ADVERTISEMENT

ಇಟಿಸಿಎಂ ಆಸ್ಪತ್ರೆ ಉಳಿಸಲು ಹೋರಾಟ: ಕ್ರೈಸ್ತ ಸಮುದಾಯದ ಮುಖಂಡ ಜಯದೇವ್ ಪ್ರಸನ್ನ

ಕ್ರೈಸ್ತ ಸಮುದಾಯದ ಮುಖಂಡ ಜಯದೇವ್ ಪ್ರಸನ್ನ ಎಚ್ಚರಿಕೆ

​ಪ್ರಜಾವಾಣಿ ವಾರ್ತೆ
Published 21 ಜನವರಿ 2023, 5:48 IST
Last Updated 21 ಜನವರಿ 2023, 5:48 IST
ಕೋಲಾರದಲ್ಲಿ ಶುಕ್ರವಾರ ಕ್ರೈಸ್ತ ಸಮುದಾಯದ ಮುಖಂಡ ಜಯದೇವ್ ಪ್ರಸನ್ನ ಮಾತನಾಡಿದರು
ಕೋಲಾರದಲ್ಲಿ ಶುಕ್ರವಾರ ಕ್ರೈಸ್ತ ಸಮುದಾಯದ ಮುಖಂಡ ಜಯದೇವ್ ಪ್ರಸನ್ನ ಮಾತನಾಡಿದರು   

ಕೋಲಾರ: ‘ನಗರದ ಇಟಿಸಿಎಂ ಆಸ್ಪತ್ರೆಯನ್ನು ಕಾನೂನುಬಾಹಿರವಾಗಿ ಮಾರಾಟ ಮಾಡಲು ಹುನ್ನಾರ ನಡೆದಿದ್ದು, ಹೋರಾಟದ ಮೂಲಕ ನ್ಯಾಯ ಪಡೆಯಲು ಮುಂದಾಗಿದ್ದೇವೆ’ ಎಂದು ಕ್ರೈಸ್ತ ಸಮುದಾಯದ ಮುಖಂಡ ಜಯದೇವ್ ಪ್ರಸನ್ನ ತಿಳಿಸಿದರು.

‘ಇಟಿಸಿಎಂ ಆಸ್ಪತ್ರೆಯು ನಗರದ ಪ್ರಮುಖ ಸ್ಥಳದಲ್ಲಿದ್ದು, ತಿಂಗಳಿಗೆ ಕನಿಷ್ಠ ₹ 60 ಲಕ್ಷ ಆದಾಯ ಬರುವಂಥದ್ದು. ಅಂಥ ಆಸ್ಪತ್ರೆಯನ್ನು ಕೆಲವರು 29 ವರ್ಷ 11 ತಿಂಗಳು ಅವಧಿಗೆ ಭೋಗ್ಯಕ್ಕೆ ನೀಡಲು ಹೊರಟಿದ್ದಾರೆ’ ಎಂದು ನಗರದ ಪತ್ರಕರ್ತರ ಭವನದಲ್ಲಿ ಶುಕ್ರವಾರ ಪತ್ರಿಕಾಗೋಷ್ಠಿಯಲ್ಲಿ ಆರೋಪಿಸಿದರು.

‘ಆಸ್ಪತ್ರೆಯ ಆಡಳಿತ ನಡೆಸುವವರು ರಿಯಲ್ ಎಸ್ಟೇಟ್ ವ್ಯವಹಾರಕ್ಕೆ ಇಳಿದಿದ್ದಾರೆ. ನಗರದಲ್ಲಿ ಇರುವ ಸಂಸ್ಥೆಯ ಶಾಲೆಯನ್ನೂ‌‌ ಮಾರಲು ಹೊರಟಿದ್ದಾರೆ. ಮೆಥೋಡಿಸ್ಟ್ ನಿಯಮಗಳ‌ ಪ್ರಕಾರ ಆಸ್ತಿ ಮಾರಾಟ ಮಾಡುವಂತಿಲ್ಲ; ಅಭಿವೃದ್ಧಿಪಡಿಸಬಹುದಾಗಿದೆ. ಭಾನುವಾರ ಚರ್ಚ್ ಆವರಣದಲ್ಲಿ ಕಪ್ಪು ದಿನ ಆಚರಣೆ ಮಾಡುತ್ತೇವೆ. ಮುಂದಿನ ದಿನಗಳಲ್ಲಿ ಬಿಷಪ್‌ ಮನೆ ಮುಂದೆ ಅನಿರ್ದಿಷ್ಟಾವಧಿ ಸತ್ಯಾಗ್ರಹ ಹಮ್ಮಿಕೊಳ್ಳಲಾಗುವುದು’ ಎಂದರು.

ADVERTISEMENT

ಮುಖಂಡ ದೇವಕುಮಾರ್ ಮಾತನಾಡಿ‌, ‘ಆಸ್ಪತ್ರೆ ಉಳಿಸಲು ಹೋರಾಟ ಅನಿವಾರ್ಯವಾಗಿದೆ. ಆಸ್ತಿ ವಿಚಾರದಲ್ಲಿ ಒಬ್ಬರೆ ನಿರ್ಧಾರ ಕೈಗೊಳ್ಳುವುದಿಲ್ಲ. ಸಮಿತಿಯಲ್ಲಿ ಚರ್ಚಿಸಿ ನಿರ್ಧಾರ ಕೈಗೊಳ್ಳಬೇಕು. ಇರುವುದನ್ನು ಅಭಿವೃದ್ಧಿ ಮಾಡಿಲ್ಲ. ಬದಲಾಗಿ ಮಾರಾಟ ಮಾಡುತ್ತಿದ್ದಾರೆ’ ಎಂದು ದೂರಿದರು.

ಬಂಗಾರಪೇಟೆ ಮೆಥೋಡಿಸ್ಟ್ ಸಂಸ್ಥೆಯ ಸದಸ್ಯೆ ಶಾಂತಮ್ಮ, ‘ಧರ್ಮಾಧಿಕಾರಿ ಸರ್ವಾಧಿಕಾರಿ ಆಗಿದ್ದಾರೆ. ‌ಧರ್ಮದ ಬಗ್ಗೆ ಮಾತನಾಡಬೇಕೇ ಹೊರತು ಆಸ್ತಿ ಬಗ್ಗೆ ಮಾತನಾಡಬಾರದು’ ಎಂದು ಹೇಳಿದರು.

ಕ್ರೈಸ್ತ ಸಮುದಾಯದ ಮುಖಂಡರಾದ ಜಾರ್ಜ್ ಮೈಕಲ್, ನಿರ್ಮಲ್ ಕುಮಾರ್ ಇದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.