ಕೋಲಾರ: ‘ರಾಜ್ಯ ಬಂದ್ ಮಾಡುವುದರಿಂದ ಏನಾದರೂ ಪ್ರಯೋಜನ ಆಗುವಂತಿದ್ದರೆ ಮಾತ್ರ ಬಂದ್ಮಾಡಬೇಕು. ಅದು ಬಿಟ್ಟು ಮಾಧ್ಯಮಗಳಲ್ಲಿ ಪ್ರಚಾರ ಪಡೆಯಲು ಬಂದ್ ಮಾಡಿದರೆ ಯಾವ ಪ್ರಯೋಜನ ಆಗುವುದಿಲ್ಲ’ ಎಂದು ನಟ ಹಾಗೂ ಜೆಡಿಎಸ್ ರಾಜ್ಯ ಯುವ ಘಟಕದ ಅಧ್ಯಕ್ಷ ನಿಖಿಲ್ ಕುಮಾರಸ್ವಾಮಿ ಅಭಿಪ್ರಾಯಪಟ್ಟರು.
‘ರೈಡರ್’ ಸಿನಿಮಾ ಬಿಡುಗಡೆ ಹಿನ್ನೆಲೆಯಲ್ಲಿ ಶನಿವಾರ ನಗರದ ನಾರಾಯಣಿ ಚಿತ್ರಮಂದಿರಕ್ಕೆ ಭೇಟಿ ನೀಡಿ ಸುದ್ದಿಗಾರರೊಂದಿಗೆ ಮಾತನಾಡಿ, ‘ಕನ್ನಡಪರ ಸಂಘಟನೆಗಳ ಮುಖಂಡರು ಬಂದ್ ಘೋಷಣೆ ಮಾಡಿದ್ದು, ನಾನೂ ಅವರ ಜತೆ ನಿಂತುಕೊಳ್ಳುತ್ತೇನೆ. ಆದರೆ, ಬಂದ್ನಿಂದ ಪರಿವರ್ತನೆ ಆಗಬೇಕು. ಸುಮ್ಮನೆ ಬಂದ್ ಮಾಡಿದರೆ ಏನೂ ಪ್ರಯೋಜನವಿಲ್ಲ’ ಎಂದರು.
‘ಕೋಲಾರ ಜಿಲ್ಲೆಯು ನಮ್ಮ ಕುಟುಂಬಕ್ಕೆ ಹತ್ತಿರವಾಗಿರುವ ಜಿಲ್ಲೆ. ಬಹಳಷ್ಟು ಮಂದಿ ನಮ್ಮನ್ನು ಈ ಭಾಗದಲ್ಲಿ ಬೆಳೆಸಿದ್ದಾರೆ. ಸಿನಿಮಾ ಕ್ಷೇತ್ರದಲ್ಲೂ ಸಾಕಷ್ಟು ಬೆಂಬಲ ಕೊಟ್ಟಿದ್ದಾರೆ. ಹೀಗಾಗಿ ಜಿಲ್ಲೆ ಮೇಲೆ ನಮಗೂ ಹೆಚ್ಚಿನ ಅಭಿಮಾನವಿದೆ’ ಎಂದು ತಿಳಿಸಿದರು.
‘ಬೆಂಗಳೂರಿನ ಬಹುತೇಕ ಚಿತ್ರಮಂದಿರಗಳಿಗೆ ಭೇಟಿ ಕೊಟ್ಟಿದ್ದು, ನನ್ನ ನಟನೆಯ ರೈಡರ್ ಚಿತ್ರದ ಬಗ್ಗೆ ಪ್ರೇಕ್ಷಕರಿಂದ ಒಳ್ಳೆಯ ಅಭಿಪ್ರಾಯ ವ್ಯಕ್ತವಾಗುತ್ತಿದೆ. ಸಿನಿಮಾ ಕೌಟುಂಬಿಕ ಚಿತ್ರವಾಗಿರುವುದರಿಂದ ಜನ ಮೆಚ್ಚಿಕೊಂಡಿದ್ದಾರೆ’ ಎಂದು ಹೇಳಿದರು.
ಅಭಿಮಾನಿಗಳು ಚಿತ್ರಮಂದಿರದ ಮುಂಭಾಗ ಪಟಾಕಿ ಸಿಡಿಸಿ, ಸಿಹಿ ಹಂಚಿ ಸಂಭ್ರಮಿಸಿದರು. ಜೆಡಿಎಸ್ ತಾಲ್ಲೂಕು ಘಟಕದ ಅಧ್ಯಕ್ಷೆ ಕುರ್ಕಿ ರಾಜೇಶ್ವರಿ, ನಗರಸಭೆ ಸದಸ್ಯ ರಾಕೇಶ್ ಹಾಜರಿದ್ದರು.
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.