ನಾಪೋಕ್ಲು (ಕೊಡಗು): ಸಮೀಪದ ಯವಕಪಾಡಿ ಗ್ರಾಮದಲ್ಲಿ ಕಾಡಾನೆಯೊಂದು ದಾಂದಲೆ ನಡೆಸಿದ್ದು ಗ್ರಾಮಸ್ಥರು ಭೀತಿಗೆ ಒಳಗಾಗಿದ್ದಾರೆ.
ಯವಕಪಾಡಿ ಗ್ರಾಮದ ನಾಲ್ಕುನಾಡು ಅರಮನೆಯ ಬಳಿಯಿರುವ ಸರ್ಕಾರಿ ಶಾಲೆಯ ಪಿಲ್ಲರ್ಗಳನ್ನೇ ಶನಿವಾರ ಬೆಳಿಗ್ಗೆ ಗುದ್ದಿ ಪುಡಿಗಟ್ಟಿರುವ ಕಾಡಾನೆ, ರಾಜು ಎಂಬುವರ ಮಾರುತಿ ವ್ಯಾನಿಗೂ ಹಾನಿ ಮಾಡಿದೆ. ಬಳಿಕ ರಾಜನ್ ಅವರ ಮನೆ ಚಾವಣಿಗೂ ಕಿತ್ತು ಹಾಕಿದೆ.ಶುಕ್ರವಾರ ರಾತ್ರಿಯೂ ಪುಂಡಾಟಿಕೆ ತೋರಿದ್ದ ಆನೆಯು ತಂತಿ ಬೇಲಿಯನ್ನು ಕಿತ್ತು ಎಸೆದಿತ್ತು.
ನಾಲ್ಕುನಾಡು ವ್ಯಾಪ್ತಿಯಲ್ಲಿ ಕಾಡಾನೆಗಳ ಹಾವಳಿ ಮಿತಿಮೀರಿದ್ದು ಸಮಸ್ಯೆ ಮಿತಿಮೀರಿದೆ. ಕಕ್ಕಬ್ಬೆ ವ್ಯಾಪ್ತಿಯಲ್ಲಿ ಆನೆಗಳ ಉಪಟಳದಿಂದ ಬೆಳೆಗಾರರು ರೋಸಿ ಹೋಗಿದ್ದಾರೆ. ಕೆಲವು ದಿನಗಳಿಂದ ಗ್ರಾಮದಲ್ಲಿ ಕಾಡಾನೆಗಳ ಹಿಂಡು ತೋಟಗಳಲ್ಲಿ ಅಡ್ಡಾಡುತ್ತಿದ್ದು ಫಸಲನ್ನು ಧ್ವಂಸ ಮಾಡಿದ್ದವು. ಸ್ಥಳೀಯರ ಮನವಿ ಮೇರೆಗೆ ಸ್ಥಳಕ್ಕೆ ಬಂದ ಕ್ಷಿಪ್ರ ಕಾರ್ಯಾಚರಣೆ ಪಡೆ ಹಾಗೂ ಅರಣ್ಯ ಇಲಾಖೆ ಸಿಬ್ಬಂದಿ ಒಂದು ಮರಿಯಾನೆ ಸೇರಿದಂತೆ ಏಳು ಕಾಡಾನೆಗಳನ್ನು ಕಾರ್ಯಾಚರಣೆ ನಡೆಸಿ ಕಾಡಿಗೆ ಅಟ್ಟಲಾಗಿತ್ತು. ಇದೀಗ ಕಾಡಾನೆಯೊಂದು ಗ್ರಾಮಕ್ಕೆ ಮತ್ತೆ ದಾಳಿ ಮಾಡಿ ಪುಂಡಾಟ ತೋರುತ್ತಿದೆ.
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.