ADVERTISEMENT

ಬೆಂಗಳೂರು–ಚೆನ್ನೈ ಎಕ್ಸ್‌ಪ್ರೆಸ್‌ ವೇ: ಬಂಗಾರಪೇಟೆ ಬಳಿ ವೈ-ಸ್ಪೇಸ್‌ ಮಿನಿ ನಗರ

​ಪ್ರಜಾವಾಣಿ ವಾರ್ತೆ
Published 7 ಅಕ್ಟೋಬರ್ 2025, 0:45 IST
Last Updated 7 ಅಕ್ಟೋಬರ್ 2025, 0:45 IST
ಬೆಂಗಳೂರು-ಚೆನ್ನೈ ಎಕ್ಸ್‌ಪ್ರೆಸ್‌ ವೇನಲ್ಲಿ ನಿರ್ಮಾಣವಾಗಲಿರುವ ವಿವಿಧ ಸೌಲಭ್ಯ ಒಳಗೊಂಡಿರುವ ಕೇಂದ್ರದ ನೀಲನಕ್ಷೆ
ಬೆಂಗಳೂರು-ಚೆನ್ನೈ ಎಕ್ಸ್‌ಪ್ರೆಸ್‌ ವೇನಲ್ಲಿ ನಿರ್ಮಾಣವಾಗಲಿರುವ ವಿವಿಧ ಸೌಲಭ್ಯ ಒಳಗೊಂಡಿರುವ ಕೇಂದ್ರದ ನೀಲನಕ್ಷೆ   

ಕೋಲಾರ: ಬೆಂಗಳೂರು–ಚೆನ್ನೈ ಎಕ್ಸ್‌ಪ್ರೆಸ್‌ ವೇ ಕಾರಿಡಾರ್‌ನಲ್ಲಿ ಪ್ರಯಾಣಿಕರು ವಿಶ್ರಾಂತಿ ಪಡೆದು ಮುಂದೆ ಸಾಗಲು, ಹೆದ್ದಾರಿ ಮಧ್ಯೆ ಊಟ ತಿಂಡಿ ಸವಿಯಲು, ಆಟ–ಮನರಂಜನೆ ಪಡೆಯಲು ವಿವಿಧ ಸೌಲಭ್ಯಗಳುಳ್ಳ ‘ಮಿನಿ ನಗರ’ ಕೆಲವೇ ತಿಂಗಳಲ್ಲಿ ತಲೆ ಎತ್ತಲಿದೆ.

ಬಂಗಾರಪೇಟೆ ತಾಲ್ಲೂಕಿನ ಐತಾಂಡಹಳ್ಳಿ ಬಳಿ (ಬಂಗಾರಪೇಟೆ–ಕೆಜಿಎಫ್‌ ನಡುವೆ) ಹಾದು ಹೋಗಿರುವ ಈ ಕಾರಿಡಾರ್‌ನಲ್ಲಿ 30 ಎಕರೆ ಪ್ರದೇಶದಲ್ಲಿ ವೈ–ಸ್ಪೇಸ್‌ ಸಂಸ್ಥೆಯು ‘ವೇಸೈಡ್‌ ಫೆಸಿಲಿಟಿ’ ಸ್ಥಾಪಿಸಲಿದ್ದು ಕಾಮಗಾರಿಗೆ ಗಣ್ಯರು ಸೋಮವಾರ ಭೂಮಿಪೂಜೆ ನೆರವೇರಿಸಿದರು.

ಈ ಮಾರ್ಗದಲ್ಲಿ ಆರಾಮದಾಯಕ ಪ್ರಯಾಣ ಕಲ್ಪಿಸಲು ಫುಡ್‌ ಕೋರ್ಟ್‌ಗಳು, ಫ್ಯಾಕ್ಟರಿ ಔಟ್‌ಲೆಟ್ ಮಾಲ್, ಇಂಧನ ಕೇಂದ್ರ (ಪೆಟ್ರೋಲ್‌ ಬಂಕ್‌), ಇ–ಚಾರ್ಜಿಂಗ್‌ ಕೇಂದ್ರ, ಡ್ರೈವ್-ಥ್ರೂ ರೆಸ್ಟೋರೆಂಟ್‌, ಮಕ್ಕಳ ಆಟದ ವಲಯ, ಹೋಟೆಲ್, ರೆಸಾರ್ಟ್‌, ಪಾರ್ಕಿಂಗ್‌ ಪ್ರದೇಶವನ್ನು ಈ ಕೇಂದ್ರ ಒಳಗೊಂಡಿರಲಿದೆ.

ADVERTISEMENT

ವಿಶ್ವದರ್ಜೆಯ ಸೌಲಭ್ಯಗಳನ್ನು ಒಳಗೊಂಡಂತೆ ಈ ಮಿನಿ ನಗರದ ಸಮಗ್ರ ಅಭಿವೃದ್ಧಿಯನ್ನು ವೈ-ಸ್ಪೇಸ್ ಸಂಸ್ಥೆ ಕೈಗೊಳ್ಳಲಿದೆ.

ಈ ಎಕ್ಸ್‌ಪ್ರೆಸ್‌ವೇ ಕಾರಿಡಾರ್‌ ಉದ್ದಕ್ಕೂ ಮೂರು ಸ್ಥಳಗಳಲ್ಲಿ ವೇಸೈಡ್ ಸೌಲಭ್ಯಗಳಿಗಾಗಿ ವಿಎಸ್‌ಎಸ್‌ ಹಾಗೂ ವೈಎಸ್‌ಇಐಎಲ್‌ ಸಂಸ್ಥೆಗಳು ಭಾರತೀಯ ರಾಷ್ಟ್ರೀಯ ಹೆದ್ದಾರಿ ಪ್ರಾಧಿಕಾರದಿಂದ (ಎನ್‌ಎಚ್ಎಐ) ಜಂಟಿ ಟೆಂಡರ್ ಪಡೆದುಕೊಂಡಿವೆ.

ತಲಾ 30 ಎಕರೆ ಪ್ರದೇಶದಲ್ಲಿ ಬಂಗಾರಪೇಟೆ, ಚಿತ್ತೂರು ಹಾಗೂ ಕಾಂಚೀಪುರಂನಲ್ಲಿ ವಿವಿಧ ಸೌಲಭ್ಯವಿರುವ ಇಂಥ ಕೇಂದ್ರ ನಿರ್ಮಿಸಲಾಗುತ್ತಿದೆ. ದೇಶದಲ್ಲೇ ಅತಿ ಹೆಚ್ಚು ಎತ್ತರದ (144.9 ಅಡಿ) ಆಂಜನೇಯ ವಿಗ್ರಹ ಕೂಡ ಇಲ್ಲಿ ತಲೆ ಎತ್ತಲಿದೆ.

ಈ ಕೇಂದ್ರದ ಆವರಣದಲ್ಲಿ ಸೋಮವಾರ ಭೂಮಿಪೂಜೆ ನಡೆಯಿತು. ಬಳಿಕ ನಡೆದ ವೇದಿಕೆ ಕಾರ್ಯಕ್ರಮಕ್ಕೆ ಹೊಸಕೋಟೆ ಶಾಸಕ ಶರತ್‌ ಬಚ್ಚೇಗೌಡ ಚಾಲನೆ ನೀಡಿದರು.

ವೇ–ಸ್ಪೇಸ್‌ ಕಲ್ಪಿಸುತ್ತಿರುವ ಈ ಸೌಲಭ್ಯದಿಂದ ಈ ಭಾಗದ 500ಕ್ಕೂ ಅಧಿಕ ಮಂದಿಗೆ ಉದ್ಯೋಗ ಸಿಗಲಿದೆ. ಮುಂದಿನ ದಸರೆಗೆ ಉದ್ಘಾಟನೆ ಆಗಲಿದೆ. ರಾಜ್ಯ ಸರ್ಕಾರದಿಂದ ‌ಎಲ್ಲಾ ರೀತಿಯ ಸಹಕಾರ ನೀಡಲಾಗುವುದು ಎಂದರು.

ವೈ-ಸ್ಪೇಸ್‌ ಸಂಸ್ಥೆಯ ಅಧ್ಯಕ್ಷ ಮತ್ತು ವ್ಯವಸ್ಥಾಪಕ ಪಾಲುದಾರ ವೈ.ವಿ.ರತ್ನಕುಮಾರ್, ‘ಈ ಭಾಗದಲ್ಲಿ ಹೋಟೆಲ್‌, ರೆಸಾರ್ಟ್, ಆಟದ ವಲಯ ಸೇರಿ ಎಲ್ಲ ವ್ಯವಸ್ಥೆ ಇರಲಿದೆ. ಕನ್ಯಾಕುಮಾರಿಯಿಂದ ಕಾಶ್ಮೀರದವರೆಗಿನ ಎಲ್ಲಾ ತಿಂಡಿ ತಿನಿಸು ಸಿಗಲಿವೆ’ ಎಂದರು.

ರಾಷ್ಟ್ರೀಯ ಹೆದ್ದಾರಿ ಪ್ರಾಧಿಕಾರದ ಪ್ರಧಾನ ವ್ಯವಸ್ಥಾಪಕ (ತಂತ್ರಜ್ಞಾನ) ವಿ.ಪಿ.ಬ್ರಹ್ಮಾಂಕರ್, ಎನ್‌ಎಚ್‌ಎಲ್‌ಎಂಎಲ್‌ ಪ್ರಾದೇಶಿಕ ಅಧಿಕಾರಿ ಎಸ್.ಪಿ.ಸೋಮಶೇಖರ್, ಬೆಂಗಳೂರು–ಚೆನ್ನೈ ಎಕ್ಸ್‌ಪ್ರೆಸ್‌ವೇ ಯೋಜನಾ ನಿರ್ದೇಶಕಿ ಡಿ.ಅರ್ಚನಾ, ಸಂಸ್ಥೆಯ ವೀರ ಸುರಶೇಖರ್ ರೆಡ್ಡಿ, ವೇಮುಲಪಲ್ಲಿ ಶ್ರೀನಿವಾಸಲು, ದಿಲೀಪ್ ಕಾಳಹಸ್ತಿ, ಪ್ರಶಾಂತ್ ಪೋತುರಿ, ವಿಜಯ ಕುಮಾರ್, ಮಲ್ಲಿಕಾರ್ಜುನ, ಶಾಂಬಾಶಿವ ರಾವ್, ಗುರುದತ್, ರಾಮನಾಥ್, ಸೋಮಶೇಖರ್ ರೆಡ್ಡಿ, ದಯಾಕರ್,‌ ರವಿ, ಶ್ರೀನಿವಾಸ್ ಇದ್ದರು.

Highlights - ಬಂಗಾರಪೇಟೆಯ ಐತಾಂಡಹಳ್ಳಿ ಗ್ರಾಮ ಬಳಿ ನಿರ್ಮಾಣವಾಗಲಿರುವ ಕೇಂದ್ರ ಮುಂದಿನ ದಸರಾ ಹಬ್ಬದೊಳಗೆ ಕೇಂದ್ರ ಉದ್ಘಾಟನೆ ಟೆಂಡರ್‌ ಪಡೆದುಕೊಂಡಿರುವ ವೈ–ಸ್ಪೇಸ್‌ ಸಂಸ್ಥೆಯಿಂದ ನಿರ್ಮಾಣ

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.