
ಬಂಧನ
(ಪ್ರಾತಿನಿಧಿಕ ಚಿತ್ರ)
ಗಂಗಾವತಿ: ಕೆಲದಿನಗಳ ಹಿಂದೆ ನಗರದಲ್ಲಿ ನಡೆದ ಬಿಜೆಪಿ ಯುವ ಮೋರ್ಚಾ ನಗರ ಘಟಕದ ಅಧ್ಯಕ್ಷ ವೆಂಕಟೇಶ ಕುರುಬರ ಕೊಲೆಗೆ ಪ್ರಕರಣಕ್ಕೆ ಸಂಬಂಧಿಸಿದಂತೆ ಕೊಲೆಗೆ ಸುಪಾರಿ ನೀಡಿದ ಆರೋಪಿ ರವಿ, ಗಂಗಾಧರ ಗೌಳಿ ಅವರನ್ನು ಪೊಲೀಸರು ಬಂಧಿಸಿ, ನ್ಯಾಯಾಂಗ ಬಂಧನಕ್ಕೆ ಒಪ್ಪಿಸಿದ್ದಾರೆ.
ಆರೋಪಿಗಳು, ಸಿನಿಮೀಯ ರೀತಿಯಲ್ಲಿ ಕಾರಿನಲ್ಲಿ ಬಂದು ವೆಂಕಟೇಶ ಕುರುಬರ ಅವರ ಬೈಕ್ ಬೆನ್ನಟ್ಟಿ, ಡಿಕ್ಕಿ ಹೊಡೆದು, ಕೆಳಗೆ ಕೆಡವಿ, ಮಚ್ಚುಗಳಿಂದ ಮನಬಂದಂತೆ ಕಡಿದು ಕೊಲೆ ಮಾಡಿ, ಬೆಳಿಗ್ಗೆ ಕಂಪ್ಲಿ ಪೊಲೀಸ್ ಠಾಣೆಯಲ್ಲಿ ನಾಲ್ವರು ಆರೋಪಿಗಳು ಶರಣಾಗಿದ್ದರು. ನಂತರ ಪೊಲೀಸರು ತಮ್ಮ ಪ್ರಕ್ರಿಯೆ ನಡೆಸಿ, ಬಂಧಿಸಿದ್ದರು.
ಪ್ರಕರಣ ತನಿಖೆ ಮಾಡುತ್ತಿದ್ದಂತೆ ಒಟ್ಟು 7 ಆರೋಪಿಗಳು ಪ್ರಕರಣದಲ್ಲಿ ತಪ್ಪಿತಸ್ಥರು ಎಂಬುದು ತಿಳಿದು ಬಂದಿತ್ತು. ಉಳಿದ ಆರೋಪಿಗಳ ಪತ್ತೆಗೆ 4 ತಂಡಗಳನ್ನು ರಚಿಸಿ, ನಿರಂತರ ಕಾರ್ಯಾಚರಣೆ ನಡೆಸಿ, ಕೆಲ ದಿನಗಳ ಹಿಂದೆ ಕಾರ್ತಿಕ್ ಎಂಬ ಆರೋಪಿಯನ್ನು ಬಂಧಿಸಲಾಗಿತ್ತು.
ನಂತರ ಇನ್ನಿಬ್ಬರ ಪತ್ತೆಗೆ ಪೊಲೀಸರು ಆರೋಪಿಗಳ ಸಂಬಂಧಿಗಳನ್ನು ಕರೆಯಿಸಿ ವಿಚಾರಿಸಿದರೂ ಸುಳಿವು ಸಿಕ್ಕಿರಲಿಲ್ಲ. ಹೀಗಾಗಿ ಕೊಲೆಯಾದ ವೆಂಕಟೇಶನ ಪಾಲಕರು ಡಿವೈಎಸ್ಪಿ ಕಚೇರಿ ಎದುರು ಆರೋಪಿಗಳ ಬಂಧನಕ್ಕೆ, ಮಗನ ಸಾವಿಗೆ ನ್ಯಾಯ ದೊರಕಿಸಬೇಕು ಎಂದು ಆಗ್ರಹಿಸಿ ಪ್ರತಿಭಟನೆ ನಡೆಸಿದ್ದರು.
ಆರೋಪಿಗಳ ಬಂಧನ ಸವಾಲಾಗಿ ಸ್ವೀಕರಿಸಿದ ಪೊಲೀಸರು, ಕೊಲೆಗೆ ಸಹಕಾರ ನೀಡಿದ ಆರೋಪಿದಡಿ ಆರೋಪಿ ರವಿ ಹೆಂಡತಿ, ಮಗು ಸೇರಿ ಇನ್ನಿಬ್ಬರು
ಆರೋಪಿಗಳನ್ನು ಬಳ್ಳಾರಿಯಲ್ಲಿ ಹಿಡಿದು, ಗಂಗಾವತಿಗೆ ಕರೆತಂದು ನ್ಯಾಯಾಂಗ ಬಂಧನಕ್ಕೆ ಒಪ್ಪಿಸಿದ್ದರು. ಇಬ್ಬರ ಬಂಧನಕ್ಕೆ ಕಾರ್ಯಾಚರಣೆ ನಡೆಸಿದ ಪೊಲೀಸರು, ಕಲಬುರಗಿಯ ಹೊರವಲಯದಲ್ಲಿ ಶನಿವಾರ ರಾತ್ರಿ ಸೆರೆಹಿಡಿಯುವಲ್ಲಿ ಯಶಸ್ವಿಯಾಗಿದ್ದಾರೆ’ ಎಂದು ಪೊಲೀಸ್ ಮೂಲಗಳು ತಿಳಿಸಿವೆ.
ನಂತರ ಗಂಗಾವತಿ ಹೊರಭಾಗದಲ್ಲಿ ಇರಿಸಿ, ಬಿಗಿ ಪೊಲೀಸ್ ಭದ್ರತೆ ನಡುವೆ ನ್ಯಾಯಾಲಯಕ್ಕೆ ಹಾಜರುಪಡಿಸಿ, ನ್ಯಾಯಾಂಗ ಬಂಧನಕ್ಕೆ ಒಪ್ಪಿಸಿದ್ದಾರೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.