
ಕೊಪ್ಪಳ: ಮಹಾಶಿವರಾತ್ರಿ ಅಂಗವಾಗಿ ಕೊಪ್ಪಳ ತೋಟಗಾರಿಕಾ ಇಲಾಖೆಯು ಹಣ್ಣು, ಜೇನು, ಅಣಬೆ ಪ್ರದರ್ಶನ ಹಾಗೂ ಮಾರಾಟ ಮೇಳ ಹಮ್ಮಿಕೊಂಡಿದೆ. ವಿಶ್ವದ ಅತ್ಯಂತ ದುಬಾರಿ ಅಣಬೆಗಳಲ್ಲಿ ಒಂದು ಎನ್ನಲಾದ ‘ಯರ್ಸಗುಂಬ’ ಈ ಮೇಳದ ಪ್ರಮುಖ ಆಕರ್ಷಣೆಯಾಗಿದೆ.
ಒಂದು ಕೆ.ಜಿ. ಯರ್ಸಗುಂಬ ಅಣಬೆಯ ಬೆಲೆ ₹15 ಲಕ್ಷ ಇದೆ. ಜನರ ಗಮನ ಸೆಳೆಯಲು ಐದು ಗ್ರಾಂ ತೂಕದ ಯರ್ಸಗುಂಬ ಅಣಬೆಯನ್ನು ಖರೀದಿಸಿ ತಂದು ಮೇಳದಲ್ಲಿ ಇರಿಸಲಾಗಿದೆ. ಈ ತಳಿಯು ಹಿಮಾಲಯದಲ್ಲಿ ಕಂಡುಬರುತ್ತದೆ. ರೋಗ ನಿರೋಧಕ ಶಕ್ತಿಯ ಇದು, ಮೆದುಳಿನ ಚಟುವಟಿಕೆ ಚುರುಕುಗೊಳಿಸಲಿದೆ.
‘ಯರ್ಸಗುಂಬ ಅಣಬೆಯನ್ನು ನೇಪಾಳದ ವ್ಯಾಪಾರಿ ಮೂಲಕ ಖರೀದಿಸಲಾಗಿದೆ. ಇದು ನೈಸರ್ಗಿಕವಾಗಿಯೇ ಬೆಳೆಯುತ್ತದೆ. ಪ್ರತಿ ವರ್ಷದ ಮೇಳದ ಸಂದರ್ಭದಲ್ಲಿ ವಿಶ್ವದ ದುಬಾರಿ ತಳಿಯ ಮಾವು, ದ್ರಾಕ್ಷಿ ಹೀಗೆ ಒಂದೊಂದು ಹಣ್ಣು ಜನರಿಗೆ ಪರಿಚಯಿಸುತ್ತಿರುವ ಕಾರಣ ತೋಟಗಾರಿಕಾ ಕ್ಷೇತ್ರದತ್ತ ಜಿಲ್ಲೆಯ ರೈತರ ಒಲವು ಹೆಚ್ಚಾಗುತ್ತಿದೆ’ ಎಂದು ತೋಟಗಾರಿಕಾ ಇಲಾಖೆಯ ಜಂಟಿ ನಿರ್ದೇಶಕ ಕೃಷ್ಣ ಸಿ.ಉಕ್ಕುಂದ ತಿಳಿಸಿದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.