ADVERTISEMENT

ಪಿಎಸ್‌ಐ ನೇಮಕಾತಿ ಅಕ್ರಮ: ಆಡಿಯೊ ವೈರಲ್‌ ನಂತರ ಪಕ್ಷಕ್ಕೆ ಮುಜುಗರ –ಬಿಜೆಪಿ ನಾಯಕ

ಆಡಿಯೊದಲ್ಲಿ ಬಿಜೆಪಿ ಜಿಲ್ಲಾ ಘಟಕದ ಅಧ್ಯಕ್ಷ ದೊಡ್ಡನಗೌಡ ಹೆಸರು

​ಪ್ರಜಾವಾಣಿ ವಾರ್ತೆ
Published 5 ಸೆಪ್ಟೆಂಬರ್ 2022, 11:15 IST
Last Updated 5 ಸೆಪ್ಟೆಂಬರ್ 2022, 11:15 IST
ಬಿಜೆಪಿ ಕೊಪ್ಪಳ ಜಿಲ್ಲಾ ಘಟಕದ ಅಧ್ಯಕ್ಷ ದೊಡ್ಡನಗೌಡ ಪಾಟೀಲ
ಬಿಜೆಪಿ ಕೊಪ್ಪಳ ಜಿಲ್ಲಾ ಘಟಕದ ಅಧ್ಯಕ್ಷ ದೊಡ್ಡನಗೌಡ ಪಾಟೀಲ   

ಕುಷ್ಟಗಿ (ಕೊಪ್ಪಳ ಜಿಲ್ಲೆ): ತಾಲ್ಲೂಕಿನ ವ್ಯಕ್ತಿಯೊಬ್ಬರು ಮತ್ತು ಕನಕಗಿರಿ ಶಾಸಕ ಬಸವರಾಜ ದಢೇಸಗೂರು ಅವರ ನಡುವಿನ ಹಣದ ವ್ಯವಹಾರಕ್ಕೆ ಸಂಬಂಧಿಸಿದ ಸಂಭಾಷಣೆ ಇರುವ ಆಡಿಯೊ ಗಮನಕ್ಕೆ ಬಂದಿದ್ದು ಇದರಿಂದ ಪಕ್ಷ ಸಹಜವಾಗಿ ಮುಜುಗರ ಎದುರಿಸುವಂತಾಗಿದೆ ಎಂದು ಬಿಜೆಪಿ ಜಿಲ್ಲಾ ಘಟಕದ ಅಧ್ಯಕ್ಷ ದೊಡ್ಡನಗೌಡ ಪಾಟೀಲ ಹೇಳಿದರು.

ಪಿಎಸ್‌ಐ ನೇಮಕಾತಿಗೆ ತಾಲ್ಲೂಕಿನ ಮೇಗೂರುಗ್ರಾಮದ ಪರಸಪ್ಪ ಮೇಗೂರು ಎಂಬ ವ್ಯಕ್ತಿ ಶಾಸಕ ಬಸವರಾಜ ಅವರಿಗೆ ₹15 ಲಕ್ಷ ಕೊಟ್ಟಿರುವುದಾಗಿ ಹೇಳುತ್ತಿರುವುದುದು, ಹಣ ಹಿಂತಿರುಗಿಸುವಂತೆ ಪರಸಪ್ಪ ಶಾಸಕರ ಬಳಿ ಅಳಲು ತೋಡಿಕೊಳ್ಳುತ್ತಿರುವ ಆಡಿಯೊದಲ್ಲಿ ಶಾಸಕರು ತಮ್ಮ ಹೆಸರನ್ನು ಪ್ರಸ್ತಾಪಿಸಿರುವುದಕ್ಕೆ ಸಂಬಂಧಿಸಿದಂತೆ 'ಪ್ರಜಾವಾಣಿ'ಗೆ ಪ್ರತಿಕ್ರಿಯಿಸಿದ ದೊಡ್ಡನಗೌಡ, 'ಪರಸಪ್ಪ ಯಾವ ಕೆಲಸಕ್ಕೆ ಹಣ ಕೊಟ್ಟಿದ್ದಾರೆ ಎಂಬುದು ಗೊತ್ತಿಲ್ಲ.ಈ ವಿಷಯ ಒಂದೂವರೆ ವರ್ಷದ ಹಿಂದಿನದು. ಹಣ ಹಿಂತಿರುಗಿಸುವಂತೆ ಶಾಸಕ ದಢೇಸಗೂರು ಅವರಿಗೆ ಒಮ್ಮೆ ಹೇಳಿದ್ದೆ ಎಂದರು.

ಪಿಎಸ್‌ಐ ನೇಮಕ ವಿಚಾರಕ್ಕೆ ಸಂಬಂಧಿಸಿದಂತೆ ಹಗರಣದ ತನಿಖೆ ನಡೆಯುತ್ತಿದೆ.ಈಗ ಸ್ವತಃ ಬಿಜೆಪಿ ಶಾಸಕ ದಢೇಸಗೂರು ಅವರೇ ಸರ್ಕಾರಕ್ಕೆ ಹಣ ತಲುಪಿದೆ ಎಂದು ಹೇಳಿದ್ದಾರಲ್ಲ ಎಂಬ ಪ್ರಶ್ನೆಗೆ ಪ್ರತಿಕ್ರಿಯಿಸಿ ‘ಈಗಿನ ಪಿಎಸ್‌ಐ ನೇಮಕಾತಿ ಪ್ರಕರಣಕ್ಕೂ ಪರಸಪ್ಪ ಎಂಬುವವರು ಶಾಸಕರ ಮೂಲಕ ಹಣ ಕೊಟ್ಟದ್ದಕ್ಕೂ ಸಂಬಂಧವಿಲ್ಲ. ಆದರೆ ಆಡಿಯೊ ವೈರಲ್‌ ಆದ ನಂತರ ಜಿಲ್ಲಾ ಮಟ್ಟದಲ್ಲಿ ಈ ವಿಚಾರ ಹೆಚ್ಚು ಚರ್ಚೆಗೆ ಒಳಪಟ್ಟಿದ್ದು ಪಕ್ಷದ ವರ್ಚಸ್ಸಿಗೆ ಹಾನಿಯಾಗುವ ಸಾಧ್ಯತೆ ಇದೆ. ಈ ಸಂಬಂಧ ಶೀಘ್ರದಲ್ಲಿ ಪಕ್ಷದ ಹೈಕಮಾಂಡ್‌ಗೆ ಮಾಹಿತಿ ನೀಡುವುದಾಗಿ ತಿಳಿಸಿದರು.

ADVERTISEMENT

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.