಾರಿ ಪಣೀಂದ್ರ ತಿಳಿಸಿದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.