
ವಿರಾಜಪೇಟೆ ಸಮೀಪದ ಚೆನ್ನಯ್ಯನಕೋಟೆಯ ಜಮಾಅತ್ ಆಶ್ರಯದಲ್ಲಿ ನಡೆಯುವ ಹಜ್ಹರತ್ ನಜ್ಹರ್ ಮೊಹಿದ್ದೀನ್ ಶಾವಲಿಯವರ ವಾರ್ಷಿಕ ಉರುಸ್ನಲ್ಲಿ ಮಂಗಳವಾರ ಆಯೋಜಿಸಲಾಗಿದ್ದ ಸೌಹಾರ್ದ ಸಮ್ಮೇಳನದಲ್ಲಿ ತಾಲ್ಲೂಕು ಕೆ.ಡಿ.ಪಿ ಸದಸ್ಯ ಕೋಳುಮಂಡ ರಫೀಕ್ ಅವರು ಮಾತನಾಡಿದರು
ವಿರಾಜಪೇಟೆ:‘ಸಾರ್ವಜನಿಕರ ಒಂದುಗೂಡುವಿಕೆಯ ಉದ್ದೇಶಕ್ಕಾಗಿ ಕೊಡಗಿನ ಹಲವೆಡೆ ನಡೆಯುವ ಉರುಸ್ ಸಮಾಜದಲ್ಲಿ ಸೌಹಾರ್ದ, ಸಾಮರಸ್ಯ ಹೆಚ್ಚಿಸುವಲ್ಲಿ ಪ್ರಮುಖ ಪಾತ್ರ ವಹಿಸುತ್ತಿದೆ’ ಎಂದು ತಾಲ್ಲೂಕು ಕೆ.ಡಿ.ಪಿ ಸದಸ್ಯ ಕೋಳುಮಂಡ ರಫೀಕ್ ಹೇಳಿದರು.
ಸಮೀಪದ ಪಾಲಿಬೆಟ್ಟ ಬಳಿಯ ಚೆನ್ನಯ್ಯನಕೋಟೆಯ ಜಮಾಅತ್ ಆಶ್ರಯದಲ್ಲಿ ನಡೆಯುವ ಹಜ್ಹರತ್ ನಜ್ಹರ್ ಮೊಹಿದ್ದೀನ್ ಶಾವಲಿಯವರ ವಾರ್ಷಿಕ ಉರುಸ್ ಸಮಾರೋಪದ ಅಂಗವಾಗಿ ಮಂಗಳವಾರ ಆಯೋಜಿಸಲಾಗಿದ್ದ ಸೌಹಾರ್ದ ಸಮ್ಮೇಳನದಲ್ಲಿ ಅವರು ಮಾತನಾಡಿದರು.
‘ಜಿಲ್ಲೆಯ ಹಲವೆಡೆ ನಡೆಯುವ ಉರುಸ್ಗಳಲ್ಲಿ ಹಿಂದೂ- ಮುಸಲ್ಮಾನ ಸಮುದಾಯವರು ಮತಭೇದವನ್ನು ಮರೆತು ಒಂದಾಗಿ ಭಾಗವಹಿಸುತ್ತಾರೆ. ಹೀಗಾಗಿ ಜಿಲ್ಲೆಯ ಬಹುತೇಕ ಉರುಸ್ ಹಿಂದೂ- ಮುಸ್ಲಿಂ ಸಾಮರಸ್ಯಕ್ಕೆ ಸಾಕ್ಷಿಯಾಗಿದೆ. ಜನ ಸಮುದಾಯಗಳ ನಡುವೆ ಭಾವೈಕ್ಯವನ್ನು ಮೂಡಿಸುವಲ್ಲಿ ಹಾಗೂ ವಿವಿಧ ಕೋಮುಗಳ ನಡುವೆ ಸಾಮರಸ್ಯವನ್ನು ಸಾರುವಲ್ಲಿ ಯಶಸ್ವಿಯಾಗಿದೆ. ಈ ರೀತಿಯ ಆಚರಣೆಗಳೇ ನಿಜವಾದ ಭಾವೈಕ್ಯತೆಯ ಸಂಗಮ. ಎಲ್ಲ ಧರ್ಮಗಳು ಶ್ರೇಷ್ಠ ಎಂದು ತಿಳಿದಾಗ ಮಾತ್ರವೇ ಇಲ್ಲಿನ ಧರ್ಮ, ಸಂಪ್ರದಾಯ ಹಾಗೂ ಭಾಷೆಗಳ ಬಗ್ಗೆ ಗೌರವ ಭಾವನೆ ಮೂಡುತ್ತದೆ’ ಎಂದರು.
ಚೆನ್ನಯ್ಯನಕೋಟೆಯ ಜುಮಾ ಮಸೀದಿಯ ಧರ್ಮಗುರು ಮೊಹಮ್ಮದ್ ನಾಝೀರ್ ರಜ್ವಿ ಅವರು ಸೌಹಾರ್ದ ಸಮ್ಮೇಳನವನ್ನು ಉದ್ಘಾಟಿಸಿದರು. ಕಾಂಗ್ರೆಸ್ ಅಲ್ಪಸಂಖ್ಯಾತರ ಘಟಕದ ಜಿಲ್ಲಾ ಅಧ್ಯಕ್ಷ ಪಿ.ಎ. ಹನೀಫ್ ಮಾತನಾಡಿದರು. ಚೆನ್ನಯ್ಯನಕೋಟೆ ಜುಮಾ ಮಸೀದಿ ಆಡಳಿತ ಮಂಡಳಿ ಅಧ್ಯಕ್ಷ ಜವಾದುಲ್ ರೆಹಮಾನ್ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದರು.
ವೇದಿಕೆಯಲ್ಲಿ ಚೆನ್ನಯ್ಯನಕೋಟೆ ಗ್ರಾಮ ಪಂಚಾಯಿತಿ ಉಪಾಧ್ಯಕ್ಷ ವಿಜು, ಸದಸ್ಯರಾದ ನಾಗರಾಜು, ಹೊಳಮಾಲ ಜುಮಾ ಮಸೀದಿ ಆಡಳಿತ ಮಂಡಳಿ ಅಧ್ಯಕ್ಷರಾದ ಮುಸ್ತಫಾ, ಅಲ್ಲಿನ ಜುಮಾ ಮಸೀದಿಯ ಖತೀಬರಾದ ಬಶೀರ್ ಸಖಾಫಿ, ಸಮಾಜ ಸೇವಕ ಮನು, ರವೀಂದ್ರ ಭಾವೆ, ಚೆನ್ನಯ್ಯನಕೋಟೆ ಜುಮ್ಮಾ ಮಸೀದಿ ಕಾರ್ಯದರ್ಶಿ ಫೈರೋಜ್ ಖಾನ್ ಉಪಸ್ಥಿತರಿದ್ದರು. ಕೋಳುಮಂಡ ರಫೀಕ್ ಮತ್ತು ಹನೀಫ್ ಅವರ ಸಮುದಾಯ ಸೇವೆಯನ್ನು ಪರಿಗಣಿಸಿ ಚೆನ್ನಯ್ಯನಕೋಟೆ ಅವರನ್ನು ಜಮಾಅತ್ ಪರವಾಗಿ ಸನ್ಮಾನಿಸಲಾಯಿತು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.