ಕೋಲಾರ ತಾಲ್ಲೂಕಿನ ಅರಾಭಿಕೊತ್ತನೂರಿನ ಪಶು ಆಸ್ಪತ್ರೆಯಲ್ಲಿ ಹಸುಗಳಿಗೆ ಭ್ರೂಣ ವರ್ಗಾವಣೆ ಪ್ರಕ್ರಿಯೆ ನಡೆಸಲಾಯಿತು
ಕೋಲಾರ: ಹೆಣ್ಣು ಭ್ರೂಣ ಸಂತಾನೋತ್ಪತ್ತಿ ಉದ್ದೇಶದಿಂದ ‘ಭ್ರೂಣ ವರ್ಗಾವಣೆ ತಂತ್ರಜ್ಞಾನ’ವನ್ನು (ಎಂಬ್ರಿಯೋ ಟ್ರಾನ್ಸ್ಫರ್ ಟೆಕ್ನಾಲಜಿ) ರಾಜ್ಯದಲ್ಲಿ ಪ್ರಾಯೋಗಿಕವಾಗಿ ಜಿಲ್ಲೆಯ ಅರಾಭಿಕೊತ್ತನೂರು ಗ್ರಾಮದ ಪಶು ವೈದ್ಯ ಆಸ್ಪತ್ರೆಯಲ್ಲಿ ಅಳವಡಿಸಲಾಗಿದೆ.
20 ಹಸುಗಳ ಮೇಲೆ ಈ ಪ್ರಯೋಗ ಮಾಡಲಾಗಿದೆ. ಲಾಭದಾಯಕ ಹೈನೋದ್ಯಮ ಮತ್ತು ಸೀಮೆ ಹಸುಗಳ ಸಂತತಿ ಹೆಚ್ಚಿಸುವ ನಿಟ್ಟಿನಲ್ಲಿ ಕೆಎಂಎಫ್ ಸಹಕಾರದೊಂದಿಗೆ ರಾಷ್ಟ್ರೀಯ ಡೇರಿ ಅಭಿವೃದ್ಧಿ ನಿಗಮದಿಂದ ಯೋಜನೆಗೆ ಮುಂದಾಗಿವೆ. ಹಿಂದೆ ರೈತರಿಗೆ ಆಗುತ್ತಿದ್ದ ನಷ್ಟ ಈ ಪ್ರಕ್ರಿಯೆಯಿಂದ ತಪ್ಪಲಿದೆ ಎಂದು ಪಶುವೈದ್ಯ ಡಾ.ನಿತಿನ್ ತಿಳಿಸಿದರು.
ಸಾಮಾನ್ಯವಾಗಿ ಹಸುಗಳು ಬೆದೆಗೆ ಬಂದಾಗ ಪಶು ವೈದ್ಯರು ವೀರ್ಯನೆಲೆ (ಸೆಮೆನ್) ನೀಡುತ್ತಿದ್ದರು. ಕೆಲವೊಮ್ಮೆ ವೀರ್ಯನೆಲೆ ಭ್ರೂಣ ಕಚ್ಚುತ್ತಿರಲಿಲ್ಲ. ಭ್ರೂಣ ಕಚ್ಚಿದರೂ ಕೆಲ ಹಸುಗಳು ಗಂಡು ಕರುಗಳಿಗೆ ಜನ್ಮ ನೀಡುತ್ತಿದ್ದವು. ಉಪಯೋಗಕ್ಕೆ ಬಾರದ ಕಾರಣ ರೈತರು ಕಸಾಯಿ ಖಾನೆಗೆ ಮಾರಾಟ ಮಾಡುತ್ತಿದ್ದರು. ಹೆಣ್ಣು ಕರು ಜನ್ಮ ನೀಡಿದರೆ ಸಾಕುತ್ತಿದ್ದರು.
ರಾಷ್ಟ್ರೀಯ ಡೇರಿ ಅಭಿವೃದ್ಧಿ ನಿಗಮದಿಂದ ಪಶು ತಜ್ಞರಾದ ಡಾ.ಸಂದೀಪ್, ಡಾ.ಅಶ್ವಕ್, ಭ್ರೂಣ ತಜ್ಞ ಡಾ.ದೀಪಕ್, ತಂತ್ರಜ್ಞ ಗಂಗಾಧರ್ ಅವರ ತಂಡ ಈ ಪ್ರಕ್ರಿಯೆ ನಡೆಸಿದೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.