ADVERTISEMENT

‘ಭಿನ್ನಾಭಿಪ್ರಾಯ ಬಿಟ್ಟು ಸಮಾಜ ಸಂಘಟಿಸಿ‘: ಬಸವ ಜಯಮೃತ್ಯುಂಜಯ ಸ್ವಾಮೀಜಿ

ಪಂಚಮಸಾಲಿ ಕ್ಷೇಮಾಭಿವೃದ್ದಿ ಸಂಘದಿಂದ ಸಾಧಕ ವಿದ್ಯಾರ್ಥಿಗಳಿಗೆ ಪ್ರತಿಭಾ ಪುರಸ್ಕಾರ

​ಪ್ರಜಾವಾಣಿ ವಾರ್ತೆ
Published 15 ಜೂನ್ 2025, 16:00 IST
Last Updated 15 ಜೂನ್ 2025, 16:00 IST
ಕಾರಟಗಿಯಲ್ಲಿ ಭಾನುವಾರ ನಡೆದ ಪ್ರತಿಭಾ ಪುರಸ್ಕಾರ ಹಾಗೂ ಪದಾಧಿಕಾರಿಗಳ ಪದಗ್ರಹಣ ಕಾರ್ಯಕ್ರಮವನ್ನು ಸ್ವಾಮೀಜಿಗಳು ಹಾಗೂ ಸಚಿವರು ಉದ್ಘಾಟಿಸಿದರು  
ಕಾರಟಗಿಯಲ್ಲಿ ಭಾನುವಾರ ನಡೆದ ಪ್ರತಿಭಾ ಪುರಸ್ಕಾರ ಹಾಗೂ ಪದಾಧಿಕಾರಿಗಳ ಪದಗ್ರಹಣ ಕಾರ್ಯಕ್ರಮವನ್ನು ಸ್ವಾಮೀಜಿಗಳು ಹಾಗೂ ಸಚಿವರು ಉದ್ಘಾಟಿಸಿದರು     

ಕಾರಟಗಿ: ‘ಭಿನ್ನಾಭಿಪ್ರಾಯ ಸಹಜ, ಅದೆಲ್ಲವನ್ನೂ ಬಿಟ್ಟು ಸಮಾಜ ಕಟ್ಟುವುದು ಅಗತ್ಯ. 2ಎ ಮೀಸಲಾತಿ ಹೋರಾಟ ಬಿಜೆಪಿ ಆಡಳಿತಾವಧಿಯಲ್ಲಿ ನಡೆಯುತ್ತದೆ ಎನ್ನುತ್ತಿದ್ದರು. ನಾವಿಗಾಗಲೇ ಕಾಂಗ್ರೆಸ್ ಆಡಳಿತ ವಿರುದ್ಧವೂ ಹೋರಾಟ ನಡೆಸಿ, ಶಕ್ತಿ ಪ್ರದರ್ಶನ ಮಾಡಿದ್ದೇವೆ’ ಎಂದು ಕೂಡಲಸಂಗಮದ ಪಂಚಮಸಾಲಿ ಪೀಠದ ಬಸವ ಜಯಮೃತ್ಯುಂಜಯ  ಸ್ವಾಮೀಜಿ ಹೇಳಿದರು.

ಪಟ್ಟಣದ ಕೆರೆಬಸವೇಶ್ವರ ಕಲ್ಯಾಣ ಮಂಟಪದಲ್ಲಿ ತಾಲ್ಲೂಕು ಪಂಚಮಸಾಲಿ ಕ್ಷೇಮಾಭಿವೃದ್ಧಿ ಸಂಘದಿಂದ ಭಾನುವಾರ ನಡೆದ ಪ್ರತಿಭಾ ಪುರಸ್ಕಾರ ಮತ್ತು ನೂತನ ಪದಾಧಿಕಾರಿಗಳ ಪದಗ್ರಹಣ ಕಾರ್ಯಕ್ರಮದಲ್ಲಿ ಸಾನ್ನಿಧ್ಯ ವಹಿಸಿ ಮಾತನಾಡಿದ ಅವರು ‘ಕೃಷಿಯನ್ನೇ ನಂಬಿಕೊಂಡಿರುವ ಪಂಚಮಸಾಲಿ ಸಮಾಜದ ಸಂಘಟನೆಗೆ ಸಮರ್ಪಣಾಭಾವದಿಂದ ಮುಂದಾಗಬೇಕು. ಸಚಿವ ತಂಗಡಗಿ ಅವರಿಗೆ ನಮ್ಮ ಹೋರಾಟದ ಬಗ್ಗೆ ಸದಾಭಿಪ್ರಾಯವಿದೆ. ಆದರೆ, ಮುಖ್ಯಮಂತ್ರಿ ಸಿದ್ದರಾಮಯ್ಯ ಅವರಿಗೆ ಇಲ್ಲ. ಮುಂದಿನ ದಿನಗಳಲ್ಲಿ ನಮ್ಮ ಹೋರಾಟಕ್ಕೆ ಜಯ ಸಿಗಲಿದೆ’ ಎಂದು ವಿಶ್ವಾಸ ವ್ಯಕ್ತಪಡಿಸಿದರು.

ಹರಿಹರ ಪೀಠದ ವಚನಾನಂದ ಸ್ವಾಮೀಜಿ ಮಾತನಾಡಿ ‘ಕಾರಟಗಿ ಜನತೆ ಸಹೃದಯರು, ಎಲ್ಲರನ್ನೂ ಪ್ರೀತಿಸುವ ಜನರಾಗಿದ್ದು, ಇಬ್ಬರೂ ಸ್ವಾಮೀಜಿಗಳನ್ನು ಒಂದೇ ವೇದಿಕೆಯಲ್ಲಿ ಕೂರಿಸಿ ಸಮಾಜದ ಸಂಘಟನೆಗೆ ಶಕ್ತಿ ತುಂಬಿದ್ದಾರೆ. ಸದೃಢ ಸಮಾಜ ಕಟ್ಟುವ ಹಿನ್ನೆಲೆಯಲ್ಲಿ ನಾವು ಒಂದಾಗಿದ್ದೇವೆ.  ಪಂಚಮಸಾಲಿಗಳನ್ನು ಕೇಂದ್ರ ಸರ್ಕಾರದ ಒಬಿಸಿ ಪಟ್ಟಿಯಲ್ಲಿ ಸೇರಿಸುವ ನಿಟ್ಟಿನಲ್ಲಿ ಈಗಾಗಲೇ ಕೇಂದ್ರ ಸರ್ಕಾರ ಸಕಾರಾತ್ಮಕವಾಗಿ ಸ್ಪಂದಿಸಿದ್ದು, ರಾಜ್ಯ ಸರ್ಕಾರಕ್ಕೆ ಕಡತ ರವಾನಿಸಿದ್ದು, ಮುಂದಿನ ಕ್ರಮ ವಹಿಸಬೇಕು’ ಎಂದು ಆಗ್ರಹಿಸಿದರು.

ADVERTISEMENT

ಸಮಾಜದ ರಾಜ್ಯಾಧ್ಯಕ್ಷ ಸೋಮನಗೌಡ ಪಾಟೀಲ್, ವೀರಶೈವ ಲಿಂಗಾಯತ ಮಹಾಸಭಾದ ಜಿಲ್ಲಾಧ್ಯಕ್ಷ ಕಳಕನಗೌಡ ಪಾಟೀಲ್, ಮಾಜಿ ಸಂಸದರಾದ ಸಂಗಣ್ಣ ಕರಡಿ, ಶಿವರಾಮೇಗೌಡ, ಮಾಜಿ ಶಾಸಕ ಬಸವರಾಜ ದಢೇಸೂಗೂರು, ಬಿಜೆಪಿ ರಾಜ್ಯ ಕಾರ್ಯಕಾರಿಣಿ ಸದಸ್ಯ ಡಾ. ಬಸವರಾಜ್ ಕ್ಯಾವಟರ್ ಮಾತನಾಡಿದರು.

ಕೃಷಿ ಕ್ಷೇತ್ರದ ಸಾಧನೆಗೆ ರಾಯಚೂರು ಕೃಷಿ ವಿಶ್ವವಿದ್ಯಾಲಯದಿಂದ ಗೌರವ ಡಾಕ್ಟರೇಟ್ ಪ್ರಶಸ್ತಿ ಪಡೆದ ದೇವೇಂದ್ರಪ್ಪ ಬಳೂಟಗಿ, ರಾಜ್ಯೋತ್ಸವ ಪ್ರಶಸ್ತಿ ಪಡೆದ ಪತ್ರಕರ್ತ ಎ.ಜಿ. ಕಾರಟಗಿ ಹಾಗೂ ಬೆಂಗಳೂರು ಕೃಷಿ ವಿಶ್ವ ವಿದ್ಯಾಲಯದಿಂದ ತೋಟಗಾರಿಕೆ ವಿಭಾಗದಲ್ಲಿ ಪಿಎಚ್‌ಡಿ ಪದವಿ ಪಡೆದ ರಂಜಿತಾ ಅಯೋಧ್ಯಾ ಅವರನ್ನು ಸನ್ಮಾನಿಸಲಾಯಿತು.

ಸಮಾಜದ ಗೌರವಾಧ್ಯಕ್ಷ ಚನ್ನಬಸಪ್ಪ ಸುಂಕದ, ನಗರ ಘಟಕದ ಅಧ್ಯಕ್ಷ ಬಸವರಾಜ ಎತ್ತಿನಮನಿ, ಸುರೇಖಾ ಮಾಲಿಪಾಟೀಲ್, ವೀರಭದ್ರ ಬೆನಕನಾಳ, ಶರಣೇಗೌಡ ಬೂದಗುಂಪಾ, ಸಮಾಜದ ತಾಲ್ಲೂಕಾಧ್ಯಕ್ಷ ಪಾಲಾಕ್ಷಪ್ಪ ಕೆಂಡದ, ಮಹಿಳಾ ಘಟಕದ ಅಧ್ಯಕ್ಷೆ ಅನ್ನಪೂರ್ಣಮ್ಮ ಗಂಗಾಧರಗೌಡ, ಕೊಪ್ಪಳ ತಾಲ್ಲೂಕು ಅಧ್ಯಕ್ಷ ಕರಿಯಪ್ಪ ಮೇಟಿ, ಪ್ರಧಾನ ಕಾರ್ಯದರ್ಶಿ ದೇವರಾಜ್ ಹಾಲಸಮುದ್ರ ಪಾಲ್ಗೊಂಡಿದ್ದರು.

ಸಮುದಾಯ ಭವನಕ್ಕೆ ಅನುದಾನದ ಭರವಸೆ:

ಜಿಲ್ಲಾ ಉಸ್ತುವಾರಿ ಸಚಿವ ಶಿವರಾಜ ತಂಗಡಗಿ ಮಾತನಾಡಿ ‘ಪಂಚಮಸಾಲಿ ಸಮಾಜದವರು ಹಿಂದುಳಿದವರು ಎಂಬ ಕೀಳರಿಮೆಯಿಂದ ಹೊರಬರಬೇಕಿದೆ. ಸಮಾಜಕ್ಕೆ ಭವ್ಯ ಇತಿಹಾಸ ಇದೆ. ಕಿತ್ತೂರು ರಾಣಿ ಚನ್ನಮ್ಮ ಸರ್ ಸಿದ್ದಪ್ಪ ಕಂಬಳಿಯಂತಹ ಮಹನೀಯರು ಎಲ್ಲಾ ಸಮಾಜದವರಿಗೂ ಮಾದರಿ’ ಎಂದರು.

‘ಕೊಪ್ಪಳದಲ್ಲಿ ನಿರ್ಮಿಸುತ್ತಿರುವ ಪಂಚಮಸಾಲಿ ಸಮುದಾಯ ಭವನಕ್ಕೆ ಕಳೆದ ವರ್ಷ ₹1 ಕೋಟಿ ಅನುದಾನ ನೀಡಿದ್ದು ಈ ವರ್ಷವೂ ₹ 1ಕೋಟಿ ಕೋಟಿ ನೀಡಿ ಭವನ ಪೂರ್ಣಗೊಳಿಸುತ್ತೇನೆ. ಕಾರಟಗಿಯಲ್ಲಿಯೂ ಭವನ ನಿರ್ಮಾಣಕ್ಕೆ ₹1 ಕೋಟಿ ನೀಡಲಾಗುವುದು ಎಂದು ಭರವಸೆ ನೀಡಿದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.