ADVERTISEMENT

ಬ್ಯಾಲಟ್‌ ಬಳಸಿದ ರಾಷ್ಟ್ರಗಳು ಶಿಲಾಯುಗಕ್ಕೆ ಹೋಗಿವೆಯೆ?: BJPಗೆ ಸಿಎಂ ತಿರುಗೇಟು

​ಪ್ರಜಾವಾಣಿ ವಾರ್ತೆ
Published 6 ಸೆಪ್ಟೆಂಬರ್ 2025, 23:30 IST
Last Updated 6 ಸೆಪ್ಟೆಂಬರ್ 2025, 23:30 IST
<div class="paragraphs"><p>ಸಿದ್ದರಾಮಯ್ಯ ಮತ್ತು ಡಿ.ಕೆ.ಶಿವಕುಮಾರ್</p></div>

ಸಿದ್ದರಾಮಯ್ಯ ಮತ್ತು ಡಿ.ಕೆ.ಶಿವಕುಮಾರ್

   

ಕೊಪ್ಪಳ: ‘ಪ್ರಪಂಚದ ಅನೇಕ ರಾಷ್ಟ್ರಗಳು ತಾಂತ್ರಿಕವಾಗಿ ಬಹಳಷ್ಟು ಮುಂದುವರಿದಿದ್ದರೂ ಮತಪತ್ರಗಳ ಮೂಲಕ ಚುನಾವಣೆ ನಡೆಸುವ ವ್ಯವಸ್ಥೆಯನ್ನು ಅಳವಡಿಸಿಕೊಂಡಿವೆ. ಹಾಗಾದರೆ ಆ ದೇಶಗಳು ಮರಳಿ ಶಿಲಾಯುಗಕ್ಕೆ ಹೋಗಿವೆಯೇ’ ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ಪ್ರಶ್ನಿಸಿದರು.

‘ಮತಪತ್ರಗಳ ಮೂಲಕ ಚುನಾವಣೆ ನಡೆಸುವುದರಿಂದ ಮತ್ತೆ ಶಿಲಾಯುಗಕ್ಕೆ ಹೋದಂತಾಗುತ್ತದೆ’ ಎಂದು ಬಿಜೆಪಿಯವರು ಮಾಡಿದ ಆರೋಪಕ್ಕೆ ಇಲ್ಲಿನ ಬಸಾಪುರ ವಿಮಾನ ನಿಲ್ದಾಣದಲ್ಲಿ ಸುದ್ದಿಗಾರರಿಗೆ ಈ ರೀತಿ ಪ್ರತಿಕ್ರಿಯಿಸಿದರು. 

ADVERTISEMENT

‘ಬ್ಯಾಲಟ್‌ ಪೇಪರ್‌ ಮೂಲಕ ಚುನಾವಣೆ ಎಂದರೆ ಬಿಜೆಪಿಯವರಿಗೆ ಭಯ ಇದ್ದಂತಿದೆ. ಇವಿಎಂ ಮೂಲಕ ನಡೆದ ಚುನಾವಣೆಯಲ್ಲಿ ಅನ್ಯಾಯವಾಗಿದೆ ಎಂಬುದು ನಮ್ಮ ಅನುಭವಕ್ಕೆ ಬಂದಿದೆ. ಈ ಕಾರಣಕ್ಕಾಗಿಯೇ ಹೋರಾಟಕ್ಕೆ ಮುಂದಾಗಿರುವ ರಾಹುಲ್ ಗಾಂಧಿ ಅವರು ಮಹದೇವಪುರದಲ್ಲಿ ಕಾಂಗ್ರೆಸ್‌ ಸೋತಿದ್ದು ಹೇಗೆ ಎಂಬುದನ್ನೂ ವಿವರಿಸಿದ್ದಾರೆ’ ಎಂದರು.

ಹಿಂದೆ ತಾವು ಸ್ಪರ್ಧಿಸಿದ್ದ ಕೊಪ್ಪಳ ಲೋಕಸಭೆ ಚುನಾವಣೆ ಫಲಿತಾಂಶವನ್ನು ಪ್ರಸ್ತಾಪಿಸಿದ ಸಿದ್ದರಾಮಯ್ಯ, ‘ಕೊಪ್ಪಳದಲ್ಲಿ ಅನ್ಯಾಯವಾಗಿ ಸೋತಿದ್ದೇನೆ ಎಂದಿದ್ದು ಮತ ಎಣಿಕೆ ಸಂದರ್ಭದಲ್ಲಿ ಮತ ಎಣಿಕೆ ಏಜೆಂಟರು ಸರಿಯಾಗಿ ಕೆಲಸ ಮಾಡಿರಲಿಲ್ಲ ಎಂಬ ಕಾರಣಕ್ಕೆ. ಆಗ ನ್ಯಾಯಾಲಯದ ಮೊರೆ ಹೋಗಿದ್ದೆ. ಆದರೆ, ಮತಪತ್ರಗಳಿಂದ ಸೋಲಾಯಿತು ಎಂದು ಹೇಳಿಲ್ಲ’ ಎಂದರು.

‘ಕೊಪ್ಪಳ ಬಳಿ ಬಲ್ಡೋಟಾ ಕಾರ್ಖಾನೆ ಸ್ಥಾಪನೆಗೆ ಸಂಬಂಧಿಸಿದಂತೆ ಜನರ ವಿರೋಧವಿದ್ದು, ಅವರ ಆಶಯಕ್ಕೆ ಅನುಗುಣವಾಗಿ ಸರ್ಕಾರ ತೀರ್ಮಾನ ತೆಗೆದುಕೊಂಡಿದೆ. ಈ ಬಗೆಗಿನ ವಾಸ್ತವತೆಯನ್ನು ಕೈಗಾರಿಕೆ ಸಚಿವ ಎಂ.ಬಿ.ಪಾಟೀಲರು ಸದನದಲ್ಲಿ ವಿವರಿಸಿದ್ದಾರೆ. ಕೇಂದ್ರ ಸರ್ಕಾರದ ಪರಿಸರ ಇಲಾಖೆಯೇ ಅನುಮತಿ ನೀಡಿದ್ದು, ನೀವು ಕೇಂದ್ರದವರನ್ನೂ ಪ್ರಶ್ನಿಸಬೇಕು’ ಎಂದು ಹೇಳಿದರು. 

ಟಿಬಿ ಡ್ಯಾಂ ಗೇಟ್‌ ದುರಸ್ತಿ ಮುಖ್ಯ; ಸಿಎಂ
ಮಳೆ ಪರಿಸ್ಥಿತಿ ನೋಡಿಕೊಂಡು ತುಂಗಭದ್ರಾ ಜಲಾಶಯದ ಕ್ರಸ್ಟ್‌ಗೇಟ್‌ಗಳ ದುರಸ್ತಿ ನಡೆಸಬೇಕಿದೆ. ಜಲಾಶಯದಲ್ಲಿ ಸಾಕಷ್ಟು ಹೂಳು ಸಹ ತುಂಬಿದ್ದು ಇತರೆ ದುರಸ್ತಿ ಕೆಲಸಗಳನ್ನೂ ನಿರ್ವಹಿಸಬೇಕಿದೆ ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ಹೇಳಿದರು. 19ನೇ ಗೇಟ್‌ ಕಿತ್ತು ಹೋದ ನಂತರ ಸ್ಟಾಪ್‌ಲಾಗ್‌ ಗೇಟ್‌ ಕೂಡ್ರಿಸುವ ಕೆಲಸ ಯಶಸ್ವಿಯಾಗಿದ್ದರಿಂದ ಎರಡು ಬೆಳೆಗಳಿಗೆ ನೀರು ಹರಿಸಲು ಸಾಧ್ಯವಾಯಿತು. ಇದೇ ರೀತಿ ಇತರೆ ಕ್ರಸ್ಟ್‌ಗೇಟ್‌ಗಳೂ ಕಿತ್ತುಹೋದರೆ ಮಾಡುವುದೇನು? ಬೆಳೆಯೂ ಹಾಳಾಗುತ್ತದೆ, ರೈತರೂ ತೊಂದರೆ ಅನುಭವಿಸಬೇಕಾಗುತ್ತದೆ. ಈ ಕಾರಣಕ್ಕೆ ಎರಡನೇ ಬೆಳೆಗೂ ನೀರು ಕೊಟ್ಟರೆ ಒಂದು ಬೆಳೆ ಮಾತ್ರ ನಷ್ಟವಾಗಬಹುದು. ಹಾಗಾಗಿ ಎಲ್ಲ ಗೇಟ್‌ಗಳ ಸುರಕ್ಷತೆ ಕಾರಣಕ್ಕೆ ದುರಸ್ತಿ ನಡೆಸುವುದಕ್ಕೆ ಆದ್ಯತೆ ನೀಡಬೇಕೆಂಬುದು ಸರ್ಕಾರದ ದೂರದೃಷ್ಟಿಯಾಗಿದೆ ಎಂದರು.

ಬ್ಯಾಲಟ್‌ಗಳೆಂದರೆ ಬಿಜೆಪಿಗೆ ಭಯ ಶುರುವಾಗಿದೆ. ಏಕೆಂದರೆ ಬ್ಯಾಲೆಟ್‌ಪೇಪರ್ ಬುಲೆಟ್‌ಗಿಂತಲೂ ಶಕ್ತಿಶಾಲಿಯಾಗಿರುವುದೇ ಬಿಜೆಪಿಯವರ ಚಿಂತೆ.
–ಡಿ.ಕೆ.ಶಿವಕುಮಾರ್‌, ಉಪಮುಖ್ಯಮಂತ್ರಿ

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.