
ಮಂಡ್ಯ: ‘ಶಾಲೆಗಳಿಗೆ ಅನಧಿಕೃತವಾಗಿ ಗೈರು ಹಾಜರಾಗುವ ಮತ್ತು ಪಾಠವನ್ನು ಸರಿಯಾಗಿ ಮಾಡದ ಶಿಕ್ಷಕರ ವಿರುದ್ಧ ನಿರ್ದಾಕ್ಷಿಣ್ಯ ಕ್ರಮ ಜರುಗಿಸಿ. ಯಾರ ಮುಲಾಜಿಗೂ ಒಳಗಾಗಬೇಡಿ. ಎಸ್ಎಸ್ಎಲ್ಸಿ ಫಲಿತಾಂಶ ಸುಧಾರಣೆಗೆ ಅಗತ್ಯ ಕ್ರಮಗಳನ್ನು ಕೈಗೊಂಡು ಜಿಲ್ಲೆಯ ಸ್ಥಾನ ಉತ್ತಮಪಡಿಸಲು ಶ್ರಮಿಸಿ’ ಎಂದು ಜಿಲ್ಲಾ ಉಸ್ತುವಾರಿ ಸಚಿವ ಎನ್.ಚಲುವರಾಯಸ್ವಾಮಿ ಖಡಕ್ ಸೂಚನೆ ನೀಡಿದರು.
ಜಿಲ್ಲಾ ಪಂಚಾಯಿತಿಯ ಕಾವೇರಿ ಸಭಾಂಗಣದಲ್ಲಿ ಮಂಗಳವಾರ ನಡೆದ ಕರ್ನಾಟಕ ಅಭಿವೃದ್ಧಿ ಕಾರ್ಯಕ್ರಮಗಳ ದ್ವಿತೀಯ ತ್ರೈಮಾಸಿಕ ಪ್ರಗತಿ ಪರಿಶೀಲನಾ ಸಭೆಯ ಅಧ್ಯಕ್ಷತೆ ವಹಿಸಿ ಅವರು ಮಾತನಾಡಿದರು. ಶಾಲೆಗಳಲ್ಲಿ ವಿಶೇಷ ತರಗತಿ ನಡೆಸಬೇಕು. ಹಿರಿಯ ಅಧಿಕಾರಿಗಳು ಶಾಲೆಗಳಿಗೆ ಭೇಟಿ ನೀಡಿ, ಕುಂದುಕೊರತೆ ನಿವಾರಿಸಬೇಕು. ಶಾಲಾ ಕೊಠಡಿಗಳ ಸ್ಥಿತಿಗತಿ ಬಗ್ಗೆ ವರದಿ ಕೊಡಿ ಎಂದು ಸಚಿವರು ಡಿಡಿಪಿಐ ಅವರಿಗೆ ಸೂಚಿಸಿದರು.
ಶಾಸಕ ಪಿ.ಎಂ.ನರೇಂದ್ರಸ್ವಾಮಿ ಧ್ವನಿಗೂಡಿಸಿ, ‘ಕೆಲವು ಶಿಕ್ಷಕರು ಬೋಧನೆ ಬಿಟ್ಟು ಬೇರೆ ಚಟುವಟಿಕೆಗಳಲ್ಲಿ ತೊಡಗಿದ್ದಾರೆ. ತಾಲ್ಲೂಕು ಕೇಂದ್ರಗಳಲ್ಲಿ ಕುಳಿತು ರಾಜಕೀಯ ಮಾಡುತ್ತಾರೆ. ಜನಪ್ರತಿನಿಧಿಗಳನ್ನೂ ಹೆದರಿಸುತ್ತಾರೆ. ಸರ್ಕಾರಿ ಶಾಲೆಯಲ್ಲಿ ಕಲಿಯುವುದು ಬಡ ಮಕ್ಕಳಿಗೆ ಶಾಪವಾಗಿ ಪರಿಣಮಿಸಿದೆ. ಗುಣಮಟ್ಟದ ಶಿಕ್ಷಣ ನೀಡದಿದ್ದರೆ ಇಂದಿನ ಮಕ್ಕಳು ಭವಿಷ್ಯದಲ್ಲಿ ಸಮಾಜಕ್ಕೆ ಕಂಟಕಪ್ರಾಯರಾಗುತ್ತಾರೆ. ಅದಕ್ಕೆ ನಾವು ಹೊಣೆಗಾರರಾಗಬೇಕಾಗುತ್ತದೆ’ ಎಂದು ಬೇಸರದಿಂದ ನುಡಿದರು.
‘ಜಿಲ್ಲೆಯಲ್ಲಿರುವ ಎಲ್ಲ ಸರ್ಕಾರಿ ಶಾಲೆಗಳನ್ನು ಡಿಜಿಟಲೀಕರಣ ಮಾಡಲು ಎಷ್ಟು ಅನುದಾನ ಬೇಕಾಗುತ್ತದೆ ಎಂಬ ಬಗ್ಗೆ ವರದಿ ಕೊಡಿ. ಸರ್ಕಾರಿ ಶಾಲೆಯ ಮಕ್ಕಳಿಗೆ ನೋಟ್ಬುಕ್ ಮತ್ತು ಸಂಭವನೀಯ ಪ್ರಶ್ನೆಗಳ ಬುಕ್ಲೆಟ್ ಹಂಚಲು ಬೇಕಾಗಿರುವ ₹10 ಲಕ್ಷ ಅನುದಾನವನ್ನು ಕೊಡಿಸುತ್ತೇನೆ’ ಎಂದು ಶಾಸಕ ನರೇಂದ್ರಸ್ವಾಮಿ ಅವರು ಸಿಇಒ ಅವರಿಗೆ ತಿಳಿಸಿದರು.
ಮನೆ ಹಾನಿ– ಶೀಘ್ರ ಪರಿಹಾರ ಕಲ್ಪಿಸಿ:
ಜಿಲ್ಲೆಯಲ್ಲಿ ಸದರಿ ವರ್ಷ ಒಟ್ಟು 151 ಮನೆಗಳು ಮುಂಗಾರಿನಲ್ಲಿ ಹಾನಿಗೊಳಗಾಗಿದ್ದು ಈಗಾಗಲೇ ಅರ್ಹರಿಗೆ ₹60.36 ಲಕ್ಷ ಪರಿಹಾರ ಧನ ನೀಡಲಾಗಿದೆ ಎಂದು ಜಿಲ್ಲಾಧಿಕಾರಿ ಕುಮಾರ ತಿಳಿಸಿದರು. ಸಚಿವರು ಪ್ರತಿಕ್ರಿಯಿಸಿ, ‘ಮನೆ ಹಾನಿ ಪರಿಹಾರ ಕೊಡುವ ಜೊತೆಗೆ ಅಧಿಕಾರಿಗಳು ಮನೆ ಹಾನಿಗೊಳಗಾದವರ ವಿವರಗಳನ್ನು ರಾಜೀವ್ ಗಾಂಧಿ ಹೌಸಿಂಗ್ ಪೋರ್ಟಲ್ನಲ್ಲಿ ನಮೂದಿಸಿ ಶೀಘ್ರವಾಗಿ ವಸತಿ ಸೌಲಭ್ಯ ಕೊಡಿಸಲು ಕ್ರಮ ಕೈಗೊಳ್ಳಬೇಕು’ ಎಂದು ಸೂಚಿಸಿದರು.
‘ಹಿಂದೆ ದರಖಾಸ್ತ್ ಪೋಡಿ ಮಾಡಲು ಕನಿಷ್ಠ 5 ದಾಖಲೆಗಳ ಅಗತ್ಯ ಇತ್ತು. ಆದರೆ, ನಮ್ಮ ಸರ್ಕಾರ ಅಧಿಕಾರಕ್ಕೆ ಬಂದ ನಂತರ 3 ದಾಖಲೆ ಇದ್ದರೆ ಸಾಕು ದರಖಾಸ್ತ್ ಪೋಡಿ ಮಾಡಲಾಗುತ್ತಿದೆ. ಮುಂದಿನ ದಿನಗಳಲ್ಲಿ ಯಾವುದೇ ದಾಖಲೆ ಇಲ್ಲದೆ ಇದ್ದಲ್ಲಿ ಸದರಿ ಅರ್ಜಿದಾರರ ಊರಿಗೆ ಹೋಗಿ ಪರಿಶೀಲನೆ ಮಾಡಿ ಯಾವುದೇ ಅಡಚಣೆ ಇಲ್ಲದೇ ಇದ್ದಲ್ಲಿ ಅವರಿಗೆ ದರಖಾಸ್ತ್ ಪೋಡಿ ಮಾಡಿಕೊಡಲು ಚಿಂತನೆ ನಡೆಸಲಾಗಿದೆ’ ಎಂದು ಸಚಿವರು ತಿಳಿಸಿದರು.
ರೈತರ ಆತ್ಮಹತ್ಯೆ ಇಳಿಕೆ:
ಕಳೆದ ಐದು ವರ್ಷಗಳಿಗೆ ಹೋಲಿಸಿದರೆ ಜಿಲ್ಲೆಯಲ್ಲಿ ರೈತರ ಆತ್ಮಹತ್ಯೆ ಪ್ರಕರಣಗಳ ಸಂಖ್ಯೆ ಕಡಿಮೆಯಾಗಿದೆ. ಸದರಿ ವರ್ಷ ಜಿಲ್ಲೆಯಲ್ಲಿ 14 ರೈತ ಆತ್ಮಹತ್ಯೆ ಪ್ರಕರಣಗಳು ದಾಖಲಾಗಿದ್ದು, ಈಗಾಗಲೇ 9 ಅರ್ಹ ಪ್ರಕರಣಗಳಿಗೆ ಪರಿಹಾರ ನೀಡಲಾಗಿದೆ. 4 ಪ್ರಕರಣಗಳು ತೀರ್ಮಾನ ಮಾಡಲು ಬಾಕಿ ಇದ್ದು, 1 ಪ್ರಕರಣ ಸರ್ಕಾರದ ಹಂತದಲ್ಲಿ ಬಾಕಿ ಇದೆ ಎಂದು ಜಿಲ್ಲಾಧಿಕಾರಿ ಸಭೆಗೆ ಮಾಹಿತಿ ನೀಡಿದರು.
ವಿಧಾನ ಪರಿಷತ್ ಸದಸ್ಯ ದಿನೇಶ್ ಗೂಳಿಗೌಡ, ಎಂ.ಡಿ.ಸಿ.ಸಿ ಬ್ಯಾಂಕ್ ಅಧ್ಯಕ್ಷ ಸಚಿನ್ ಚಲುವರಾಯಸ್ವಾಮಿ, ಮುಡಾ ಅಧ್ಯಕ್ಷ ಬಿ.ಪಿ. ಪ್ರಕಾಶ್, ಮೈಷುಗರ್ ಅಧ್ಯಕ್ಷ ಸಿ.ಡಿ ಗಂಗಾಧರ್, ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಮಲ್ಲಿಕಾರ್ಜುನ ಬಾಲದಂಡಿ, ಹೆಚ್ಚುವರಿ ಜಿಲ್ಲಾಧಿಕಾರಿ ಬಿ.ಸಿ. ಶಿವಾನಂದಮೂರ್ತಿ, ಕೆ.ಡಿ.ಪಿ ನಾಮ ನಿರ್ದೇಶನ ಸದಸ್ಯರಾದ ನಟರಾಜು, ಆಶಾ, ದೇವಪ್ಪ ಮತ್ತು ವಿವಿಧ ಇಲಾಖೆಗಳ ಅಧಿಕಾರಿಗಳು ಇದ್ದರು.
‘ಡೀಮ್ಡ್ ಫಾರೆಸ್ಟ್ ಸರ್ವೆ ಪೂರ್ಣಗೊಳಿಸಿ’ ಜಿಲ್ಲೆಯಲ್ಲಿ ಡೀಮ್ಡ್ ಫಾರೆಸ್ಟ್ನ 754 ಸರ್ವೆ ಸಂಖ್ಯೆಗಳಲ್ಲಿ 317 ಸರ್ವೆಗಳ ಜಂಟಿ ಸಮೀಕ್ಷೆ ಕಾರ್ಯ ಪೂರ್ಣಗೊಂಡಿದ್ದು ಶೇ 42 ಪ್ರಗತಿ ಸಾಧಿಸಲಾಗಿದೆ. ಬಾಕಿ ಸರ್ವೆ ಕಾರ್ಯವನ್ನು ಶೀಘ್ರವಾಗಿ ಪೂರ್ಣಗೊಳಿಸಿ ಎಂದು ಸಚಿವ ಚಲುವರಾಯಸ್ವಾಮಿ ಸೂಚಿಸಿದರು. ಕೆ.ಆರ್.ಪೇಟೆ ತಾಲ್ಲೂಕಿನಲ್ಲಿ ಸರ್ವೆ ಕಾರ್ಯ ನೈಜವಾಗಿ ನಡೆಯುತ್ತಿಲ್ಲ ಎಂದು ಶಾಸಕ ಎಚ್.ಟಿ.ಮಂಜು ದೂರಿದರು. ಜಿಲ್ಲಾಧಿಕಾರಿ ಕುಮಾರ ಪ್ರತಿಕ್ರಿಯಿಸಿ ಮೊಬೈಲ್ ಆ್ಯಪ್ ಮೂಲಕ ಸರ್ವೆ ಕಾರ್ಯ ನಡೆಸಲಾಗುತ್ತಿದ್ದು ಗುರಿ ಸಾಧನೆಗೆ ಕನಿಷ್ಠ 3 ತಿಂಗಳು ಕಾಲಾವಕಾಶ ಬೇಕು ಎಂದು ತಿಳಿಸಿದರು.
‘ಲಂಚ ಪಡೆದಿದ್ದಕ್ಕೆ ಸಾಕ್ಷಿ ಎಲ್ಲಿಂದ ತರೋಣ’ ಮದ್ದೂರು ತಾಲ್ಲೂಕಿನ ಚಿಕ್ಕೋನಹಳ್ಳಿ ರೈತನೊಬ್ಬ 10 ವರ್ಷದಿಂದ ಒಂದು ಎಕರೆ ಜಮೀನಿನ ಖಾತೆ ಮಾಡಿಸಿಕೊಳ್ಳಲು ಕಚೇರಿಗೆ ಅಲೆದಾಡುತ್ತಾ ಕೇಸ್ ವರ್ಕರ್ಗೆ ನಿರಂತರವಾಗಿ ಲಂಚ ಕೊಡುತ್ತಿದ್ದಾರೆ ಎಂದು ವಿಧಾನ ಪರಿಷತ್ ಸದಸ್ಯ ಕೆ.ವಿವೇಕಾನಂದ ಆರೋಪ ಮಾಡಿದರು. ಇದಕ್ಕೆ ಡಿಸಿಯವರು ‘ಸಾಕ್ಷಿ ಇದ್ದರೆ ಕೊಡಿ ಸುಮ್ಮನೆ ಆರೋಪ ಮಾಡಬೇಡಿ’ ಎಂದರು. ಲಂಚ ತೆಗೆದುಕೊಂಡಿದ್ದಕ್ಕೆ ಸಾಕ್ಷಿ ಎಲ್ಲಿಂದ ತರೋಣ ಎಂದು ವಿವೇಕಾನಂದ ಗರಂ ಆದರು. ಸಚಿವ ಚಲುವರಾಯಸ್ವಾಮಿ ಮಧ್ಯಪ್ರವೇಶಿಸಿ ‘ಅರಣ್ಯ ಇಲಾಖೆಯವರು ನಮ್ಮ ದೇಶದವರಲ್ಲ ಅಮೆರಿಕಾದಿಂದ ಬಂದವರ ರೀತಿ ವರ್ತಿಸುತ್ತಾರೆ. ರೈತರನ್ನು ಅನಗತ್ಯವಾಗಿ ಕಚೇರಿಗೆ ಅಲೆದಾಡಿಸಬೇಡಿ ಎಂದು ಎಷ್ಟು ಬಾರಿ ಹೇಳಿದರೂ ತಿದ್ದಿಕೊಳ್ಳುತ್ತಿಲ್ಲ. ಲಂಚ ತೆಗೆದುಕೊಳ್ಳುವಷ್ಟೇ ತಪ್ಪು ಕೊಟ್ಟವನದ್ದೂ ಇದೆ. ಲಂಚ ಪಡೆದಿದ್ದರೆ ತಪ್ಪಿತಸ್ಥನ ವಿರುದ್ಧ ಕ್ರಮ ಕೈಗೊಳ್ಳಿ. ಒಂದು ವಾರದೊಳಗೆ ರೈತನ ಸಮಸ್ಯೆ ಪರಿಹರಿಸಿ’ ಎಂದು ಜಿಲ್ಲಾಧಿಕಾರಿಗೆ ಸೂಚಿಸಿದರು.
ಜಲಜೀವನ್: ಪುನರ್ ಟೆಂಡರ್ಗೆ ಸೂಚನೆ ಜಲಜೀವನ್ ಮಿಷನ್ ಯೋಜನೆಯ ಕಾಮಗಾರಿ ತೀರಾ ವಿಳಂಬವಾಗಿದ್ದು ಎಲ್ ಅಂಡ್ ಟಿ ಟೆಂಡರ್ದಾರರನ್ನು ಬದಲಿಸಲು ಕೆಡಿಪಿ ಸಭೆಯಲ್ಲಿ ರೆಸಲ್ಯೂಷನ್ ಪಾಸ್ ಮಾಡಿ ಕಳುಹಿಸಿಕೊಡಿ. ಸರ್ಕಾರದ ಕಾರ್ಯದರ್ಶಿ ಮಟ್ಟದಲ್ಲಿ ಮಾತನಾಡಿ ‘ರೀ ಟೆಂಡರ್’ ಮಾಡಿಸಲು ಕ್ರಮ ಕೈಗೊಳ್ಳೋಣ ಎಂದು ಸಚಿವ ಚಲುವರಾಯಸ್ವಾಮಿ ತಿಳಿಸಿದರು. ‘ಜಲಜೀವನ್ ಮಿಷನ್ ಯೋಜನೆಯಡಿ ಮನೆ–ಮನೆ ನಳ ಸಂಪರ್ಕ ಕಲ್ಪಿಸಲು ಕಾಂಕ್ರೀಟ್ ರಸ್ತೆಗಳನ್ನು ಹಾಳು ಮಾಡಿದ್ದಾರೆ. ಇದುವರೆಗೆ ದುರಸ್ತಿ ಮಾಡದಿರುವ ಕಾರಣ ಜನರಿಗೆ ತೀವ್ರ ತೊಂದರೆಯಾಗಿದೆ. ಗುತ್ತಿಗೆದಾರನಿಂದ ಫೆಬ್ರುವರಿ ಅಂತ್ಯದೊಳಗೆ ರಸ್ತೆ ದುರಸ್ತಿ ಮಾಡಿಸಬೇಕು. ಇಲ್ಲದಿದ್ದರೆ ಸ್ಥಳೀಯ ಸಂಸ್ಥೆ ಚುನಾವಣೆ ವೇಳೆ ಜನರಿಗೆ ಉತ್ತರ ಕೊಡಲು ಆಗುವುದಿಲ್ಲ’ ಎಂದು ಶಾಸಕ ನರೇಂದ್ರಸ್ವಾಮಿ ಹೇಳಿದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.