ADVERTISEMENT

ಕೊಪ್ಪಳ: ಫಾಸ್ಟ್‌ ಟ್ಯಾಗ್‌ ಹೆಸರಲ್ಲಿ ₹65 ಸಾವಿರ ವಂಚನೆ

​ಪ್ರಜಾವಾಣಿ ವಾರ್ತೆ
Published 16 ಮೇ 2024, 6:18 IST
Last Updated 16 ಮೇ 2024, 6:18 IST
ಪ್ರಾತಿನಿಧಿಕ ಚಿತ್ರ
ಪ್ರಾತಿನಿಧಿಕ ಚಿತ್ರ    

ಕೊಪ್ಪಳ: ವಾಹನಗಳಿಗೆ ಆನ್‌ಲೈನ್‌ ಮೂಲಕ ಫಾಸ್ಟ್‌ ಟ್ಯಾಗ್‌ ಅಳವಡಿಸಿಕೊಡುವುದಾಗಿ ನಂಬಿಸಿದ ಅಪರಿಚಿತ ವ್ಯಕ್ತಿಯೊಬ್ಬ ಇಲ್ಲಿನ ಭಾಗ್ಯನಗರದ ಪಾಂಡುರಂಗ ಹೊಸಮನಿ ಎಂಬುವರಿಗೆ ₹65 ಸಾವಿರ ವಂಚಿಸಿದ್ದಾನೆ.

ಸಾಮರ್ಥ್ಯ ಸಂಸ್ಥೆಯಲ್ಲಿ ಲೆಕ್ಕಾಧಿಕಾರಿಯಾಗಿರುವ ಪಾಂಡುರಂಗ ತಮ್ಮ ಸಂಸ್ಥೆಯಲ್ಲಿ ಎರಡು ಜೀಪುಗಳು ಇದ್ದು, ಒಂದು ವರ್ಷದ ಅವಧಿಗೆ ಫಾಸ್ಟ್‌ಟ್ಯಾಗ್‌ ಅಳವಡಿಸುವ ಸಲುವಾಗಿ ಆನ್‌ಲೈನ್ ಮೂಲಕ ಹುಡುಕಾಡಿದ್ದಾರೆ. ಅಂದು ವೆಬ್‌ಸೈಟ್‌ನಲ್ಲಿ ತಾಂತ್ರಿಕ ತೊಂದರೆ ಕಾಣಿಸಿಕೊಂಡಿದ್ದರಿಂದ ಹಣ ವರ್ಗಾವಣೆಯಾಗಿರಲಿಲ್ಲ. ಆದ್ದರಿಂದ ಪಾಂಡುರಂಗ ಸುಮ್ಮನಾಗಿದ್ದರು.

ಇದಾದ ಮೂರು ದಿನಗಳ ಬಳಿಕ ಪಾಂಡುರಂಗ ಅವರಿಗೆ ಕರೆ ಮಾಡಿದ ಅಪರಿಚಿತ ’ನಾವು ಫಾಸ್ಟ್‌ ಟ್ಯಾಗ್‌ ಸಹಾಯವಾಣಿ ಸಿಬ್ಬಂದಿಯಿದ್ದು, ನಿಮ್ಮ ಮೊಬೈಲ್‌ಗೆ ಕಳುಹಿಸಿದ ಲಿಂಕ್‌ ಮೇಲೆ ಕ್ಲಿಕ್‌ ಮೇಲೆ ಎಲ್ಲ ಮಾಹಿತಿ ತುಂಬಿ ಕಳುಹಿಸಿ’ ಎಂದು ಹೇಳಿದ್ದಾನೆ. ಅದರಂತೆ ಅವರು ಮಾಹಿತಿ ತುಂಬಿ ಕಳುಹಿಸಿದ ಹತ್ತು ನಿಮಿಷಗಳಲ್ಲಿಯೇ ಸಂಸ್ಥೆ ಖಾತೆಯಿಂದ ಹಣ ಕಡಿತವಾಗಿದೆ.

ADVERTISEMENT

ಮಾರ್ಚ್‌ ಮೊದಲ ವಾರದಲ್ಲಿಯೇ ಈ ಘಟನೆ ನಡೆದಿದೆಯಾದರೂ ಎರಡು ದಿನಗಳ ಹಿಂದೆಯಷ್ಟೇ ಅವರು ದೂರು ನೀಡಿದ್ದು, ನಗರ ಪೊಲೀಸ್‌ ಠಾಣೆಯಲ್ಲಿ ಎಫ್‌ಐಆರ್‌ ದಾಖಲಾಗಿದೆ.

ಬೆದರಿಕೆ ಆರೋಪ: ಲೋಕಸಭಾ ಚುನಾವಣೆಯ ಮತದಾನದ ಹಿಂದಿನ ದಿನವಾದ ಮೇ 6ರಂದು ಹಗರಿಬೊಮ್ಮನಹಳ್ಳಿ ಘಟಕದ ಬಸ್‌ನ ನಿರ್ವಾಹಕ ದ್ಯಾಮಪ್ಪ ಪ್ರಯಾಣಿಕರ ಜೊತೆ ಹಗುರವಾಗಿ ನಡೆದುಕೊಂಡಿದ್ದಲ್ಲದೇ, ನನ್ನ ಕರ್ತವ್ಯಕ್ಕೂ ಅಡ್ಡಿಪಡಿಸಿದ್ದಾನೆ ಎಂದು ಆರೋಪಿಸಿ ಅಂದು ಇಲ್ಲಿನ ಕೇಂದ್ರೀಯ ಬಸ್‌ ನಿಲ್ದಾಣದಲ್ಲಿ ಸಂಚಾರ ನಿಯಂತ್ರಕರಾಗಿದ್ದ ರವೀಂದ್ರ ಎಂಬುವರು ದೂರು ನೀಡಿದ್ದಾರೆ.

ಕೊಪ್ಪಳ ಮಾರ್ಗವಾಗಿ ಹುಬ್ಬಳ್ಳಿಗೆ ಹೋಗುತ್ತಿದ್ದ ಬಸ್‌ ಮಾರ್ಗ ಮಧ್ಯದ ಹಲವು ಊರುಗಳಲ್ಲಿ ನಿಲುಗಡೆಯಾಗುತ್ತದೆ ಎಂದು ನಾನು ಹೇಳಿದ್ದರಿಂದ ಪ್ರಯಾಣಿಕರು ಬಸ್‌ ಏರಿದ್ದರು. ಬಸ್‌ ನಿಲ್ಲುವುದಿಲ್ಲ ಎಂದು ಹೇಳಿದ ನಿರ್ವಾಹಕ ಬೆದರಿಸಿ ಬಸ್‌ನಲ್ಲಿದ್ದ ಪ್ರಯಾಣಿಕರನ್ನು ಇಳಿಸಿದ್ದಾನೆ. ಈ ವೇಳೆ ನಡೆದ ವಾಗ್ವಾದದಲ್ಲಿ ನಿರ್ವಾಹಕ ‘ಪುಕ್ಕಟೆ ಬಸ್‌ ಇದೆ ಎಂದು ಎಲ್ಲಿಗೆ ಬೇಕಾದರೂ ಬಸ್‌ ನಿಲ್ಲಿಸುವಂತೆ ಕೇಳುತ್ತೀರಾ ಎಂದು ಪ್ರಯಾಣಿಕರನ್ನು ಹೀಯಾಳಿಸಿದ್ದಾನೆ’ ಎಂದು ದೂರಿನಲ್ಲಿ ತಿಳಿಸಿದ್ದಾರೆ.

ಪ್ರಯಾಣಿಕರನ್ನು ನಿಂದಿಸುತ್ತಿರುವುದನ್ನು ಮೊಬೈಲ್‌ನಲ್ಲಿ ವಿಡಿಯೊ ಚಿತ್ರೀಕರಣ ಮಾಡುತ್ತಿದ್ದಾಗ ನಿರ್ವಾಹಕ ದ್ಯಾಮಪ್ಪ ನನ್ನನ್ನು ಅವಾಚ್ಯ ಪದಗಳಿಂದ ನಿಂದಿಸಿದ್ದಾನೆ. ಬೆದರಿಕೆ ಒಡ್ಡಿ ನನ್ನ ಕೈಯಲ್ಲಿದ್ದ ಮೊಬೈಲ್‌ ಕಿತ್ತುಕೊಂಡು ನೆಲಕ್ಕೆ ಎಸೆದಿದ್ದಾನೆ. ದ್ಯಾಮಪ್ಪ ನನ್ನ ಕರ್ತವ್ಯಕ್ಕೆ ಅಡ್ಡಿಪಡಿಸಿದ್ದು, ಮೊಬೈಲ್‌ನಲ್ಲಿದ್ದ ವೈಯಕ್ತಿಕ ದಾಖಲಾತಿ ಮತ್ತು ಘಟನೆಯ ಸಾಕ್ಷಿ ನಾಶ ಮಾಡಿದ್ದಾನೆ ಎಂದು ರವೀಂದ್ರ ದೂರು ನೀಡಿದ್ದು, ನಗರ ಪೊಲೀಸ್‌ ಠಾಣೆಯಲ್ಲಿ ಎಫ್‌ಐಆರ್‌ ದಾಖಲಾಗಿದೆ.  

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.