ಕೊಪ್ಪಳ: ನೆಟ್ವರ್ಕ್ ಸಮಸ್ಯೆ, ಬಾರದ ಒಟಿಪಿ, ಸರಿಯಾಗಿ ಕೆಲಸ ಮಾಡದ ಆ್ಯಪ್, ತಪ್ಪು ಮ್ಯಾಪಿಂಗ್ ಸೇರಿದಂತೆ ಅನೇಕ ಸಮಸ್ಯೆಗಳಿಂದ ಆರಂಭಿಕ ಹಿನ್ನಡೆ ಅನುಭವಿಸಿದ್ದ ಸಾಮಾಜಿಕ ಮತ್ತು ಶೈಕ್ಷಣಿಕ ಸಮೀಕ್ಷೆ ಕಾರ್ಯ ಈಗ ಜಿಲ್ಲೆಯಲ್ಲಿ ಚುರುಕು ಪಡೆದುಕೊಂಡಿದೆ.
ರಾಜ್ಯ ಹಿಂದುಳಿದ ವರ್ಗಗಳ ಶಾಶ್ವತ ಆಯೋಗ ಸೆ. 22ರಿಂದ ಸಮೀಕ್ಷೆಗೆ ಚಾಲನೆ ನೀಡಿತ್ತು. ಮೊದಲ ಎರಡು ದಿನಗಳಂತೂ ಒಂದು ಮನೆಯ ದತ್ತಾಂಶ ದಾಖಲಿಸುವುದೇ ಸವಾಲಾಗಿತ್ತು. ಇದಕ್ಕಾಗಿ ಗಂಟೆಗಟ್ಟಲೇ ಪರದಾಡಿದ ಘಟನೆಗಳು ಕೂಡ ನಡೆದವು. ಸಮೀಕ್ಷೆಗೆ ಸಂಬಂಧಿಸಿದ ತಾಂತ್ರಿಕ ಸಮಸ್ಯೆಗಳು ಸಾಕಷ್ಟು ಸುದ್ದಿಯಾಗುತ್ತಿದ್ದಂತೆಯೇ ರಾಜ್ಯ ಸರ್ಕಾರ ಕೂಡ ಎಚ್ಚೆತ್ತುಕೊಂಡಿತು.
ಇದರ ಪರಿಣಾಮವಾಗಿ ಸಮೀಕ್ಷೆ ಆರಂಭವಾಗಿ ಒಂದು ವಾರ ಕಳೆಯುವುದರ ಒಳಗೆ ಜಿಲ್ಲೆಯಲ್ಲಿ ಒಂದು ಲಕ್ಷ ಕುಟುಂಬಗಳ ದತ್ತಾಂಶಗಳನ್ನು ದಾಖಲಿಸಲು ಸಮೀಕ್ಷೆ ಮಾಡುವವರಿಗೆ ಸಾಧ್ಯವಾಗಿದೆ. ಜೆಸ್ಕಾಂ ಸಿಬ್ಬಂದಿ ನೆರವಿನಿಂದ ಜಿಲ್ಲೆಯಲ್ಲಿ ಒಟ್ಟು 3,21,980 ಮನೆಗಳಿಗೆ ಜಿಯೊ ಟ್ಯಾಗಿಂಗ್ ಮಾಡಲಾಗಿತ್ತು. ಆರಂಭದಲ್ಲಿ 2,969 ಸಮೀಕ್ಷೆ ಮಾಡಲು ಸಿಬ್ಬಂದಿಯನ್ನು ನಿಯೋಜಿಸಲಾಗಿತ್ತು. ಆರಂಭದಲ್ಲಿ ಸಮೀಕ್ಷೆ ಸಾಕಷ್ಟು ವಿಳಂಬವಾಗಿದ್ದರಿಂದ ಸರ್ಕಾರದ ಬೇರೆ ಇಲಾಖೆಗಳ ಸಿಬ್ಬಂದಿಯನ್ನೂ ನೇಮಿಸಿ ಕೃಷಿ, ತೋಟಗಾರಿಕೆ ಸೇರಿದಂತೆ ವಿವಿಧ ಇಲಾಖೆಗಳ ಮುಖ್ಯಸ್ಥರನ್ನು ಉಸ್ತುವಾರಿಗಳನ್ನಾಗಿ ನೇಮಿಸಲಾಗಿದೆ. ಇವರು ಸಮೀಕ್ಷೆ ಮೇಲೆ ಕಣ್ಗಾವಲು ವಹಿಸಿದ್ದಾರೆ.
ಸಿ.ಎಂ.ಗೆ ಉಡುಗೊರೆಗೆ ಕಾತರ: ವಿವಿಧ ಕಾಮಗಾರಿಗಳ ಉದ್ಘಾಟನೆ, ಶಂಕುಸ್ಥಾಪನೆ ಸೇರಿದಂತೆ ವಿವಿಧ ಕಾರ್ಯಕ್ರಮಗಳಲ್ಲಿ ಪಾಲ್ಗೊಳ್ಳಲು ಮುಖ್ಯಮಂತ್ರಿ ಸಿದ್ದರಾಮಯ್ಯ, ಉಪಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್ ಸೇರಿದಂತೆ ಅನೇಕ ನಾಯಕರು ಅ. 6ರಂದು ಕೊಪ್ಪಳಕ್ಕೆ ಬರಲಿದ್ದಾರೆ.
ಇದರೊಳಗೆ ಸಮೀಕ್ಷಾ ಕಾರ್ಯ ಪೂರ್ಣಗೊಳಿಸಿ ಮುಖ್ಯಮಂತ್ರಿಗೆ ಸಮೀಕ್ಷೆ ಪೂರ್ಣಗೊಳಿಸಿದ ವರದಿಯ ‘ಉಡುಗೊರೆ’ ಒಪ್ಪಿಸಬೇಕು ಎನ್ನುವ ಗುರಿಯನ್ನು ಜಿಲ್ಲಾಡಳಿತ ಹಾಕಿಕೊಂಡಿದೆ ಎಂದು ಅಧಿಕಾರಿಯೊಬ್ಬರು ಹೇಳಿದರು. ಸಿ.ಎಂ. ಬರುವ ಒಂದು ದಿನ ಮೊದಲೇ ಗುರಿ ಮುಟ್ಟಲು ಜಿಲ್ಲಾಡಳಿತ ಕಸರತ್ತು ನಡೆಸುತ್ತಿದೆ. ಅ. 5ರ ಒಳಗೆ ಸಮೀಕ್ಷೆ ಮುಗಿಸಬೇಕು ಎಂದು ಜಿಲ್ಲಾಧಿಕಾರಿ ಸೂಚನೆ ಕೂಡ ನೀಡಿದ್ದಾರೆ.
ಜಿಲ್ಲೆಯಲ್ಲಿ ನಡೆಯುತ್ತಿರುವ ಸಮೀಕ್ಷೆಯು ಒಂದು ಲಕ್ಷ ಮನೆಗಳ ಸರ್ವೆ ಕಾರ್ಯ ಮುಗಿದಿದ್ದು. ಅಕ್ಟೋಬರ್ 5ರ ಒಳಗೆ ಪೂರ್ಣಗೊಳಿಸಲು ಅಧಿಕಾರಿಗಳಿಗೆ ನಿರ್ದೇಶನ ನೀಡಲಾಗಿದೆ.ಸುರೇಶ ಇಟ್ನಾಳ ಜಿಲ್ಲಾಧಿಕಾರಿ
ಸಮೀಕ್ಷೆಗೆ ಆರಂಭದಲ್ಲಿದ್ದ ಗೊಂದಲಗಳು ಪರಿಹಾರವಾಗಿವೆ. ಈಗಾಗಲೇ ಮುಖ್ಯಮಂತ್ರಿ ಅಧಿಕಾರಿಗಳ ಜೊತೆ ಸಭೆ ಮಾಡಿದ್ದಾರೆ. ರಾಜ್ಯದಾದ್ಯಂತ ಸಮೀಕ್ಷೆ ಚುರುಕು ಪಡೆದುಕೊಂಡಿದೆ.ಶಿವರಾಜ ತಂಗಡಗಿ ಜಿಲ್ಲಾ ಉಸ್ತುವಾರಿ ಸಚಿವ
ಸಮೀಕ್ಷೆ ಪೂರ್ಣಗೊಳಿಸಿದ 18 ಜನ ಸಿಬ್ಬಂದಿ ಆರಂಭಿಕ ಕೊರತೆಯು ನಡುವೆಯೂ ಜಿಲ್ಲೆಯ 18 ಜನ ಸಮೀಕ್ಷಾ ಸಿಬ್ಬಂದಿ ಈ ಕಾರ್ಯ ಆರಂಭವಾದ ಆರು ದಿನಗಳಲ್ಲಿ ತಮಗೆ ವಹಿಸಿದ ಜವಾಬ್ದಾರಿಯನ್ನು ಪೂರ್ಣಗೊಳಿಸಿದ್ದಾರೆ. ಕೊಪ್ಪಳ ಕುಷ್ಟಗಿ ಕನಕಗಿರಿ ಕಾರಟಗಿ ಯಲಬುರ್ಗಾ ಹಾಗೂ ಕುಕನೂರು ತಾಲ್ಲೂಕು ವ್ಯಾಪ್ತಿಯ ಸಿಬ್ಬಂದಿ ತಮ್ಮ ವ್ಯಾಪ್ತಿಯ ಸಮೀಕ್ಷೆಗಳನ್ನು ಮುಗಿಸಿದ್ದಾರೆ. ಕೆಲವರು ತಮಗೆ ವಹಿಸಿದ ಮನೆಗಳಿಗಿಂತಲೂ ಹೆಚ್ಚು ಮನೆಗಳ ಸಮೀಕ್ಷೆ ಮಾಡಿ ಶೇ 100ಕ್ಕಿಂತಲೂ ಅಧಿಕ ಸಾಧನೆ ಮಾಡಿದ್ದಾರೆ. ಪ್ರಶಂಸೆ: ಕಾರಟಗಿ ತಾಲ್ಲೂಕಿನ ದೇವಿ ಕ್ಯಾಂಪ್ನ ಸರ್ಕಾರಿ ಶಾಲೆಯ ಶಿಕ್ಷಕ ಬೆನಕಟ್ಟಿ ದ್ಯಾಮಪ್ಪ ತಮ್ಮ ವ್ಯಾಪ್ತಿಗೆ ಬಂದಿದ್ದ 86 ಮನೆಗಳ ಸಮೀಕ್ಷಾ ಕಾರ್ಯವನ್ನು ಐದು ದಿನಗಳಲ್ಲಿಯೇ ಪೂರ್ಣಗೊಳಿಸಿದ್ದಕ್ಕೆ ಜಿಲ್ಲಾಡಳಿತ ಪ್ರಶಂಸೆ ವ್ಯಕ್ತಪಡಿಸಿದೆ. ‘ಸಮೀಕ್ಷೆಯಲ್ಲಿ ನೀವು ತೋರಿದ ಆಸಕ್ತಿ ಉತ್ಸಾಹ ಮತ್ತು ಪ್ರಾಮಾಣಿಕತೆಯಿಂದ ನಿಗದಿತ ಅವಧಿಗೆ ಮೊದಲೇ ಗುರಿ ತಲುಪಿದ್ದೀರಿ. ನಿಮ್ಮ ಕೆಲಸ ಮಾದರಿಯಾಗಿದೆ’ ಎಂದು ಜಿಲ್ಲಾಧಿಕಾರಿ ಬೆನಕಟ್ಟಿ ದ್ಯಾಮಪ್ಪ ಅವರಿಗೆ ಪ್ರಶಂಸನಾ ಪತ್ರ ನೀಡಿದ್ದಾರೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.