
ಕೊಪ್ಪಳ: ತಾಲ್ಲೂಕಿನ ಹುಲಿಗಿಯ ಹುಲಿಗೆಮ್ಮ ದೇವಿ ದೇವಸ್ಥಾನಕ್ಕೆ ಭಾರತ ಹುಣ್ಣಿಮೆ ಅಂಗವಾಗಿ ಭಾನುವಾರ ಲಕ್ಷಾಂತರ ಭಕ್ತರು ಭೇಟಿ ನೀಡಿದ ದರ್ಶನ ಪಡೆದುಕೊಂಡರು. ಸೂರ್ಯೋದಯಕ್ಕೂ ಮೊದಲೇ ಭಕ್ತರ ಸಂಖ್ಯೆ ಲಕ್ಷ ದಾಟಿತ್ತು ಎನ್ನುವುದು ವಿಶೇಷ.
ರಜೆಯ ದಿನವಾದ ಭಾನುವಾರವೇ ಈ ಬಾರಿ ಹುಣ್ಣಿಮೆ ಬಂದಿದ್ದರಿಂದ ಭಕ್ತರ ಸಂಖ್ಯೆ ಹೆಚ್ಚಾಗಿತ್ತು. ಮಾಸಾಂತ್ಯದ ಕೊನೆಯ ದಿನವಾದ ಶನಿವಾರ ಜಿಲ್ಲೆ, ಹೊರಜಿಲ್ಲೆ ಹಾಗೂ ಹೊರರಾಜ್ಯಗಳಿಂದ ಬಂದಿದ್ದ ಜನ ಹುಲಿಗಿಯಲ್ಲಿಯೇ ಉಳಿದುಕೊಂಡು ಮರುದಿನ ತುಂಗಭದ್ರಾ ನದಿಯಲ್ಲಿ ಸ್ನಾನ ಮಾಡಿ ದೇವಿಯ ದರ್ಶನ ಪಡೆದರು. ದೇವಸ್ಥಾನದ ಮುಂಭಾಗದಲ್ಲಿರುವ ವಿಶಾಲವಾದ ಆವರಣದಲ್ಲಿಯೇ ಚುಮುಚುಮು ಚಳಿಯನ್ನೂ ಲೆಕ್ಕಿಸದೆ ಮಲಗಿದ್ದರು.
ಭಾನುವಾರ ಬೆಳಗಿನ ಜಾವ ನಾಲ್ಕು ಗಂಟೆಗೆಲ್ಲ ಭಕ್ತರ ಸಂಖ್ಯೆ ಹೆಚ್ಚಾಗುತ್ತಲೇ ಹೋಯಿತು. ದೇವಸ್ಥಾನದ ಆವರಣದಿಂದ ಮುಖ್ಯದ್ವಾರದಿಂದ ಹೊರಬಂದು ಬಲಕ್ಕೆ ತೆರಳುವ ರಸ್ತೆಯಲ್ಲಿಯೇ ಅನೇಕರು ದ್ವಿಚಕ್ರ ವಾಹನಗಳನ್ನು ನಿಲ್ಲಿಸಿದ್ದರು. ಇನ್ನೂ ಕೆಲವರು ಅಲ್ಲಿಯೇ ಟೆಂಗಿನಕಾಯಿ ವ್ಯಾಪಾರ ಮಾಡುತ್ತಿದ್ದರಿಂದ ದರ್ಶನಕ್ಕೆ ಹೋದವರು ಮತ್ತು ಹೋಗಬೇಕಾದ ಜನ ಪರದಾಡಬೇಕಾಯಿತು. ಅನೇಕ ವಯಸ್ಕರು, ಹಿರಿಯರು ಜೊತೆಯಲ್ಲಿ ಮಕ್ಕಳನ್ನು ಕರೆದುಕೊಂಡು ಬಂದವರು ತಳ್ಳಾಡಿಕೊಂಡು ಜನಜಂಗುಳಿಯಿಂದ ಪಾರಾಗಬೇಕಾಯಿತು.
ಈ ಹುಣ್ಣಿಮೆಗೆ ಭಕ್ತರು ಸಾಕಷ್ಟು ಸಂಖ್ಯೆಯಲ್ಲಿ ಬರುವುದು ನಿಶ್ಚಿತವೇ ಆಗಿದ್ದರಿಂದ ಮುಂಜಾಗ್ರತಾ ಕ್ರಮವಾಗಿ ಬ್ಯಾರಿಕೇಡ್ಗಳನ್ನು ಅಳವಡಿಸಿ ಸರಾಗ ದರ್ಶನಕ್ಕೆ ವ್ಯವಸ್ಥೆ ಮಾಡಲಾಗಿತ್ತು. ಅತಿ ಗಣ್ಯ ವ್ಯಕ್ತಿಗಳಿಗೆ ಪ್ರತ್ಯೇಕ ಪಥ ಮಾಡಿ ಅಲ್ಲಿ ₹250 ದರ ನಿಗದಿ ಮಾಡಲಾಗಿತ್ತು.
ರಜೆಯ ದಿನ ಹೊತ್ತು ಏರುತ್ತಿದ್ದಂತೆಯೇ ಜನರ ಸಂಖ್ಯೆಯೂ ಹೆಚ್ಚಾಗುತ್ತಲೇ ಹೋಯಿತು. ಮಧ್ಯರಾತ್ರಿಯಿಂದಲೇ ಹುಲಿಗಿಯ ದೇವಸ್ಥಾನದ ಸಮೀಪಕ್ಕೆ ಬರುವ ವಿವಿಧ ಮಾರ್ಗಗಳಲ್ಲಿ ಪೊಲೀಸರನ್ನು ನಿಯೋಜಿಸಲಾಗಿತ್ತು. ಕೊಪ್ಪಳ, ಹಿಟ್ನಾಳ, ಮುನಿರಾಬಾದ್ ಹೀಗೆ ಸುತ್ತಮುತ್ತಲ ಪ್ರದೇಶಗಳಿಂದ ಅನೇಕ ಭಕ್ತರು ಪಾದಯಾತ್ರೆ ಮೂಲಕ ದೇವಸ್ಥಾನ ತಲುಪಿ ದರ್ಶನ ಪಡೆದುಕೊಂಡರು.
ದೇವಸ್ಥಾನಕ್ಕೆ ಬಂದ ಭಕ್ತರಿಗೆ ಹುಲಿಗೆಮ್ಮ ದೇವಿ ದೇವಸ್ಥಾನ ಅಭಿವೃದ್ಧಿ ಪ್ರಾಧಿಕಾರದ ವತಿಯಿಂದ ಪ್ರಸಾದದ ವ್ಯವಸ್ಥೆ ಮಾಡಲಾಗಿತ್ತು. ದೇವಿಯ ಮೂರ್ತಿಗೆ ತರಹೇವಾರಿ ಹೂಗಳಿಂದ ಅಲಂಕಾರ ಮಾಡಿದ್ದು ಗಮನ ಸೆಳೆಯಿತು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.