ಕನಕಗಿರಿ: ಪಟ್ಟಣದಲ್ಲಿ ಅಖಿಲ ಕರ್ನಾಟಕ ವಾಲ್ಮೀಕಿ ನಾಯಕ ಮಹಾಸಭಾದ ತಾಲ್ಲೂಕು ಘಟಕದಿಂದ ಮಹರ್ಷಿ ವಾಲ್ಮೀಕಿ ಜಯಂತ್ಯುತ್ಸವ ಹಾಗೂ ವಾಲ್ಮೀಕಿ ಭಾವಚಿತ್ರದ ಮೆರವಣಿಗೆ ಸೋಮವಾರ ವಿಜೃಂಭಣೆಯಿಂದ ನಡೆಯಿತು.
ಸುವರ್ಣಗಿರಿ ಸಂಸ್ಥಾನ ವಿರಕ್ತ ಮಠದ ಮುಂದೆ ನಡೆದ ಮೆರವಣಿಗೆಗೆ ಗಣ್ಯರು ಚಾಲನೆ ನೀಡಿದರು.
ಬಳಿಕ ರಾಜಬೀದಿ, ಕನಕಾಚಲಪತಿ ದೇಗುಲದ ರಸ್ತೆ, ಎಪಿಎಂಸಿ ಮಳಿಗೆ, ವಾಲ್ಮೀಕಿ ವೃತ್ತದಿಂದ ವಾಲ್ಮೀಕಿ ಹುತ್ತಿನವರೆಗೆ ಮೆರವಣಿಗೆ ಅದ್ದೂರಿಯಾಗಿ ನಡೆಯಿತು. ವಾಲ್ಮೀಕಿ ಹುತ್ತಿನ ಹತ್ತಿರ ಪೂಜೆ ನಡೆಯಿತು. ಮಹಿಳೆಯರ ಕುಂಭ, ಕಳಸ, ಕಂಪ್ಲಿಯ ರಾಮಸಾಗರದ ಕಹಳೆ ವಾದನ, ಅಬ್ಬಿಗೇರಿಯ ಮೋಜಿನಗೊಂಬೆ, ಸಿದ್ದಾಪುರದ ಹಗಲುವೇಷ, ಕೊನ್ನಾಪುರದ ಡೊಳ್ಳುಕುಣಿತ ಹಾಗೂ ಕುಕನೂರಿನ ಕರಡಿ ಮಜಲು ಕಲಾ ತಂಡಗಳು ಗಮನ ಸೆಳೆದವು.
ನಾಯಕ ಮನೆತನದ ದೊರೆಗಳು, ಸ್ವಾತಂತ್ರ್ಯ ಹೋರಾಟಗಾರರು ಹಾಗೂ ವಾಲ್ಮೀಕಿ ನಾಯಕ ಸಮಾಜದ ಗುರುಗಳು ಮತ್ತು ಸಾಧನೆ ತೋರಿದ ರಾಜರ ಭಾವಚಿತ್ರಗಳು ಆಕರ್ಷಿಸಿದವು. ಹುಲಿಹೈದರ ಸಂಸ್ಥಾನದ ರಾಜಾ ನವೀನ ಚಂದ್ರ ನಾಯಕ ಅವರನ್ನು ಸಾರೋಟದಲ್ಲಿ ಕೂಡಿಸಿ ಗೌರವಿಸಿದರು.
ಬಳಿಕ ನಡೆದ ವೇದಿಕೆ ಕಾರ್ಯಕ್ರಮದಲ್ಲಿ ಪ್ರಮುಖರಾದ ಬಿಲ್ಗಾರ ನಾಗರಾಜ, ಸಿದ್ದಪ್ಪ ನೀರ್ಲೂಟಿ ಮಾತನಾಡಿದರು. ರಾಜಾನವೀನಚಂದ್ರ ನಾಯಕ ಸಾನ್ನಿಧ್ಯವಹಿಸಿದ್ದರು. ಸಮಾಜದ ಅಧ್ಯಕ್ಷ ನಾಗರಾಜ ಇದ್ಲಾಪುರ ಅಧ್ಯಕ್ಷತೆವಹಿಸಿದ್ದರು.
ಈ ವೇಳೆ ಜಿಲ್ಲಾ ಉಸ್ತುವಾರಿ ಸಚಿವ ಶಿವರಾಜ ತಂಗಡಗಿ, ಮಾಜಿ ಶಾಸಕ ಬಸವರಾಜ ದಢೇಸೂಗೂರು, ಪಟ್ಟಣ ಪಂಚಾಯಿತಿ ಅಧ್ಯಕ್ಷೆ ಹುಸೇನಬೀ ಚಳ್ಳಮರದ, ತಹಶೀಲ್ದಾರ್ ವಿಶ್ವನಾಥ ಮುರುಡಿ, ತಾಲ್ಲೂಕು ಪಂಚಾಯಿತಿ ಪ್ರಭಾರ ಇಒ ರಾಜಶೇಖರ, ಶಿಶು ಅಭಿವೃದ್ಧಿ ಯೋಜನಾಧಿಕಾರಿ ವಿರೂಪಾಕ್ಷಿ, ಪಿಐ ಎಂ.ಡಿ. ಫೈಜುಲ್ಲಾ, ಪಟ್ಟಣ ಪಂಚಾಯಿತಿ ಮುಖ್ಯಾಧಿಕಾರಿ ಲಕ್ಷ್ಮಣ ಕಟ್ಟಿಮನಿ, ಜಿಲ್ಲಾ ಪಂಚಾಯಿತಿ ಮಾಜಿ ಸದಸ್ಯರಾದ ಹನುಮೇಶ ನಾಯಕ, ವೀರೇಶ ಸಮಗಂಡಿ, ಬ್ಲಾಕ್ ಕಾಂಗ್ರೆಸ್ ಸಮಿತಿ ಅಧ್ಯಕ್ಷ ಗಂಗಾಧರಸ್ವಾಮಿ ಕಲ್ಲಬಾಗಿಲಮಠ, ವಕ್ತಾರ ಶರಣಬಸಪ್ಪ ಭತ್ತದ, ಬಿಜೆಪಿ ಮಂಡಲ ಅಧ್ಯಕ್ಷ ಸಣ್ಣ ಕನಕಪ್ಪ, ಮಾಜಿ ಅಧ್ಯಕ್ಷ ಮಹಾಂತೇಶ ಸಜ್ಜನ್, ಕೆಪಿಸಿಸಿ ಎಸ್ಟಿ ಘಟಕದ ಪ್ರಧಾನ ಕಾರ್ಯದರ್ಶಿ ರಾಮನಗೌಡ ಬುನ್ನಟ್ಟಿ, ಬಿಜೆಪಿ ಜಿಲ್ಲಾ ಉಪಾಧ್ಯಕ್ಷ ವಾಗೀಶ ಹಿರೇಮಠ, ವಾಲ್ಮೀಕಿ ಮಹಾಸಭಾದ ತಾಲ್ಲೂಕು ಅಧ್ಯಕ್ಷ ನಾಗರಾಜ ಇದ್ಲಾಪುರ, ನಗರ ಘಟಕದ ಅಧ್ಯಕ್ಷ ನರಸಪ್ಪ ನಾಯಕ, ಪಟ್ಟಣ ಪಂಚಾಯಿತಿ ಉಪಾಧ್ಯಕ್ಷ ಕಂಠಿರಂಗ ನಾಯಕ, ಸದಸ್ಯ ಹನುಮಂತಪ್ಪ ಬಸರಿಗಿಡದ, ಪರಿಶಿಷ್ಟ ಪಂಗಡದ ಕಲ್ಯಾಣಾಧಿಕಾರಿ ಗ್ಯಾನನಗೌಡ, ಪ್ರಮುಖರಾದ ರಾಮನಗೌಡ ಬುನ್ನಟ್ಟಿ, ಶರಣಪ್ಪ ಕುರಿ, ನರಸಪ್ಪ, ಮುದಿಯಪ್ಪ ಖ್ಯಾಡೆದ, ಹುಲಿಗೆಮ್ಮ, ಶರತ್ ನಾಯಕ, ರಂಗಪ್ಪ ಕೊರಗಟಗಿ, ನರಸಪ್ಪ ನಾಯಕ, ಗ್ಯಾನಪ್ಪ ಗಾಣದಾಳ, ನಿಂಗಪ್ಪ ಪೂಜಾರ, ನಿಂಗಪ್ಪ ನಾಯಕ, ಗುರುಮೂರ್ತಿ, ವಕೀಲರ ಸಂಘದ ಅಧ್ಯಕ್ಷ ಶರಣಪ್ಪ, ಇತರರು ಇದ್ದರು.
ಶಂಕರ ಬಿನ್ನಾಳ ಹಾಗೂ ಗೀತಾ ಹಂಚಾಟೆ ಅವರಿಂದ ಸಂಗೀತ ಕಾರ್ಯಕ್ರಮ ನಡೆಯಿತು. ಸಮಾಜದ ಪ್ರತಿಭಾವಂತ ವಿದ್ಯಾರ್ಥಿಗಳಿಗೆ ಸನ್ಮಾನಿಸಲಾಯಿತು.
ಪುರಾತನ ಕಾಲದಿಂದಲೂ ನಾಡು ರಕ್ಷಣೆಯಲ್ಲಿ ವಾಲ್ಮೀಕಿ ನಾಯಕ ಸಮಾಜ ಅಪಾರವಾದ ಕೊಡುಗೆ ನೀಡಿದೆ. ಶಿಕ್ಷಣಕ್ಕೆಒತ್ತು ನೀಡಿ ಒಗ್ಗಟ್ಟು ಪ್ರದರ್ಶನ ಮಾಡಬೇಕಿದೆಬಸವರಾಜ ದಢೇಸೂಗೂರು ಮಾಜಿ ಶಾಸಕ
‘ಮಹರ್ಷಿ ವಾಲ್ಮೀಕಿಯನ್ನು ಪೂಜಿಸುವರು ಮಾತ್ರ ಹಿಂದೂಗಳು ಅವರು ಬರೆದ ರಾಮಾಯಣ ಪೂಜಿಸದೆ ಇರುವವರು ಹಿಂದೂಗಳಲ್ಲ’ ಎಂದು ಚಿಂತಕ ಹಾಗೂ ಹಗರಿ ಬೊಮ್ಮನಳ್ಳಿ ಪಿಯು ಕಾಲೇಜಿನ ಪ್ರಾಂಶುಪಾಲ ಡಿ.ಕೆ.ಮಾಳಿ ಪ್ರತಿಪಾದಿಸಿದರು. ಅಖಿಲ ಕರ್ನಾಟಕ ವಾಲ್ಮೀಕಿ ನಾಯಕ ಮಹಾಸಭಾ ಹಾಗೂ ನಗರ ವಾಲ್ಮೀಕಿ ಸಮಾಜದ ಸಹಯೋಗದಲ್ಲಿ ಸೋಮವಾರ ನಡೆದ ಮಹರ್ಷಿ ವಾಲ್ಮೀಕಿ ಜಯಂತಿ ಹಾಗೂ ಪ್ರತಿಭಾ ಪುರಸ್ಕಾರ ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು. ‘ಶ್ರೀರಾಮನ ಆರಾಧನೆಗಿಂತ ವಾಲ್ಮೀಕಿ ರಾಮಾಯಣ ರಚಿಸಿದ ನಂತರ ದಿನಗಳಲ್ಲಿ ಶ್ರೀರಾಮನು ವಿಶ್ವವ್ಯಾಪಿಯಾದರೆ ಮಹರ್ಷಿ ವಾಲ್ಮೀಕಿ ಹಿಂದೂ ಧರ್ಮದ ಪ್ರವರ್ತಕರಾದರು’ ಎಂದರು. ‘ಸರ್ವ ಸಮಾಜ ಹಾಗೂ ಸರ್ವ ಧರ್ಮಗಳ ಸಮನ್ವತೆಯ ಸಾಂಸ್ಕೃತಿಕ ಸಂವಿಧಾನವನ್ನು ಕೊಡುಗೆಯಾಗಿ ನೀಡುವ ಮೂಲಕ ಮಹರ್ಷಿ ವಾಲ್ಮೀಕಿಯು ಆದರ್ಶ ಪುರುಷನಾಗಿದ್ದಾರೆ. ಇಂಥ ಮಹಾತ್ಮನ ಕುಡಿಗಳಾದ ನಾಯಕ ಸಮಾಜದವರು ಬದಲಾವಣೆ ಕಡೆಗೆ ಹೋಗಬೇಕಿದೆ. ಶಿಕ್ಷಣವೇ ಅಸ್ತ್ರವಾದಾಗ ಮಾತ್ರ ವಾಲ್ಮೀಕಿ ಮತ್ತು ರಾಮಾಯಣ ಅರ್ಥವಾಗುತ್ತದೆ’ ಎಂದು ಹೇಳಿದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.