ಕೊಪ್ಪಳ: ‘ಬಿಜೆಪಿಯಲ್ಲಿ ಈಗ ತತ್ವ ಸಿದ್ದಾಂತಗಳು ಯಾವುದೂ ಉಳಿದುಕೊಂಡಿಲ್ಲ. ಅಲ್ಲಿ ಈಗ ವ್ಯಾಪಾರೀಕರಣ ಶುರುವಾಗಿದೆ’ ಎಂದು ಕಾಂಗ್ರೆಸ್ ನಾಯಕ ಲಕ್ಷ್ಮಣ ಸವದಿ ಹೇಳಿದರು.
ತಾಲ್ಲೂಕಿನ ವದಗನಾಳ ಗ್ರಾಮದಲ್ಲಿ ಕೊಪ್ಪಳ ಕ್ಷೇತ್ರದ ಕಾಂಗ್ರೆಸ್ ಅಭ್ಯರ್ಥಿ ರಾಘವೇಂದ್ರ ಹಿಟ್ನಾಳ ಪರ ಮತಯಾಚನೆ ಮಾಡಿದ ಅವರು, ‘ಬಿಜೆಪಿಯಲ್ಲಿದ್ದಾಗ ಪಕ್ಷ ವಿರೋಧಿ ಕೆಲಸ ಮಾಡಲಿಲ್ಲ. ಯಾರಿಗೂ ದ್ರೋಹ ಎಸಗಿಲ್ಲ. 20 ವರ್ಷಗಳ ಕಾಲ ಆ ಪಕ್ಷದಲ್ಲಿ ಶ್ರದ್ಧೆಯಿಂದ ಕೆಲಸ ಮಾಡಿದರೂ ಟಿಕೆಟ್ ಕೊಡದೇ ನನಗೆ ಅವಮಾನ ಮಾಡಿದರು’ ಎಂದರು.
‘ನನ್ನನ್ನು ಕಾಂಗ್ರೆಸ್ ಪಕ್ಷಕ್ಕೆ ಸೇರಲು ರಾಘವೇಂದ್ರ ಹಿಟ್ನಾಳ ಮತ್ತು ಬಸವರಾಜ ರಾಯರಡ್ಡಿ ಪ್ರಮುಖ ಪಾತ್ರ ವಹಿಸಿದ್ದಾರೆ. ಯಾವ ಪಕ್ಷದಲ್ಲಿ ಇರುತ್ತೇನೊ ಆ ಪಕ್ಷಕ್ಕೆ ನಿಷ್ಠನಾಗಿ ಇರುತ್ತೇನೆ. ಜಿಲ್ಲೆಯ ಎಲ್ಲಾ ಕಾಂಗ್ರೆಸ್ ಅಭ್ಯರ್ಥಿಗಳ ಪರವಾಗಿ ಮತಯಾಚನೆ ಮಾಡುವೆ. ಈ ಬಾರಿ ಕಾಂಗ್ರೆಸ್ ರಾಜ್ಯದಲ್ಲಿ ಅಧಿಕಾರದ ಚುಕ್ಕಾಣಿ ಹಿಡಿಯುವುದು ಸತ್ಯ. ಎಲ್ಲರೂ ಹಿಟ್ನಾಳ ಅವರಿಗೆ ಮತ ಹಾಕಿ ಕಾಂಗ್ರೆಸ್ ಪಕ್ಷವನ್ನು ಗೆಲ್ಲಿಸಬೇಕು’ ಎಂದು ಮನವಿ ಮಾಡಿದರು.
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.