
ಕೆ.ಆರ್.ಪೇಟೆ: ತಾಲ್ಲೂಕಿನ ತೆಂಡೇಕೆರೆ ಸರ್ಕಾರಿ ಪ್ರಾಥಮಿಕ ಶಾಲೆಯ 65 ವಿದ್ಯಾರ್ಥಿಗಳಿಗೆ ಉಚಿತವಾಗಿ ಎರಡು ದಿನ ಪ್ರವಾಸವನ್ನು ಶಾಲೆಯ ಮುಖ್ಯ ಶಿಕ್ಷಕ ಬಿ.ಎಸ್.ರಾಜು ಕಲ್ಪಿಸಿಕೊಡುವ ಮೂಲಕ ಗಮನ ಸೆಳೆದಿದ್ದಾರೆ.
ಶಾಲೆಯ ಎಲ್ಲಾ 65 ವಿದ್ಯಾರ್ಥಿಗಳು ಎರಡು ದಿನಗಳ ಶೈಕ್ಷಣಿಕ ಪ್ರವಾಸಕ್ಕೆ ಗುರುವಾರ ಶಾಲೆಯಿಂದ ಮಕ್ಕಳು ಕೆ.ಎಸ್.ಆರ್.ಟಿಸಿ ಬಸ್ ನಲ್ಲಿ ತೆರಳಿದ್ದು ಅದಕ್ಕಾಗಿ ತಮ್ಮ ಒಂದು ತಿಂಗಳ ವೇತನವನ್ನು ಅವರು ನೀಡಿದ್ದಾರೆ.
ಎರಡು ದಿನ ಪ್ರವಾಸದಲ್ಲಿ ವಿದ್ಯಾರ್ಥಿಗಳು ತಲಕಾಡು, ಮಹಾದೇಶ್ವರಬೆಟ್ಟ, ಶಿವನಸಮುದ್ರ ಪಾಲ್ಸ್, ಮೇಕೆದಾಟು ಪಾಲ್ಸ್, ಮೈಸೂರು ಅರಮನೆ, ಮೃಗಾಲಯ ಮತ್ತಿತರ ಸ್ಥಳಗಳಿಗೆ ಭೇಟಿ ನೀಡಲಿದ್ದಾರೆ. ಶಾಲೆಯಲ್ಲಿ ಶೇ 80ಕ್ಕಿಂತ ಹೆಚ್ಚು ಬಡವರು ಮತ್ತು ಕೂಲಿ ಕಾರ್ಮಿಕರ ಮಕ್ಕಳು ಓದುತ್ತಿದ್ದು ಶೈಕ್ಷಣಿಕ ಪ್ರವಾಸ ಹೋಗಬೇಕೆಂದು ಯೋಜನೆ ರೂಪಿಸಿದಾಗ ಶೇ 30ರಷ್ಟು ಮಕ್ಕಳು ಮಾತ್ರ ಪ್ರವಾಸ ಶುಲ್ಕ ನೀಡಲು ಮುಂದೆ ಬಂದರು. ಇದನ್ನು ಗಮನಿಸಿ ತಾವೇ ಪ್ರವಾಸ ವೆಚ್ಚ ಭರಿಸುವ ಭರವಸೆ ನೀಡಿ ಎಲ್ಲಾ ವಿದ್ಯಾರ್ಥಿಗಳಿಗೆ ಎರಡು ದಿನದ ಪ್ರವಾಸವನ್ನು ಕಲ್ಪಿಸಿದ್ದು ಶಾಲಾ ಅಭಿವೃದ್ಧಿ ಸಮಿತಿಯ ಸದಸ್ಯರು ಶಿಕ್ಷಕರು ,ಪೋಷಕರು ಸಹಕಾರ ನೀಡಿದ್ದಾರೆಂದು ಮುಖ್ಯ ಶಿಕ್ಷಕ ರಾಜು ತಿಳಿಸಿದರು.
ವಿದ್ಯಾರ್ಥಿಗಳೊಂದಿಗೆ ಶಾಲೆಯ ಶಿಕ್ಷಕರು, ಅಡುಗೆ ಸಹಾಯಕರು ಪ್ರಯಾಣ ಮಾಡಿದರು. ಶಾಲಾಭಿವೃದ್ಧಿ ಸಮಿತಿ ಸದಸ್ಯರು, ಗ್ರಾಮಸ್ಥರು ಮತ್ತು ಪೋಷಕರು ಈ ಕಾರ್ಯವನ್ನು ಪ್ರಶಂಸಿಸಿ ಬೀಳ್ಕೊಟ್ಟರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.