ಮಂಡ್ಯ: ಶ್ರೀರಂಗಪಟ್ಟಣ ತಾಲ್ಲೂಕು ಕೆಆರ್ಎಸ್ ಬೃಂದಾವನ ಉದ್ಯಾನದಲ್ಲಿರುವ ನವೀಕೃತ, ಹೈಟೆಕ್ ಸಂಗೀತ ಕಾರಂಜಿಗೆ ಜಿಲ್ಲಾ ಉಸ್ತುವಾರಿ ಸಚಿವ ಎನ್.ಚಲುವರಾಯಸ್ವಾಮಿ ಭಾನುವಾರ ರಾತ್ರಿ ಚಾಲನೆ ನೀಡಿದರು.
ಕಾವೇರಿ ನೀರಾವರಿ ನಿಗಮ ₹ 1.80 ಕೋಟಿ ಹಣ ಖರ್ಚು ಮಾಡಿ ಸಂಗೀತ ಕಾರಂಜಿಯನ್ನು ನವೀಕರಣಗೊಳಿಸಿದೆ.
ಕಿಕ್ಕಿರಿದು ತುಂಬಿದ್ದ ಸಾವಿರಕ್ಕೂ ಹೆಚ್ಚು ಜನರ ಸಮ್ಮುಖದಲ್ಲಿ ಸಚಿವ ಚಲುವರಾಯಸ್ವಾಮಿ ಕಾರಂಜಿಗೆ ಚಾಲನೆ ನೀಡಿದರು.
ಕತ್ತಲು- ಬೆಳಕಿನಾಟದ ನಡುವೆ ಚಿಮ್ಮಿದ ನೀರು, ಹೊರಹೊಮ್ಮಿದ ಕೃತಕ ಮಂಜು ಜನರ ಮನಸೂರೆಗೊಂಡಿತು.
2ಡಿ ನಾಝಲ್ ತಂತ್ರಜ್ಞಾನದ ಮೂಲಕ ಕಲಾತ್ಮತ ರೂಪ ಸೃಷ್ಟಿಯಾಯಿತು.
ಆಕರ್ಷಕ ವಿದ್ಯುತ್ ದೀಪಗಳ ಬೆಳಕಿನಲ್ಲಿ, ನೀರಿನ ಬುಗ್ಗೆಗಳ ಲಾಸ್ಯ ಗಮನ ಸೆಳೆಯಿತು.
ಮಹಾರಾಷ್ಟ್ರ ಮೂಲದ ಕಂಪನಿ ಕಾರಂಜಿಯನ್ನು ನವೀಕರಣಗೊಳಿಸಿದೆ. 14 ಮೀಟರ್ ಅಗಲ, 14 ಮೀಟರ್ ಉದ್ದದ ಕಾರಂಜಿಗೆ ಅತ್ಯಾಧುನಿಕ ವಿನ್ಯಾಸ ನೀಡಲಾಗಿದೆ. ಸ್ಟೀಲ್ ಮತ್ತು ಹಿತ್ತಾಳೆಯ ಸರಳುಗಳ ನಡುವೆ ನೀರು ಚಿಮ್ಮು ಬರುತ್ತದೆ.
ಹೊಸ ಕಾರಂಜಿ ಪ್ರತಿದಿನ ಸಂಜೆ 7 ರಿಂದ ರಾತ್ರಿ 8ಗಂಟೆಯವರೆಗೆ ಪ್ರದರ್ಶನ ನೀಡಲಿದೆ. ರಜಾ ದಿನಗಳಲ್ಲಿ ರಾತ್ರಿ 9ರವರೆಗೂ ಪ್ರದರ್ಶನ ಇರಲಿದೆ.
ಬೃಂದಾವನದ ಉತ್ತರ ಭಾಗದಲ್ಲಿರುವ ಈ ಕಾರಂಜಿಯ ನೃತ್ಯ ವೈಭವವನ್ನು ಸಾವಿರ ಜನ ವೀಕ್ಷಣೆ ಮಾಡಬಹುದು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.