ADVERTISEMENT

ಕೊಪ್ಪಳ: ಮಾರಾಟ ಪರವಾನಗಿ ನೆಪದಲ್ಲಿ ಉದ್ಯಮಿಗೆ ವಂಚನೆ

ಸೈಬರ್‌ ಅಪರಾಧ; ಪ್ರತ್ಯೇಕ ಪ್ರಕರಣಗಳಲ್ಲಿ ₹8.52 ಲಕ್ಷ ಕಳೆದಕೊಂಡ ಇಬ್ಬರು

​ಪ್ರಜಾವಾಣಿ ವಾರ್ತೆ
Published 3 ಮಾರ್ಚ್ 2026, 4:31 IST
Last Updated 3 ಮಾರ್ಚ್ 2026, 4:31 IST
ಕೊಪ್ಪಳ ಜಿಲ್ಲಾ ಪೊಲೀಸ್‌ ವರಿಷ್ಠಾಧಿಕಾರಿ ಡಾ. ರಾಮ್‌ ಎಲ್‌. ಅರಸಿದ್ಧಿ ಹಾಗೂ ಸಿಬ್ಬಂದಿ ಬಂಡಿಹರ್ಲಾಪುರದಲ್ಲಿ ನಡೆಯುತ್ತಿರುವ ಅಕ್ರಮ ಗಣಿಗಾರಿಕೆ ಮೇಲೆದಾಳಿ ನಡೆಸಿದರು
ಕೊಪ್ಪಳ ಜಿಲ್ಲಾ ಪೊಲೀಸ್‌ ವರಿಷ್ಠಾಧಿಕಾರಿ ಡಾ. ರಾಮ್‌ ಎಲ್‌. ಅರಸಿದ್ಧಿ ಹಾಗೂ ಸಿಬ್ಬಂದಿ ಬಂಡಿಹರ್ಲಾಪುರದಲ್ಲಿ ನಡೆಯುತ್ತಿರುವ ಅಕ್ರಮ ಗಣಿಗಾರಿಕೆ ಮೇಲೆದಾಳಿ ನಡೆಸಿದರು   

ಕೊಪ್ಪಳ: ಎಥರ್‌ ದ್ವಿಚಕ್ರ ವಾಹನಗಳ ಮಾರಾಟ ಪರವಾನಗಿ (ಡೀಲರಷಿಪ್‌) ಪಡೆದುಕೊಳ್ಳಲು ಸಾಮಾಜಿಕ ತಾಣಗಳಲ್ಲಿ ಹುಡುಕಾಡಿದ ನಗರದ ವ್ಯಕ್ತಿಯೊಬ್ಬರ ಕೆಲಸವನ್ನೇ ಬಂಡವಾಳ ಮಾಡಿಕೊಂಡು ವಂಚಕರು ₹6.52 ಲಕ್ಷ ಮೋಸ ಮಾಡಿದ್ದಾರೆ.

ಇಲ್ಲಿನ ಉದ್ಯಮಿ ಹನಮಂತಸಾ ಎ. ಬಾಕಳೆ ಎಂಬವರು ಡೀಲರಷಿಪ್‌ ಪಡೆದುಕೊಳ್ಳಲು ಫೇಸ್‌ಬುಕ್‌ನಲ್ಲಿ ಬಂದ ಪುಟವನ್ನು ಕ್ಲಿಕ್‌ ಮಾಡಿ ಮಾಹಿತಿ ಭರ್ತಿ ಮಾಡಿದ್ದಾರೆ. ಆಗ ಅಪರಿಚಿತ ವ್ಯಕ್ತಿಗಳು ಫೋನ್‌ ಕರೆ ಮಾಡಿ ಎಥರ್‌ ಕಂಪನಿಯಿಂದ ಮಾತನಾಡುತ್ತಿದ್ದೇವೆ ಎಂದು ನಂಬಿಸಿ ಅರ್ಜಿಯನ್ನು ಹನಮಂತಸಾ ಅವರಿಗೆ ಕಳುಹಿಸಿ ದಾಖಲೆಗಳನ್ನು ಪಡೆದುಕೊಂಡಿದ್ದಾರೆ.

ಬಳಿಕ ಡೀಲರಷಿಪ್‌ ನೋಂದಾವಣೆಗೆ ₹1.77 ಲಕ್ಷ ಹಾಗೂ ಎನ್‌ಒಸಿಯ ಅಂದಾಜು ಮೊತ್ತ ₹4.75 ಹೀಗೆ ಒಟ್ಟು ₹6.52 ಲಕ್ಷವನ್ನು ತಮ್ಮ ಬ್ಯಾಂಕ್‌ ಆಫ್‌ ಮಹಾರಾಷ್ಟ್ರ ಖಾತೆಗೆ ಜಮೆ ಮಾಡಿಸಿಕೊಂಡಿದ್ದಾರೆ. ಬಳಿಕ ಸಂಪರ್ಕಕ್ಕೂ ಲಭ್ಯವಾಗದ ಕಾರಣಕ್ಕೆ ಅವರಿಗೆ ಮೋಸ ಹೋಗಿರುವುದು ಗೊತ್ತಾಗಿದೆ.

ADVERTISEMENT

ಲಾಭದ ಆಮಿಷ: ಕಾರಟಗಿ ತಾಲ್ಲೂಕಿನ ಬೂದಗುಂಪಾ ಗ್ರಾಮದ ರೈತ ಶರಣಪ್ಪ ಕೆಂಡದ ಅವರಿಗೆ ಹೆಚ್ಚು ಲಾಭದ ಆಮಿಷವೊಡ್ಡಿ ₹2 ಲಕ್ಷ ವಂಚಿಸಲಾಗಿದೆ.

ಜಯಂತ್‌ ಎನ್ನುವ ಹೆಸರಿನ ಅಪರಿಚಿತ ವ್ಯಕ್ತಿ ಶರಣಪ್ಪ ಅವರನ್ನು ಪರಿಚಯಿಸಿಕೊಂಡಿದ್ದು ಷೇರು ಮಾರುಕಟ್ಟೆಯಲ್ಲಿ ಹಣ ಹೂಡಿಕೆ ಮಾಡಿದರೆ ಹೆಚ್ಚು ಲಾಭ ಗಳಿಸಬಹುದು ಎಂದು ನಂಬಿಸಿ ವಂಚಕ ತನ್ನ ಖಾತೆಗೆ ಹಣ ವರ್ಗಾವಣೆ ಮಾಡಿಸಿಕೊಂಡು ಹೂಡಿಕೆ ಮಾಡಿದ ಹಾಗೂ ಲಾಭದ ಎರಡೂ ಹಣವನ್ನು ನೀಡದೆ ಮೋಸ ಮಾಡಿದ್ದಾನೆ ಎಂದು ಅವರು ದೂರು ನೀಡಿದ್ದಾರೆ. ಈ ಎರಡೂ ಘಟನೆಗಳ ಬಗ್ಗೆ ನಗರದ ಸೈಬರ್‌ ಪೊಲೀಸ್‌ ಠಾಣೆಯಲ್ಲಿ ಎಫ್‌ಐಆರ್‌ ದಾಖಲಾಗಿದೆ.

ಅಕ್ರಮ ಕಲ್ಲುಗಣಿಗಾರಿಕೆ; ಅಧಿಕಾರಿಗಳ ದಾಳಿ

ಕೊಪ್ಪಳ: ತಾಲ್ಲೂಕಿನ ಬಂಡಿಹರ್ಲಾಪುರದ ವ್ಯಾಪ್ತಿಯಲ್ಲಿ ಅಕ್ರಮವಾಗಿ ಕಲ್ಲು ಗಣಿಗಾರಿಕೆ ನಡೆಸುತ್ತಿದ್ದವರ ಮೇಲೆ ಭಾನುವಾರ ದಾಳಿ ನಡೆಸಲಾಗಿದೆ. ಬಂಡಿಹರ್ಲಾಪುರದಲ್ಲಿ ಸರ್ವೆ ಸಂಖ್ಯೆ 133 ಹಾಗೂ 134ರಲ್ಲಿ ಕಲ್ಲು ಗಣಿಗಾರಿಕೆ ನಡೆಯುತ್ತಿರುವ ಕುರಿತು ಬಳ್ಳಾರಿ ವಲಯದ ಪೊಲೀಸ್ ಮಹಾನಿರೀಕ್ಷಕ ಡಾ. ಪಿ.ಎಸ್. ಹರ್ಷ ಅವರಿಗೆ ದೂರು ಬಂದಿದ್ದು ಅವರ ಸೂಚನೆ ಮೇರೆಗೆ ಜಿಲ್ಲಾ ಪೊಲೀಸ್‌ ವರಿಷ್ಠಾಧಿಕಾರಿ ಡಾ. ರಾಮ್‌ ಎಲ್‌. ಅರಸಿದ್ಧಿ ಹೆಚ್ಚುವರಿ ಎಸ್‌.ಪಿ. ಹೇಮಂತ ಕುಮಾರ್‌ ಸೇರಿದಂತೆ ಅನೇಕರು ದಾಳಿ ಮಾಡಿದ್ದಾರೆ.

ಗಣಿ ಮತ್ತು ಭೂವಿಜ್ಞಾನ ಇಲಾಖೆ ಹಾಗೂ ಅರಣ್ಯ ಇಲಾಖೆ ಅಧಿಕಾರಿಗಳು ಕೂಡ ಜೊತೆಯಲ್ಲಿದ್ದರು. ಇಬ್ಬರು ಪೊಲೀಸ್‌ ಇನ್‌ಸ್ಟೆಕ್ಟರ್‌ಗಳು ಹಾಗೂ 30 ಸಿಬ್ಬಂದಿ ದಾಳಿ ವೇಳೆ ಪಾಲ್ಗೊಂಡಿದ್ದು ಗಣಿಗಾರಿಕೆಗೆ ಬಳಕೆ ಮಾಡಲು ತರಲಾಗಿದ್ದ 12 ಲಾರಿಗಳಲ್ಲಿ ಮೂರರಲ್ಲಿ ಕಲ್ಲುಗಳನ್ನು ತುಂಬಲಾಗಿತ್ತು. ಇದಕ್ಕೆ ಬಳಕೆ ಮಾಡಿಕೊಂಡಿರುವ ವಾಹನಗಳು ಜೆಸಿಬಿ ಹಾಗೂ ಹಿಟಾಚಿ ಜಪ್ತಿ ಮಾಡಲಾಗಿದೆ ಎಂದು ಪೊಲೀಸ್‌ ಮೂಲಗಳು ತಿಳಿಸಿವೆ. ’ಅಕ್ರಮ ಕಲ್ಲು ಗಣಿಗಾರಿಕೆ ಮೇಲೆ ದಾಳಿ ನಡೆಸಿದ್ದು ಮುನಿರಾಬಾದ್‌ ಪೊಲೀಸ್‌ ಠಾಣೆಯಲ್ಲಿ ಪ್ರಕರಣ ದಾಖಲಿಸಲಾಗಿದೆ’ ಎಂದು ಎಸ್‌.ಪಿ. ತಿಳಿಸಿದ್ದಾರೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.