ADVERTISEMENT

ಗಂಡನನ್ನು ಹುಡುಕಿಕೊಂಡು ಗಂಗಾವತಿಗೆ ಹೋಗಿದ್ದ ಬೆಂಗಳೂರು ಮಹಿಳೆ ಮೇಲೆ ಅತ್ಯಾಚಾರ

ಗಂಗಾವತಿ ಉದ್ಯಾನದಲ್ಲಿ ಬೆಂಗಳೂರು ಮೂಲದ ಮಹಿಳೆ ಮೇಲೆ ಅತ್ಯಾಚಾರ ದೂರು

​ಪ್ರಜಾವಾಣಿ ವಾರ್ತೆ
Published 11 ಫೆಬ್ರುವರಿ 2024, 14:59 IST
Last Updated 11 ಫೆಬ್ರುವರಿ 2024, 14:59 IST
<div class="paragraphs"><p>ಬಾಲಕಿ ಅತ್ಯಾಚಾರ (ಸಾಂಕೇತಿಕ ಚಿತ್ರ)</p></div>

ಬಾಲಕಿ ಅತ್ಯಾಚಾರ (ಸಾಂಕೇತಿಕ ಚಿತ್ರ)

   

ಗಂಗಾವತಿ (ಕೊಪ್ಪಳ ಜಿಲ್ಲೆ): ಜಗಳ ಮಾಡಿಕೊಂಡಿದ್ದ ಗಂಡನನ್ನು ಹುಡುಕಿಕೊಂಡು ಕೊಪ್ಪಳ ಜಿಲ್ಲೆಯ ಗಂಗಾವತಿಗೆ ಬಂದಿದ್ದ ಮಹಿಳೆ ಮೇಲೆ ಗಂಗಾವತಿ ಉದ್ಯಾನದಲ್ಲಿ ಅತ್ಯಾಚಾರ ನಡೆದಿರುವ ಘಟನೆ ಬೆಳಕಿಗೆ ಬಂದಿದೆ.

ಮನೆಕೆಲಸ ಮಾಡಿಕೊಂಡಿದ್ದ ಬೆಂಗಳೂರಿನ ಗೊರಗುಂಟೆಪಾಳ್ಯದ ಸಂತ್ರಸ್ತೆ ಮೂರು ತಿಂಗಳ ಹಿಂದೆ ಜಿಲ್ಲೆಯ ಕಾರಟಗಿ ತಾಲ್ಲೂಕಿನ ಸಿದ್ದಾಪುರದ ಮಂಜುನಾಥ ಜೊತೆ ವಿವಾಹವಾಗಿದ್ದರು. 15 ದಿನಗಳಿಂದ ಇವರ ನಡುವೆ ಮೇಲಿಂದ ಮೇಲೆ ಜಗಳ ನಡೆಯುತ್ತಿದ್ದ ಕಾರಣ ಸಿಟ್ಟಿಗೆದ್ದ ಮಂಜುನಾಥ ತನ್ನೂರಿಗೆ ವಾಪಸ್‌ ಬಂದಿದ್ದ.

ADVERTISEMENT

ಗಂಡನನ್ನು ಹುಡುಕಿಕೊಂಡು ಫೆ. 8ರಂದು ರಾತ್ರಿ 9 ಗಂಟೆ ಸುಮಾರಿಗೆ ಮಹಿಳೆ ಗಂಗಾವತಿ ಬಸ್‌ ನಿಲ್ದಾಣಕ್ಕೆ ಬಂದಾಗ ಪತಿ ಮಂಜುನಾಥ ಕೂಡ ಅಲ್ಲಿಗೆ ಬಂದಿದ್ದ. ಅಲ್ಲಿಯೇ ಕೌಟುಂಬಿಕ ವಿಷಯದ ಕುರಿತು ಜಗಳವಾಡುತ್ತಿದ್ದಾಗ ಆರು ಜನರ ಯುವಕರ ತಂಡ ಜಗಳದಲ್ಲಿ ಭಾಗಿಯಾಗಿತ್ತು.

ಆಗ ‘ಇದು ಗಂಡ–ಹೆಂಡತಿ ನಡುವಿನ ವೈಮನಸ್ಸು. ನೀವು ಭಾಗವಹಿಸಬೇಡಿ’ ಎಂದು ಮಹಿಳೆ ಹೇಳಿದರೂ ಯುವಕರು ಮೈ ಕೈ ಮುಟ್ಟಿ ಎಳೆದಾಡಿದ್ದಾರೆ. ಪತಿ ಮಂಜುನಾಥ ಮೇಲೆ ಎಲ್ಲರೂ ಸೇರಿ ಹಲ್ಲೆ ಮಾಡುತ್ತಿದ್ದರಿಂದ ರಕ್ಷಣೆಗಾಗಿ ಬಸ್‌ನಿಲ್ದಾಣದ ಎದುರು ಇರುವ ಉದ್ಯಾನದಲ್ಲಿ ಹೋಗಿ ಅಡಗಿಕೊಂಡಾಗ ಲಿಂಗರಾಜ ಎಂಬಾತ ನನ್ನ ಮೇಲೆ ಅತ್ಯಾಚಾರ ಎಸಗಿದ್ದಾನೆ ಎಂದು ಸಂತ್ರಸ್ತೆ ದೂರಿನಲ್ಲಿ ತಿಳಿಸಿದ್ದಾರೆ. ಈ ಕುರಿತು ಗಂಗಾವತಿ ನಗರ ಪೊಲೀಸ್‌ ಠಾಣೆಯಲ್ಲಿ ಎಫ್‌ಐಆರ್‌ ದಾಖಲಾಗಿದೆ.

ಯುವಕರ ತಂಡದಲ್ಲಿದ್ದ ಗಂಗಾವತಿಯ ಲಿಂಗರಾಜ, ಮೌಲಾಹುಸೇನ್, ಶಿವಕುಮಾರ ಸ್ವಾಮಿ, ಪ್ರಶಾಂತ, ಮಹೇಶ ಮತ್ತು ಮಾದೇಶ ಎನ್ನುವವರ ವಿರುದ್ಧ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

‘ಲಿಂಗರಾಜ ಎಂಬಾತ ಅತ್ಯಾಚಾರ ಮಾಡಿದ್ದಾನೆ ಎಂದು ಮಹಿಳೆ ದೂರು ನೀಡಿದ್ದಾರೆ. ಘಟನೆಗೆ ಸಂಬಂಧಿಸಿದ ಎಲ್ಲ ಆರು ಜನ ಆರೋಪಿಗಳನ್ನು ಬಂಧಿಸಲಾಗಿದೆ’ ಎಂದು ಗಂಗಾವತಿ ಡಿವೈಎಸ್‌ಪಿ ಸಿದ್ದಲಿಂಗಪ್ಪಗೌಡ ಪೊಲೀಸ್‌ಪಾಟೀಲ್ ‘ಪ್ರಜಾವಾಣಿ’ಗೆ ತಿಳಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.