ಶ್ರೀರಂಗಪಟ್ಟಣ: ಜೆಡಿಎಸ್ ಹಿಡಿತದಲ್ಲಿದ್ದ ತಾಲ್ಲೂಕು ವ್ಯವಸಾಯೋತ್ಪನ್ನ ಮಾರಾಟ ಸಹಕಾರ ಸಂಘ (ಟಿಎಪಿಸಿಎಂಎಸ್)ದ ಅಧಿಕಾರ ಗುರುವಾರ ನಡೆದ ಚುನಾವಣೆಯಲ್ಲಿ ಕಾಂಗ್ರೆಸ್ ಪಾಲಾಯಿತು.
ಕಾಂಗ್ರೆಸ್ ಬೆಂಬಲಿತ ಎಂ. ನಂದೀಶ್ ಅಧ್ಯಕ್ಷರಾಗಿ ಅವಿರೋಧವಾಗಿ ಆಯ್ಕೆಯಾದರು. ಈ ಹಿಂದೆ ಜೆಡಿಎಸ್ನಲ್ಲಿ ಗುರುತಿಸಿಕೊಂಡಿದ್ದ ಉಪಾಧ್ಯಕ್ಷೆ ಲಕ್ಷ್ಮಿದೇವಮ್ಮ, ಸದಸ್ಯರಾದ ಎಂ. ನಂದೀಶ್, ನಾಗರಾಜು ಮತ್ತು ಕಾಂತಾಮಣಿ ಬದಲಾದ ರಾಜಕೀಯ ಬೆಳವಣಿಗೆಯಲ್ಲಿ ಕಾಂಗ್ರೆಸ್ ಪರ ಒಲವು ವ್ಯಕ್ತಪಡಿಸಿದ್ದು, ಟಿಪಿಸಿಎಂಎಸ್ನಲ್ಲಿ ಕಾಂಗ್ರೆಸ್ ಬಲ 8ಕ್ಕೆ ಏರಿದೆ. ಜೆಡಿಎಸ್ ಬಲ ನಾಲ್ಕಕ್ಕೆ ಕುಸಿದಿದೆ. ಹಾಗಾಗಿ ಅಧ್ಯಕ್ಷ ಸ್ಥಾನಕ್ಕೆ ನಡೆದ ಚುನಾವಣೆಯಲ್ಲಿ ಕಾಂಗ್ರೆಸ್ ಬೆಂಬಲಿತ ಎಂ. ನಂದೀಶ್ ಆಯ್ಕೆಯಾದರು. ‘ಅಧ್ಯಕ್ಷ ಸ್ಥಾನಕ್ಕೆ ಎಂ. ನಂದೀಶ್ ಮಾತ್ರ ನಾಮಪತ್ರ ಸಲ್ಲಿಸಿದ್ದು, ಅವರು ಅವಿರೋಧವಾಗಿ ಆಯ್ಕೆಯಾಗಿದ್ದಾರೆ’ ಎಂದು ಚುನಾವಣಾಧಿಕಾರಿ ಎನ್.ಎಲ್. ರವಿ ಪ್ರಕಟಿಸಿದರು. ಅಧ್ಯಕ್ಷರ ಆಯ್ಕೆ ಪ್ರಕ್ರಿಯೆ ವೇಳೆ ಸಂಘದ ಎಲ್ಲ ನಿರ್ದೇಶಕರು ಹಾಜರಿದ್ದರು.
ಶಾಸಕ ರಮೇಶ ಬಂಡಿಸಿದ್ದೇಗೌಡ ಟಿಎಪಿಸಿಎಂಎಸ್ ನೂತನ ಅಧ್ಯಕ್ಷ ಎಂ. ನಂದೀಶ್ ಅವರನ್ನು ಅಭಿನಂದಿಸಿದರು. ಮನ್ಮುಲ್ ಅಧ್ಯಕ್ಷ ಬಿ. ಬೋರೇಗೌಡ, ಎಂಡಿಸಿಸಿ ಬ್ಯಾಂಕ್ ನಿರ್ದೇಶಕ ಪಿ.ಎಸ್. ಚಂದ್ರಶೇಖರ್, ಟಿಎಪಿಸಿಎಂಎಸ್ ಮಾಜಿ ಅಧ್ಯಕ್ಷರಾದ ಬಿ.ಎಸ್. ಚಂದ್ರಶೇಖರ್, ರಾಮಚಂದ್ರು, ಎಪಿಎಂಸಿ ಮಾಜಿ ಅಧ್ಯಕ್ಷ ಬಿ.ಎಂ. ಸ್ವಾಮಿಗೌಡ, ಪುರಸಭೆ ಸದಸ್ಯರಾದ ಎಂ.ಎಲ್. ದಿನೇಶ್, ದಯಾನಂದ್, ಕಾಂಗ್ರೆಸ್ ನಗರ ಘಟಕದ ಅಧ್ಯಕ್ಷ ಎಂ. ಸುರೇಶ್, ಗೌರವಾಧ್ಯಕ್ಷ ಎಂ. ಲೋಕೇಶ್, ಯುವ ಕಾಂಗ್ರೆಸ್ ಅಧ್ಯಕ್ಷ ರಜಿನಿ, ಉಪಾಧ್ಯಕ್ಷ ರವಿಕುಮಾರ್ ನೂತನ ಅಧ್ಯಕ್ಷರನ್ನು ಅಭಿನಂದಿಸಿದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.