
ಮಳವಳ್ಳಿ: ‘ಪ್ರಸ್ತುತ ದಿನಮಾನಗಳಲ್ಲಿ ನಮ್ಮಗಳ ಬದುಕಿಗಾಗಿ ಪರಿಸರವನ್ನು ನಾಶ ಮಾಡುತ್ತಿದ್ದೇವೆ. ಪರಿಸರ ಹಾಳಾದಂತೆ ನಮ್ಮಗಳ ಆರೋಗ್ಯದ ಮೇಲೆ ದುಷ್ಟಪರಿಣಾಮ ಬೀರುತ್ತದೆ’ ಎಂದು ಟಿಎಪಿಸಿಎಂಎಸ್ ಮಾಜಿ ಅಧ್ಯಕ್ಷ ಕುಳ್ಳಚನ್ನಂಕಯ್ಯ ತಿಳಿಸಿದರು.
ತಾಲ್ಲೂಕಿನ ಕಂದೇಗಾಲ-ಕಲ್ಲುವೀರನಹಳ್ಳಿ ಬಳಿಯ ಮತ್ತಿತಾಳೇಶ್ವರಸ್ವಾಮಿ ದೇವಸ್ಥಾನ ಆವರಣದಲ್ಲಿ ತಳಗವಾದಿ ಸರ್ಕಾರಿ ಪ್ರೌಢಶಾಲೆಯ ವತಿಯಿಂದ ಆಯೋಜಿಸಿದ್ದ ಗಿಡ ನೆಡುವ ಕಾರ್ಯಕ್ರಮಕ್ಕೆ ಚಾಲನೆ ನೀಡಿ ಅವರು ಮಾತನಾಡಿದರು.
‘ಮನುಷ್ಯರು ಆರೋಗ್ಯವಂತರಾಗಿರಬೇಕಾದರೆ ಪ್ರತಿಯೊಬ್ಬರು ಗಿಡ-ಮರಗಳನ್ನು ಬೆಳಸಿ ಪರಿಸರವನ್ನು ಉಳಿಸುವುದಕ್ಕೆ ಮುಂದಾಗಬೇಕು. ಎಲ್ಲರಿಗೂ ಪರಿಸರದ ಬಗ್ಗೆ ಕಾಳಜಿ ಇರಬೇಕು. ಭೂಮಿ ಮೇಲೆ ಗಿಡಮರಗಳು ಹೆಚ್ಚಾಗಿದ್ದರೆ ಉತ್ತಮ ಗಾಳಿ ಬೀಸಲಿದೆ. ಮಳೆ ಆಗುತ್ತದೆ. ಪ್ರತಿಯೊಬ್ಬರು ಒಂದರೆಡು ಗಿಡಗಳನ್ನಾದರೂ ಬೆಳಸುವಂತಾಬೇಕು’ ಎಂದು ಕರೆ ನೀಡಿದರು.
ಮುಖ್ಯಶಿಕ್ಷಕ ಆರ್.ನಿರಂಜನ್ ಮಾತನಾಡಿ, ‘ವಿದ್ಯಾರ್ಥಿಗಳು ಬಾಲ್ಯದಿಂದಲೇ ಪರಿಸರದ ಬಗ್ಗೆ ಜಾಗೃತಿ ಹೊಂದಬೇಕು. ಶಾಲೆಯ ಆವರಣದಲ್ಲಿ ಕೇವಲ ಸಸಿಗಳನ್ನು ನೆಟ್ಟರ ಆಗುವುದಿಲ್ಲ, ನೆಟ್ಟ ಸಸಿಗಳನ್ನು ಪೋಷಿಸುವ ಕೆಲಸವನ್ನು ಸಹ ಮಾಡಬೇಕು’ ಎಂದು ಹೇಳಿದರು. ಎಸ್ಡಿಎಂಸಿ ಅಧ್ಯಕ್ಷ ಚೌಡೇಗೌಡ ಮಾತನಾಡಿದರು.
ದೇವಸ್ಥಾನದ ಆರ್ಚಕ ಮಂಜುನಾಥ್, ಗ್ರಾ.ಪಂ.ಮಾಜಿ ಅಧ್ಯಕ್ಷ ಮರಿಸ್ವಾಮಿ, ಮುಖಂಡರಾದ ರಾಜೇಶ್, ರಘು, ನಾಗೇಗೌಡ, ಶಿಕ್ಷಕರಾದ ಎಚ್.ಕೆ.ನಾಗರಾಜು, ಎ.ಎನ್.ಮಹೇಂದ್ರ, ಎನ್.ರಮೇಶ್, ಕಂದೇಗಾಲ ಸರ್ಕಾರಿ ಪ್ರೌಢಶಾಲೆಯ ಮುಖ್ಯಶಿಕ್ಷಕ ಹಾಗೂ ಶಿಕ್ಷಕರು ಪಾಲ್ಗೊಂಡಿದ್ದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.