ADVERTISEMENT

ಮಂಡ್ಯ | ಶಿಕ್ಷಣದಿಂದ ಉಜ್ವಲ ಭವಿಷ್ಯ: ನಾಗಲಕ್ಷ್ಮಿ

​ಪ್ರಜಾವಾಣಿ ವಾರ್ತೆ
Published 1 ಮಾರ್ಚ್ 2026, 5:10 IST
Last Updated 1 ಮಾರ್ಚ್ 2026, 5:10 IST
ಮಂಡ್ಯ ನಗರದ ಚಿಕ್ಕಮಂಡ್ಯ ಕೆರೆಯಂಗಳದ ಹಿಂದುಳಿದ ವರ್ಗಗಳ ಕಲ್ಯಾಣ ಇಲಾಖೆಯ ಮೆಟ್ರಿಕ್‌ ನಂತರದ ವೃತ್ತಿಪರ ಬಾಲಕಿಯರ ವಿದ್ಯಾರ್ಥಿನಿಲಯಕ್ಕೆ ಶನಿವಾರ ಭೇಟಿ ನೀಡಿದ ರಾಜ್ಯ ಮಹಿಳಾ ಆಯೋಗದ ಅಧ್ಯಕ್ಷೆ ನಾಗಲಕ್ಷ್ಮಿ ಚೌಧರಿ ಅವರು ವಿದ್ಯಾರ್ಥಿನಿಯರ ಜೊತೆ ಸಂವಾದ ನಡೆಸಿದರು 
ಮಂಡ್ಯ ನಗರದ ಚಿಕ್ಕಮಂಡ್ಯ ಕೆರೆಯಂಗಳದ ಹಿಂದುಳಿದ ವರ್ಗಗಳ ಕಲ್ಯಾಣ ಇಲಾಖೆಯ ಮೆಟ್ರಿಕ್‌ ನಂತರದ ವೃತ್ತಿಪರ ಬಾಲಕಿಯರ ವಿದ್ಯಾರ್ಥಿನಿಲಯಕ್ಕೆ ಶನಿವಾರ ಭೇಟಿ ನೀಡಿದ ರಾಜ್ಯ ಮಹಿಳಾ ಆಯೋಗದ ಅಧ್ಯಕ್ಷೆ ನಾಗಲಕ್ಷ್ಮಿ ಚೌಧರಿ ಅವರು ವಿದ್ಯಾರ್ಥಿನಿಯರ ಜೊತೆ ಸಂವಾದ ನಡೆಸಿದರು    

ಮಂಡ್ಯ: ‘ರಾಜ್ಯ ಸರ್ಕಾರ ಕಲ್ಪಿಸಿರುವ ಹಾಸ್ಟೆಲ್‌ ಸೌಲಭ್ಯವನ್ನು ಸದುಪಯೋಗ ಪಡಿಸಿಕೊಂಡು ಉತ್ತಮ ವ್ಯಾಸಂಗ ಮಾಡಿ, ನಿಮ್ಮ ಗುರಿಯನ್ನು ಸಾಧಿಸಿ’ ಎಂದು ರಾಜ್ಯ ಮಹಿಳಾ ಆಯೋಗದ ಅಧ್ಯಕ್ಷೆ ನಾಗಲಕ್ಷ್ಮಿ ಚೌಧರಿ ಹೇಳಿದರು. 

ನಗರದ ಚಿಕ್ಕಮಂಡ್ಯ ಕೆರೆಯಂಗಳದ ಹಿಂದುಳಿದ ವರ್ಗಗಳ ಕಲ್ಯಾಣ ಇಲಾಖೆಯ ಮೆಟ್ರಿಕ್‌ ನಂತರದ ವೃತ್ತಿಪರ ಬಾಲಕಿಯರ ವಿದ್ಯಾರ್ಥಿನಿಲಯಕ್ಕೆ ಶನಿವಾರ ಭೇಟಿ ನೀಡಿ ಅವರು ಮಾತನಾಡಿದರು. 

ಈಗ ನಿಮಗೆ ಸಿಕ್ಕಿರುವ ಸಮಯವನ್ನು ನಿಮ್ಮ ಭವಿಷ್ಯ ರೂಪಿಸಿಕೊಳ್ಳಲು ಬಳಸಿ. ಮೊಬೈಲ್‌ ವ್ಯಸನಕ್ಕೆ ಬೀಳಬೇಡಿ. ನಿಮ್ಮ ಸ್ವಾವಲಂಬಿ ಬದುಕು ಕಟ್ಟಿಕೊಳ್ಳಲು ಪರಿಶ್ರಮಪಡಿ. ಶಿಕ್ಷಣ ನಿಮಗೆ ಉಜ್ವಲ ಭವಿಷ್ಯ ನೀಡುತ್ತದೆ. ಆಗ ನೀವು ಇತರರಿಗೂ ಸಹಾಯ ಮಾಡಬಹುದು ಎಂದರು. 

ADVERTISEMENT

ಯಶಸ್ಸಿಗೆ ಅಡ್ಡದಾರಿಗಳಿಲ್ಲ. ಹೀಗಾಗಿ ಓದಿನಿಂದ ವಿಮುಖರಾಗಬೇಡಿ. ಸರ್ಕಾರಿ ಸೌಲಭ್ಯಗಳನ್ನು ಸದ್ಬಳಕೆ ಮಾಡಿಕೊಂಡು, ಉತ್ತಮ ಜೀವನ ರೂಪಿಸಿಕೊಳ್ಳಿ ಎಂದು ಕಿವಿಮಾತು ಹೇಳಿದರು. 

18 ವರ್ಷ ತುಂಬಿದ ತಕ್ಷಣ ಹೆಣ್ಣುಮಕ್ಕಳನ್ನು ತಂದೆ– ತಾಯಿ ವಿವಿಧ ಕಾರಣಗಳಿಂದ ವಿವಾಹ ಮಾಡುತ್ತಾರೆ. ಉನ್ನತ ವ್ಯಾಸಂಗದ  ಕನಸು ಕಟ್ಟಿಕೊಂಡಿದ್ದ ಯುವತಿಯರು, ಅರ್ಧಕ್ಕೆ ಓದು ನಿಲ್ಲಿಸಿ ತಂದೆ ತಾಯಿ ಬಲವಂತಕ್ಕೆ ಮದುವೆಯಾಗುತ್ತಿರುವ ಉದಾಹರಣೆಗಳನ್ನು ನೋಡುತ್ತಿದ್ದೇವೆ ಎಂದರು. 

ವಿವಾಹವಾದ ನಂತರ ಗಂಡ ಹಿಂಸೆ, ಕಿರುಕುಳ ನೀಡಿದರೆ, ಆತನನ್ನು ತೊರೆದು ತವರು ಮನೆಗೆ ಬರಲು ಕೆಲವು ಹೆಣ್ಣುಮಕ್ಕಳಿಗೆ ಸಾಧ್ಯವಾಗುವುದಿಲ್ಲ. ತವರು ಮನೆಯಲ್ಲಿ ತೀವ್ರ ಬಡತನವಿದ್ದು, ತಂದೆ–ತಾಯಿ ಕೂಲಿ ಮಾಡಿ ಜೀವನ ಸಾಗಿಸುತ್ತಿರುತ್ತಾರೆ. ಇಂಥ ಸಂದರ್ಭದಲ್ಲಿ ಕೂಸನ್ನು ಕಟ್ಟಿಕೊಂಡು ಅವರು ಅನೇಕ ಸಮಸ್ಯೆಗಳನ್ನು ಎದುರಿಸುವುದನ್ನು ನೋಡಿದ್ದೇನೆ ಎಂದು ಕೆಲವು ನಿದರ್ಶನಗಳ ಸಹಿತ ಹೇಳಿದರು. 

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.