ಕೊಪ್ಪಳ: ಹಲವು ಮಹಿಳೆಯರ ಮೇಲೆ ಅತ್ಯಾಚಾರ ಎಸಗಿದ ಆರೋಪ ಎದುರಿಸುತ್ತಿರುವ ಜೆಡಿಎಸ್ ಸಂಸದ ಪ್ರಜ್ವಲ್ ರೇವಣ್ಣ ಅವರನ್ನು ಬಂಧಿಸಬೇಕು ಎಂದು ಆಗ್ರಹಿಸಿ ಜಿಲ್ಲಾ ಮಹಿಳಾ ಕಾಂಗ್ರೆಸ್ ವತಿಯಿಂದ ಇಲ್ಲಿನ ಅಶೋಕ ವೃತ್ತದಲ್ಲಿ ಶನಿವಾರ ಪ್ರತಿಭಟನೆ ನಡೆಯಿತು.
ಬೇಟಿ ಬಚಾವೊ ಅಂದವರು ಈಗೆಲ್ಲಿದ್ದಾರೆ?, ಹಾಸನದ ಪೆನ್ ಡ್ರೈವ್ ಬಗ್ಗೆ ಬಿಜೆಪಿ ಹೋರಾಟ ಯಾವಾಗ? ಎಂದು ಪಕ್ಷದ ಮುಖಂಡರು ಪ್ರಶ್ನಿಸಿದರು.
ಮಹಿಳೆಯರ ಗೌರವ ಕಳೆಯುವುದೇ ಬಿಜೆಪಿ ಕೆಲಸವಾಗಿದೆ ಎಂದು ಆರೋಪಿಸಿ ಎಚ್.ಡಿ. ದೇವೇಗೌಡ ಕುಟುಂಬದವರು ಪ್ರಧಾನಿ ನರೇಂದ್ರ ಮೋದಿ ಅವರನ್ನು ಭೇಟಿಯಾದಾಗ ತೆಗೆದ ಚಿತ್ರವನ್ನು ಪ್ರದರ್ಶಿಸಿದರು.
ಪಕ್ಷದ ನಾಯಕರಾದ ಸಾವಿತ್ರಿ ಮುಜಮದಾರ, ಅಮರೇಶ ಕರಡಿ ಮಾತನಾಡಿ ಪ್ರಜ್ವಲ್ ಕರ್ಮಕಾಂಡದ ಬಗ್ಗೆ ಅವರ ಕುಟುಂಬದವರಿಗೆ ಮೊದಲೇ ಗೊತ್ತಿತ್ತು. ಆದ್ದರಿಂದ ಲೋಕಸಭಾ ಚುನಾವಣೆಗೆ ಬಿಜೆಪಿ ಜೊತೆ ಮೈತ್ರಿ ಮಾಡಿಕೊಡು ಆರೋಪಿಯನ್ನು ರಕ್ಷಿಸುವ ಪ್ರಯತ್ನ ನಡೆಯುತ್ತಿದೆ ಎಂದರು. ಚುನಾವಣೆ ಬಳಿಕ ಮೈತ್ರಿ ಮುಗಿದು ಬೀಳುತ್ತದೆ ಎಂದು ಹೇಳಿದರು.
ಪಕ್ಷದ ಜಿಲ್ಲಾಧ್ಯಕ್ಷೆ ಮಾಲತಿ ನಾಯಕ, ಪ್ರಮುಖರಾದ ಜ್ಯೋತಿ ಗೊಂಡಬಾಳ, ಕಿಶೋರಿ ಬೂದನೂರ, ರಜಿಯಾ ಮನಿಯಾರ್, ರೇಷ್ಮಾ ಖಾಜಾವಲಿ, ಸವಿತಾ ಗೋರಂಟ್ಲಿ, ನಾಗರತ್ನ ಪೂಜಾರ, ಸುಮಂಗಲಾ ನಾಯಕ, ಯಶೋಧಾ ಮರಡಿ, ಕಾವೇರಿ ಆರ್. ಬಸವರಾಜ ಭೋವಿ ಸೇರಿದಂತೆ ಅನೇಕರು ಪಾಲ್ಗೊಂಡಿದ್ದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.