ಕಾರಟಗಿಯಲ್ಲಿ ಬಿಜೆಪಿ ಜಿಲ್ಲಾಧ್ಯಕ್ಷ, ಮಾಜಿ ಶಾಸಕ ಬಸವರಾಜ ದಢೇಸೂಗೂರು ಹಾಗೂ ಬೆಂಗಳೂರಿನ ಸಪ್ತಗಿರಿ ಆಸ್ಪತ್ರೆ ಸಹಯೋಗದಲ್ಲಿ ಭಾನುವಾರ ಉಚಿತ ಆರೋಗ್ಯ ತಪಾಸಣಾ ಶಿಬಿರದಲ್ಲಿ ನೆರೆದ ಜನರು, ಮುಖಂಡರು, ವೈದ್ಯರು ಇದ್ದರು
ಕಾರಟಗಿ: ‘ಸದೃಢ ಆರೋಗ್ಯದಿಂದ ಸದೃಢ ಸಮಾಜ ಹಾಗೂ ಬಲಿಷ್ಠ ದೇಶ ನಿರ್ಮಾಣ ಸಾಧ್ಯ’ ಎಂದು ರಾಜ್ಯ ಬಿಜೆಪಿ ಎಸ್ಟಿ ಮೋರ್ಚಾ ಮಾಜಿ ಕಾರ್ಯದರ್ಶಿ ನಾಗರಾಜ ಬಿಲ್ಗಾರ್ ಹೇಳಿದರು.
ಪಟ್ಟಣದ ಕೆರೆಬಸವೇಶ್ವರ ಕಲ್ಯಾಣ ಮಂಟಪದಲ್ಲಿ ಭಾನುವಾರ ಬಿಜೆಪಿ ಜಿಲ್ಲಾಧ್ಯಕ್ಷ, ಮಾಜಿ ಶಾಸಕ ಬಸವರಾಜ ದಢೇಸೂಗೂರು ಹಾಗೂ ಬೆಂಗಳೂರಿನ ಸಪ್ತಗಿರಿ ಆಸ್ಪತ್ರೆ ಸಂಯುಕ್ತಾಶ್ರದಲ್ಲಿ ನಡೆದ ಉಚಿತ ಆರೋಗ್ಯ ತಪಾಸಣಾ ಶಿಬಿರಕ್ಕೆ ಚಾಲನೆ ನೀಡಿ ಅವರು ಮಾತನಾಡಿದರು.
‘ಜನರ ಆರೋಗ್ಯದ ಹಿತದೃಷ್ಟಿಯಿಂದ ಕೇಂದ್ರ ಸರ್ಕಾರ ಆರೋಗ್ಯ ಕ್ಷೇತ್ರದಲ್ಲಿ ಅನೇಕ ಯೋಜನೆಗಳನ್ನು, ರಿಯಾಯಿತಿಯನ್ನು ಜಾರಿಗೊಳಿಸಿದೆ. ಕೋವಿಡ್ ಸಂದರ್ಭದಲ್ಲೂ ದೇಶವನ್ನು ಸದೃಢ, ಸುರಕ್ಷಿತವಾಗಿ ಮುನ್ನಡೆಸಿದ ಕೇಂದ್ರ ಸರ್ಕಾರ, ಜನರ ರಕ್ಷಣೆಗೆ ಸಮರೋಪಾದಿಯಲ್ಲಿ ಕೆಲಸ ಮಾಡಿ ಯಶ ಕಂಡಿತ್ತು. ಆಯುಷ್ಮಾನ್ ಭಾರತ್, ಜನೌಷಧಿ ಕೇಂದ್ರ, ವೈದ್ಯಕೀಯ ಶಿಕ್ಷಣದ ಪ್ರಗತಿ, ಸಲಕರಣೆಗಳ ದರದಲ್ಲಿ ಭಾರಿ ರಿಯಾಯಿತಿ ಸೇರಿದಂತೆ ಅನೇಕ ಯೋಜನೆಗಳಡಿ ಆರೋಗ್ಯ ಕ್ಷೇತ್ರದಲ್ಲಿ ಕ್ರಾಂತಿ ಮಾಡಲಾಗಿದೆ. ಬಡ ಹಾಗೂ ಮಧ್ಯಮ ವರ್ಗದವರ ಆರೋಗ್ಯ ಕಾಪಾಡಲು ಅನೇಕ ನೆರವನ್ನು ಕೇಂದ್ರ ಸರ್ಕಾರ ನೀಡುತ್ತಿದೆ’ ಎಂದು
ಹೇಳಿದರು.
ಬಿಜೆಪಿ ಮಂಡಲ ಅಧ್ಯಕ್ಷ ಮಂಜುನಾಥ ಮಸ್ಕಿ ಮಾತನಾಡಿ, ‘ಬೆಂಗಳೂರಿನ ವೈದ್ಯ ಡಾ.ವಿಶ್ವನಾಥರೆಡ್ಡಿ ನೇತೃತ್ವದಲ್ಲಿ 8 ವೈದ್ಯರ ತಂಡದಿಂದ ಹೃದಯ ರೋಗ, ಕ್ಯಾನ್ಸರ್, ಮೂತ್ರಪಿಂಡದಲ್ಲಿಯ ಕಲ್ಲಿನ ಸಮಸ್ಯೆ, ಹೊಟ್ಟೆ ಹುರಿ, ನರರೋಗಗಳಿಗೆ ಸಂಬಂಧಿಸಿ ಸುಮಾರು 600 ಜನರ ಆರೋಗ್ಯ ತಪಾಸಣೆ ಮಾಡಲಾಗುತ್ತಿದೆ. ತಪಾಸಣೆಯಲ್ಲಿ 40 ಜನರಿಗೆ ಶಸ್ತ್ರಚಿಕಿತ್ಸೆಯ ಅಗತ್ಯವಿದ್ದು, ಬೆಂಗಳೂರಿನಲ್ಲಿ ಉಚಿತವಾಗಿ ನಡೆಸಲಾಗುವುದು’ ಎಂದರು.
ಮಾಜಿ ಶಾಸಕ, ಬಿಜೆಪಿ ಜಿಲ್ಲಾಧ್ಯಕ್ಷ ಬಸವರಾಜ ದಢೇಸೂಗೂರು, ಪುರಸಭೆ ಸದಸ್ಯರಾದ ಬಸವರಾಜ ಕೊಪ್ಪದ, ಆನಂದ ಎಂ, ಬಿಜೆಪಿ ಜಿಲ್ಲಾ ಪ್ರಧಾನ ಕಾರ್ಯದರ್ಶಿ ರಮೇಶ್ ನಾಡಿಗೇರ, ಯುವ ಮೋರ್ಚಾ ಜಿಲ್ಲಾಧ್ಯಕ್ಷ ಮೌನೇಶ ದಢೇಸೂಗೂರು, ವಾಣಿಜ್ಯೋದ್ಯಮಿ ಕೆ. ನಾಗಪ್ಪ, ಪ್ರಮುಖರಾದ ಉಮೇಶ ಭಂಗಿ, ಬಸವರಾಜ ಎತ್ತಿನಮನಿ, ಬಸವರಾಜ ಶೆಟ್ಟರ್, ರತ್ನಕುಮಾರಿ, ಹೊನ್ನೂರಪ್ಪ ಮಡಿವಾಳರ್, ರೈತ ಮುಖಂಡ ಮರಿಯಪ್ಪ ಸಾಲೋಣಿ ಉಪಸ್ಥಿತರಿದ್ದರು.
ಶಸ್ತ್ರಚಿಕಿತ್ಸೆ ಮಾಡಿಸಿಕೊಳ್ಳಬೇಕಾದವರು ಬಿಪಿಎಲ್ ಪಡಿತರ ಕಾರ್ಯ ತಂದರೆ, ಬೆಂಗಳೂರಿಗೆ ನಾವೇ ವೆಚ್ಚ ಭರಿಸಿ, ಇತರೆಲ್ಲಾ ಅನುಕೂಲ ಕಲ್ಪಿಸಿ ಶಸ್ತ್ರಚಿಕಿತ್ಸೆ ಮಾಡಿಸಲಾಗುವುದುಜಿಲ್ಲಾ ಬಿಜೆಪಿ ಅಧ್ಯಕ್ಷ
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.