87ನೇ ಅಖಿಲ ಭಾರತ ಕನ್ನಡ ಸಾಹಿತ್ಯ ಸಮ್ಮೇಳನದ ಅಂಗವಾಗಿ ಮಂಡ್ಯ ನಗರದಲ್ಲಿ ಮಂಗಳವಾರ ಹಮ್ಮಿಕೊಂಡಿದ್ದ ‘ಕನ್ನಡಕ್ಕಾಗಿ ಓಡು’ ಕಾರ್ಯಕ್ರಮಕ್ಕೆ ನಿರ್ಮಲಾನಂದನಾಥ ಸ್ವಾಮೀಜಿ ಚಾಲನೆ ನೀಡಿದರು.
ಮಂಡ್ಯ: ‘ಕನ್ನಡ ಸಾಹಿತ್ಯ ಸಮ್ಮೇಳನಕ್ಕೆ ಯುವಜನರ ಜೋಶ್ ಸಿಕ್ಕಿದೆ. ಕನ್ನಡವನ್ನೇ ಉಸಿರಾಗಿಸಿಕೊಂಡ ನೀವೆಲ್ಲರೂ, ಈ ಆಚರಣೆಯನ್ನು ನಿತ್ಯೋತ್ಸವವನ್ನಾಗಿಸಿ. ಕನ್ನಡ ಸಾಹಿತ್ಯ ಮತ್ತು ಸಿನಿಮಾಗಳನ್ನು ಪ್ರೋತ್ಸಾಹಿಸಿ. ಕವಿಗಳ ಕಾವ್ಯಗಳನ್ನು ಓದುವುದೇ ಒಂದು ಖುಷಿ. ಕನ್ನಡದ ದೀಪ ಎಲ್ಲೆಡೆ ಬೆಳಗಲಿ’ ಎಂದು ಚಿತ್ರನಟ ಡಾಲಿ ಧನಂಜಯ ಹೇಳಿದರು.
‘ಕನ್ನಡಕ್ಕಾಗಿ ಓಡು’ ಮ್ಯಾರಥಾನ್ ಕಾರ್ಯಕ್ರಮದಲ್ಲಿ ಪಾಲ್ಗೊಂಡು ಯುವಜನರನ್ನು ಹುರಿದುಂಬಿಸಿದರು.
‘ಕನ್ನಡ ಹಬ್ಬದಲ್ಲಿ ಎಲ್ಲರೂ ಪಾಲ್ಗೊಳ್ಳಿ. ಯುವಜನರಿದ್ದಾಗ ಮಾತ್ರ ಅಲ್ಲಿ ಸಂಭ್ರಮವಿರುತ್ತದೆ. ಕನ್ನಡ ಭಾಷಾ ಬೆಳವಣಿಗೆಗೆ ಇಂಥ ಸಮ್ಮೇಳನ, ಕಾರ್ಯಕ್ರಮಗಳು ಪೂರಕ’ ಎಂದರು.
ಕ್ರೀಡಾಂಗಣದಿಂದ ಸ್ಯಾಂಜೋ ಆಸ್ಪತ್ರೆ ಸಮೀಪದ ಸಮ್ಮೇಳನದ ವೇದಿಕೆ ಸ್ಥಳದವರೆಗೆ 6 ಕಿ.ಮೀ. ಓಟದಲ್ಲಿ 10 ಸಾವಿರಕ್ಕೂ ಹೆಚ್ಚು ಮಂದಿ ಪಾಲ್ಗೊಂಡಿದ್ದರು. ಧನಂಜಯ ಅವರೊಂದಿಗೆ ನಿನಾಸಂ ಸತೀಶ್, ಸಪ್ತಮಿಗೌಡ, ಸಚಿವ ಎನ್.ಚಲುವರಾಯಸ್ವಾಮಿ, ಶಾಸಕ ರವಿಕುಮಾರ್, ಎಡಿಜಿಪಿ ಅಲೋಕ್ಕುಮಾರ್ ಅವರೂ ಪಾಲ್ಗೊಂಡು ಸ್ಫೂರ್ತಿ ತುಂಬಿದರು.
ಓಟದಲ್ಲಿ ಪಾಲ್ಗೊಂಡವರಿಗೆ ಉಚಿತವಾಗಿ ಟೀ–ಶರ್ಟ್ ನೀಡಲಾಯಿತು. ದಾರಿ ಮಧ್ಯೆ ನೀರು, ಬಿಸ್ಕತ್ ಹಾಗೂ ಕೊನೆಯಲ್ಲಿ ಎಲ್ಲರಿಗೂ ಉಪಾಹಾರ ನೀಡಲಾಯಿತು.
ಆದಿಚುಂಚನಗಿರಿ ಮಠದ ನಿರ್ಮಲಾನಂದಶ್ರೀ, ಗೌರಿಗದ್ದೆ ವಿನಯ್ ಗುರೂಜಿ, ಐಜಿಪಿ ಬಿ.ಆರ್.ರವಿಕಾಂತೇಗೌಡ, ಜಿಲ್ಲಾಧಿಕಾರಿ ಕುಮಾರ, ಕಸಾಪ ಅಧ್ಯಕ್ಷ ಮಹೇಶ ಜೋಶಿ, ವಿಧಾನ ಪರಿಷತ್ ಸದಸ್ಯರಾದ ಮಧು ಜಿ.ಮಾದೇಗೌಡ, ದಿನೇಶ್ ಗೂಳಿಗೌಡ, ಸಮ್ಮೇಳನ ಸಂಚಾಲಕಿ ಮೀರಾ ಶಿವಲಿಂಗಯ್ಯ ಪಾಲ್ಗೊಂಡಿದ್ದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.