ಕನಕಗಿರಿ: ಇಲ್ಲಿನ ಐತಿಹಾಸಿಕ ಪ್ರಸಿದ್ಧ ಕನಕಾಚಲಪತಿ ದೇವಸ್ಥಾನದ ಮುಂದೆ ಹಾಲುಗಂಬ ಉತ್ಸವ ಮಂಗಳವಾರ ರಾತ್ರಿ ವಿಜೃಂಭಣೆಯಿಂದ ನಡೆಯಿತು. ಸಾವಿರಾರು ಜನ ದೇವಸ್ಥಾನದ ಆವರಣದಲ್ಲಿ ಸೇರಿದ್ದರು. ಅರ್ಚಕ ಮನೆತನವರು ವಿವಿಧ ಧಾರ್ಮಿಕ ವಿಧಿ ವಿಧಾನ ನಡೆಸಿದರು.
ಕನಕಗಿರಿ ಸೇರಿದಂತೆ ಗುಡದೂರು, ಕರಡಿಗುಡ್ಡ, ಚಿಕ್ಕ ಮಾದಿನಾಳ, ಹಿರೇಮಾದಿನಾಳ, ಬಂಕಾಪುರ, ಕೆ. ಮಲ್ಲಾಪುರ, ಒಳಗೊಂಡಂತೆ ಅನೇಕ ಗ್ರಾಮದ ಗೊಲ್ಲ ಜನಾಂಗದವರಿಂದ ಆಚರಿಸುವ ಈ ಉತ್ಸವ ಜನರ ಮನಸೂರೆಗೊಂಡಿತು.
ಇದಕ್ಕೂ ಮುನ್ನ ಗೊಲ್ಲರು ಐದು ದಿನಗಳ ಕಾಲ ತಾವು ಸಂಗ್ರಹಿಸಿಟ್ಟಿದ್ದ ಹಾಲು, ಮೊಸರು, ತುಪ್ಪವನ್ನು ಮಡಿಕೆಯಲ್ಲಿ ತುಂಬಿಕೊಂಡು ಎದರು ಹನುಮಪ್ಪ ದೇವಸ್ಥಾನದಿಂದ ಅಶ್ವರೋಹಣ ಉತ್ಸವ, ಭಾಜಾಭಜಂತ್ರಿಯೊಂದಿಗೆ ಮೆರವಣಿಗೆ ಮೂಲಕ ಕನಕಾಚಲಪತಿ ದೇವಸ್ಥಾನದ ವರೆಗೆ ಬಂದರು.
ಬೃಹತ್ ಕಂಬಕ್ಕೆ ಜಿಡ್ಡು ತರುವ ಹಾಗೂ ಹೈನು ಪದಾರ್ಥಗಳನ್ನು ಲೇಪಿಸಿದ್ದು ಕಂಬ ಮೇಲೆ ಕುಳಿತ ವ್ಯಕ್ತಿಯೊಬ್ಬರು ಹಾಲು, ಮೊಸರು ಕಂಬಕ್ಕೆ ಸುರಿದಾಗ ಕಂಬದ ತುದಿ ತಲುಪಲು ಗೊಲ್ಲ ಸಮುದಾಯದ ಯುವಕರು ಹರಸಾಹಸ ಮಾಡಿ ಕೊನೆಗೆ ಜಾರಿ ಕೆಳಗೆ ಬೀಳುತ್ತಿರುವುದನ್ನು ಕಂಡು ನೆರೆದ ಜನತೆ ನಗೆಗಡಲಲ್ಲಿ ತೇಲಿದರು. ಮೇಲೆರಲು ಎಷ್ಟೇ ಪ್ರಯತ್ನ ಪಟ್ಟರೂ ಯಶ ಕಾಣಲಿಲ್ಲ ಹೀಗಾಗಿ ಹಗ್ಗದ ಸಹಾಯ ಪಡೆದು ಕಂಬ ಏರಿದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.