ಮಂಡ್ಯ: ಮಹಾರಾಷ್ಟ್ರದ ಪುಣೆಯಲ್ಲಿ ಮೃತಪಟ್ಟ ಮದ್ದೂರು ಮೂಲದ ಮಹಿಳೆಯೊಬ್ಬರ ಮೃತದೇಹ ತರಲು ಜಿಲ್ಲಾಡಳಿತ ತಡೆಯೊಡ್ಡಿದ್ದು ಮೃತದೇಹ ತರುತ್ತಿದ್ದ ಕುಟುಂಬ ಸದಸ್ಯರು ಭಾನುವಾರ ರಾಜ್ಯದ ಗಡಿಯಲ್ಲೇ ಪರದಾಡಬೇಕಾಯಿತು.
ಪುಣೆಯಲ್ಲಿ ಸಾಫ್ಟ್ವೇರ್ ಎಂಜಿನಿಯರ್ ಆಗಿದ್ದ ಮಹಿಳೆ ಭಾನುವಾರ ಮೃತಪಟ್ಟಿದ್ದರು. ಮೃತದೇಹದೊಂದಿಗೆ ಜಿಲ್ಲೆಯತ್ತ ಹೊರಟಿದ್ದ ಕುಟುಂಬ ಸದಸ್ಯರನ್ನು ರಾಜ್ಯ ಗಡಿಯ ಚೆಕ್ಪೋಸ್ಟ್ನಲ್ಲಿ ತಡೆದಿದ್ದಾರೆ. ಮಂಡ್ಯ ಜಿಲ್ಲಾಡಳಿತಕ್ಕೆ ವಿಷಯ ತಿಳಿಸಿದಾಗ ಮೃತದೇಹವನ್ನು ಕೋವಿಡ್ ಪರೀಕ್ಷೆ ಇಲ್ಲದೆ ಕಳುಹಿಸದಂತೆ ಸೂಚಿಸಿದ್ದಾರೆ.
‘ಮುಂಬೈನಿಂದ ಮೃತದೇಹ ತಂದು ಅಂತ್ಯ ಸಂಸ್ಕಾರ ನೆರವೇರಿಸಿದ ನಂತರ ಇಂತಹ ಪ್ರಕರಣಗಳನ್ನು ಗಂಭೀರವಾಗಿ ಪರಿಣಗಿಸಲಾಗಿದೆ. ಕೋವಿಡ್ ಪರೀಕ್ಷೆ ಇಲ್ಲದೆ ದೇಹ ಕಳಿಸದಂತೆ ತಿಳಿಸಲಾಯಿತು’ ಎಂದು ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಕೆ.ಪರಶುರಾಮ್ ತಿಳಿಸಿದರು.
ಮಹಾರಾಷ್ಟ್ರದಲ್ಲೇ ಅಂತ್ಯಸಂಸ್ಕಾರ ನೆರವೇರಿಸಲು ಮೃತ ಮಹಿಳೆಯ ಕುಟುಂಬ ಸದಸ್ಯರು ಒಪ್ಪಿದ್ದಾರೆ ಎಂದು ಬೆಳಗಾವಿ ಜಿಲ್ಲಾಡಳಿತದ ಮೂಲಗಳು ತಿಳಿಸಿವೆ.
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.