ADVERTISEMENT

ವಿಜಯೇಂದ್ರ ಹೇಳಿಕೊಟ್ಟಿದ್ದನ್ನು ಕೇಳಲು ಬಂದಿದ್ದೀರಾ: ಮಾಧ್ಯಮಗಳ ವಿರುದ್ಧ ಯತ್ನಾಳ

​ಪ್ರಜಾವಾಣಿ ವಾರ್ತೆ
Published 31 ಮಾರ್ಚ್ 2025, 10:44 IST
Last Updated 31 ಮಾರ್ಚ್ 2025, 10:44 IST
<div class="paragraphs"><p>ಶಾಸಕ ಬಸನಗೌಡ ಪಾಟೀಲ ಯತ್ನಾಳ ಅವರು ಸೋಮವಾರ ಗವಿಸಿದ್ಧೇಶ್ವರ ಮಠಕ್ಕೆ ಭೇಟಿ ನೀಡಿದ್ದರು.</p></div>

ಶಾಸಕ ಬಸನಗೌಡ ಪಾಟೀಲ ಯತ್ನಾಳ ಅವರು ಸೋಮವಾರ ಗವಿಸಿದ್ಧೇಶ್ವರ ಮಠಕ್ಕೆ ಭೇಟಿ ನೀಡಿದ್ದರು.

   

ಕೊಪ್ಪಳ: ಬಿಜೆಪಿಯ ಉಚ್ಛಾಟಿತ ಶಾಸಕ ಬಸನಗೌಡ ಪಾಟೀಲ ಯತ್ನಾಳ ಸೋಮವಾರ ಇಲ್ಲಿನ ಗವಿಸಿದ್ಧೇಶ್ವರ ಮಠಕ್ಕೆ ಭೇಟಿ ನೀಡಿದ ವೇಳೆ ಮಾಧ್ಯಮಗಳ ವಿರುದ್ಧ ಹರಿಹಾಯ್ದರು. ’ನೀವು ವಿಜಯೇಂದ್ರ ಹೇಳಿಕೊಟ್ಟಿದ್ದನ್ನು ಕೇಳಲು ಬಂದಿದ್ದೀರಾ’ ಎಂದು ಪ್ರಶ್ನಿಸಿದ್ದರಿಂದ ಮಾಧ್ಯಮ ಪ್ರತಿನಿಧಿಗಳು ಹಾಗೂ ಯತ್ನಾಳ ನಡುವೆ ಜಟಾಪಟಿ ನಡೆಯಿತು.

ಕಾಂಗ್ರೆಸ್ ಅಥವಾ ಬೇರೆ ಪಕ್ಷಗಳಿಗೆ ಹೋಗುತ್ತೀರಾ ಎಂದು ಕೇಳಲಾದ ಪ್ರಶ್ನೆಗೆ ‘ಕಾಂಗ್ರೆಸ್‌ ಮುಸ್ಲಿಮರ ಪಕ್ಷ. ಅಲ್ಲಿಗೆ ಈ ಜನ್ಮದಲ್ಲಿಯೂ ಹೋಗುವುದಿಲ್ಲ. ಮುಂದಿನ ಜನ್ಮವೂ ಹೋಗುವುದಿಲ್ಲ. ಈ ಕುರಿತು ಸಾಕಷ್ಟು ಅಪಪ್ರಚಾರ ನಡೆಯುತ್ತಿದೆ. ಬಿ.ವೈ. ವಿಜಯೇಂದ್ರನ ನಕಲಿ ಸಾಮಾಜಿಕ ತಾಣಗಳು ಇವೆ. ಅದರಲ್ಲಿ ಸುದ್ದಿಗಳನ್ನು ಹಾಕಲಾಗುತ್ತಿದ್ದು ಕೆಲವು ಮಾಧ್ಯಮದವರು ಕೂಡ ವಿಜಯೇಂದ್ರ ಹಾಗೂ ಯಡಿಯೂರಪ್ಪಗೆ ಬೆಂಬಲವಾಗಿ ನಿಂತಿವೆ’ ಎಂದು ಹರಿಹಾಯ್ದರು.

ADVERTISEMENT

‘ನಿಮ್ಮ ಜೊತೆಯಲ್ಲಿದ್ದ ರಮೇಶ ಜಾರಕಿಹೊಳಿ ಹಾಗೂ ಕುಮಾರ ಬಂಗಾರಪ್ಪ ಈಗಲೂ ಇದ್ದಾರೆಯೇ’ ಎಂದು ಕೇಳಲಾದ ಪ್ರಶ್ನೆಗೆ ‘ಯಾವಾಗಲೂ ನನ್ನ ಜೊತೆಗೆ ಇರುತ್ತಾರೆ. ಈ ಬಗ್ಗೆ ಇತ್ತೀಚೆಗಷ್ಟೇ ಉತ್ತರ ಕೊಟ್ಟಿದ್ದೇನೆ. ಇಂಥ ಪ್ರಶ್ನೆ ಕೇಳಲು ವಿಜಯೇಂದ್ರ ನಿಮಗೆ ಹೇಳಿದ್ದನಾ? ವಿಜಯೇಂದ್ರ ವ್ಯಾಟ್ಸ್‌ ಆ್ಯಪ್‌ನಲ್ಲಿ ಕಳಿಸುವ ಪ್ರಶ್ನೆಯನ್ನು ಕೇಳುತ್ತೀರಾ?’ ಎಂದರು. ನೀವು ಜೋರು ಮಾತನಾಡುವುದಾದರೆ ‘ಗೇಟ್‌ ಔಟ್‌’ ಎಂದು ಆಕ್ರೋಶ ವ್ಯಕ್ತಪಡಿಸಿದರು.

‘ವೀರಶೈವ ಲಿಂಗಾಯತರಿಗೆ ಮೀಸಲಾತಿ ತಪ್ಪಿಸಿದ್ದೇ ಅಪ್ಪ–ಮಗ. ನಮ್ಮನ್ನು ಜೈಲಿಗೆ ಹಾಕಿಸಲು ಬೆಂಗಳೂರಿನ ಕೇಂದ್ರ ಕಾರಾಗೃಹದಲ್ಲಿರುವ ಲಿಂಗಾಯತ ಐಪಿಎಸ್‌ ಅಧಿಕಾರಿಯೊಬ್ಬರನ್ನು ವಿಜಯೇಂದ್ರ ನಮ್ಮ ಬಳಿ ಕಳುಹಿಸಿದ್ದ’ ಎಂದರು. ಯಾರು ಆ ಐಪಿಎಸ್‌ ಅಧಿಕಾರಿ ಎಂದು ಪ್ರಶ್ನಿಸಿದ್ದಕ್ಕೆ ‘ಮಾಧ್ಯಮದವರೇ ನಾಟಕ ಕಂಪನಿ ಬಂದ್‌ ಮಾಡಿ’ ಎಂದರು.

‘ರಾಜ್ಯದಾದ್ಯಂತ ಸುತ್ತಾಡಿ ವಿಜಯದಶಮಿ ತನಕ ಜನರ ಅಭಿಪ್ರಾಯ ಸಂಗ್ರಹಿಸಿ ಬಳಿಕ ಮುಂದಿನ ರಾಜಕೀಯ ನಡೆ ನಿರ್ಧರಿಸುವೆ. ಕರ್ನಾಟಕದ ಎಲ್ಲ ಮಾಧ್ಯಮಗಳ ನಿಷ್ಪಕ್ಷಪಾತವಾಗಿದ್ದರೆ ಮಾತ್ರ ನನ್ನ ಬಳಿ ಮಾತನಾಡಲು ಬನ್ನಿ. ನೀವು ಯಡಿಯೂರಪ್ಪ ಹಾಗೂ ವಿಜಯೇಂದ್ರ ಬೆಂಬಲಿಗರಾದರೆ ಬರಬೇಡಿ. ಯಾವ ಮಾಧ್ಯಮದವರು ಏನು ಆಟವಾಡುತ್ತವೆ ಎನ್ನುವುದು ನನಗೆ ಗೊತ್ತಿದೆ. ಕೆಲವು ಮಾಧ್ಯಮಗಳು ತಮ್ಮಿಂದಲೇ ರಾಜ್ಯದ ಜನರ ಅಭಿಪ್ರಾಯ ರೂಪುಗೊಳ್ಳುತ್ತವೆ ಎಂದು ಭಾವಿಸಿದ್ದು ಮೂರ್ಖತನ’ ಎಂದು ಆಕ್ರೋಶಗೊಂಡರು.

ಹೈಕಮಾಂಡ್‌ ವಿರುದ್ಧವೂ ಗರಂ: ‘ಅಪ್ಪ ಮಗ ಲಿಂಗಾಯತರು ಹಾಗೂ ಬಿಜೆಪಿ ಹೆಸರಿನಲ್ಲಿ ಹತ್ತಾರು ಸಾವಿರ ಕೋಟಿ ರೂಪಾಯಿ ಲೂಟಿ ಮಾಡಿದ್ದಾರೆ. ಮುಖ್ಯಮಂತ್ರಿ ಆಗಿ ಜೈಲಿಗೆ ಹೋದ ಯಡಿಯೂರಪ್ಪ, ಅಪ್ಪನ ಸಹಿ ನಕಲಿ ಮಾಡಿದ ಕುಟುಂಬಕ್ಕೆ ಬಿಜೆಪಿ ಹೈಕಮಾಂಡ್‌ ನನ್ನನ್ನು ಉಚ್ಛಾಟಿಸುವ ಮೂಲಕ ಬೆಂಬಲವಾಗಿ ನಿಂತಿದೆ. ಹೈಕಮಾಂಡ್‌ ರಾಜ್ಯದಲ್ಲಿ ಬಿಜೆಪಿಯನ್ನು ಯಡಿಯೂರಪ್ಪಗೆ ಲೀಸ್‌ ಕೊಟ್ಟಿದೆಯಾ? ಅಥವಾ ಆ ಕುಟುಂಬಕ್ಕೆ ಮಾರಿಕೊಂಡಿದೆಯಾ ಎನ್ನುವ ಪ್ರಶ್ನೆ ರಾಜ್ಯದ ಜನರಲ್ಲಿದೆ’ ಎಂದು ಹೇಳಿದರು.

‘ನನ್ನನ್ನು ಬಿಟ್ಟುಬಿಡಿ. ಸಾಮಾಜಿಕ ಜಾಲತಾಣಗಳ ಮೂಲಕ ಜನರ ಅಭಿಪ್ರಾಯ ಪಡೆದುಕೊಳ್ಳುವೆ. ಅಲ್ಲಿ ನಮ್ಮ ಯುವಕರು ಹಾಗೂ ಹಿಂದೂಗಳು ಇದ್ದಾರೆ. ರಾಜ್ಯದಲ್ಲಿ ಕಾಂಗ್ರೆಸ್‌ ಜೊತೆ ಬಿಜೆಪಿ ಹೊಂದಾಣಿಕೆ ರಾಜಕಾರಣ ಮಾಡುತ್ತಿದೆ. ರಾಜ್ಯ ಸರ್ಕಾರ ಕೋರ್ಟ್‌ನಲ್ಲಿ ಸರಿಯಾದ ವಾದ ಮಾಡಿದರೆ ಫೋಕ್ಸೊ ಪ್ರಕರಣದಲ್ಲಿ ಯಡಿಯೂರಪ್ಪ ಜೈಲಿಗೆ ಹೋಗುತ್ತಾರೆ’ ಎಂದರು.

‘ವಿಜಯೇಂದ್ರ ಎಲ್ಲ ಕೆಟ್ಟ ಕೆಲಸಗಳನ್ನು ಮಾಡಿ ಆ ವಿಡಿಯೊಗಳನ್ನು ಐಪಿಎಸ್‌ ಅಧಿಕಾರಿ ಮೂಲಕ ಡಿಲಿಟ್‌ ಮಾಡಿಸಿದ್ದಾನೆ. ಆದರೆ, ವಾಲ್ಮೀಕಿ ಸಮುದಾಯದ ರಮೇಶ ಜಾರಕಿಹೊಳಿಯನ್ನು ಬಲಿಪಶುಮಾಡಲಾಯಿತು. ಜಾರಕಿಹೊಳಿ ಪ್ರಕರಣದಲ್ಲಿ ವಿಜಯೇಂದ್ರ ಕೈವಾಡವಿದೆ. ಜಾರಕಿಹೊಳಿ ನೀರಾವರಿ ಸಚಿವರಾದಾಗ ಹಣ ಕೊಳ್ಳೆ ಹೊಡೆಯಲು ವಿಜಯೇಂದ್ರ ಅವಕಾಶ ಸಿಗಲಿಲ್ಲ. ಅದಕ್ಕೆ ಹೀಗೆ ಮಾಡಿದ್ದಾನೆ’ ಎಂದು ಆರೋಪಿಸಿದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.