
ನಾಗಮಂಗಲ: ‘ಶಾಸ್ತ್ರಗಳ ಪ್ರಕಾರ ಹೆಣ್ಣು ದೇವಿ ಸ್ವರೂಪ ಅಲ್; ಬದಲಿಗೆ ಸಾಕ್ಷಾತ್ ದೇವಿಯೇ ಆಗಿದ್ದಾಳೆ. ಅಂತಹ ನಾರಿಯರಿಗೆ ಸದಾ ಶಕ್ತಿ ತುಂಬಲು ಚುಂಚಾದ್ರಿ ಸಮಾವೇಶದ ಮೂಲಕ ಬೃಹತ್ ವೇದಿಕೆ ಕಲ್ಪಿಸುತ್ತಿರುವುದು ಮಠದ ಗರಿಮೆ’ ಎಂದು ರಾಜ್ಯ ಮಹಿಳಾ ಆಯೋಗದ ಮಾಜಿ ಅಧ್ಯಕ್ಷೆ ಮಂಜುಳಾ ಮಾನಸ ಅಭಿಪ್ರಾಯ ಪಟ್ಟರು.
ತಾಲ್ಲೂಕಿನ ಆದಿಚುಂಚನಗಿರಿ ಕ್ಷೇತ್ರದಲ್ಲಿ ಭೈರವೈಕ್ಯ ಬಾಲಗಂಗಾಧರನಾಥ ಸ್ವಾಮೀಜಿಯವರ 81ನೇ ಜಯಂತ್ಯುತ್ಸವ ಹಾಗೂ 13ನೇ ವರ್ಷದ ಸಂಸ್ಮರಣಾ ಮಹೋತ್ಸವದ ಅಂಗವಾಗಿ ಶನಿವಾರ ಆಯೋಜಿಸಿದ್ದ ರಾಜ್ಯಮಟ್ಟದ ಚುಂಚಾದ್ರಿ ಮಹಿಳಾ ಸಮಾವೇಶದಲ್ಲಿ ಅವರು ಮಾತನಾಡಿದರು.
‘ರಾಜ್ಯದಲ್ಲಿ ಡ್ರಗ್ಸ್ ಮಹಾಮಾರಿ ದಿನೇ ದಿನೆ ಹೆಚ್ಚಾಗುತ್ತಿದೆ. ಒಕ್ಕಲಿಗ ಸಮುದಾಯದ ಹೆಣ್ಣು ಮಕ್ಕಳು ತಮ್ಮ ಸುತ್ತಮುತ್ತಲಿನ ಪರಿಸರದಲ್ಲಿ ಇರುವ ಸ್ಲಂ ಹಾಗೂ ಹಿಂದುಳಿದ ವರ್ಗಗಳ ನಡುವೆ ಇದ್ದು ಅವರನ್ನು ಡ್ರಗ್ಸ್ ಹಾಗೂ ಅಪರಾಧ ಪ್ರಕರಣಗಳಲ್ಲಿ ಭಾಗಿಗಳಾಗದಂತೆ ತಡೆದು ಮಾತೃತ್ವ ಮೆರೆಯಬೇಕಿದೆ’ ಎಂದರು.
ಸಮಾವೇಶದ ಸಾನ್ನಿಧ್ಯ ವಹಿಸಿದ್ದ ನಿರ್ಮಲಾನಂದನಾಥ ಸ್ವಾಮೀಜಿ ಆಶೀರ್ವಚನ ನೀಡಿ, ಸಂಘಟನೆಯ ಹೆಸರಿನಲ್ಲಿ ಮಠಕ್ಕೆ ಮುಕ್ತವಾಗಿ ಬರಲು ಅವಕಾಶ ಇದೆ. ಪ್ರಜ್ಞೆಯಿಂದ ಒಳ್ಳೆಯ ಆಲೋಚನೆ ಒಳ್ಳೆಯ ಆಲೋಚನೆಯಿಂದ ಬದುಕು ವಿಕಾಸವಾಗುತ್ತದೆ ಎಂದರು.
ಆದಿಚುಂಚನಗಿರಿ ಮಹಾಸಂಸ್ಥಾನ ಮಠದ ಪ್ರಧಾನ ಪ್ರಸನ್ನನಾಥ ಸ್ವಾಮೀಜಿ, ಆದಿಚುಂಚನಗಿರಿ ಶಿಕ್ಷಣ ಟ್ರಸ್ಟ್ ನ ಆಡಳಿತಾಧಿಕಾರಿ ಎ.ಟಿ.ಶಿವರಾಮ್, ತುರುವೆಕೆರೆ ಕ್ಷೇತ್ರದ ಮಾಜಿ ಶಾಸಕ ಲಕ್ಷ್ಮೀನಾರಾಯಣ, ಕೆಪಿಎಸ್ಸಿ ಸದಸ್ಯ ಪ್ರಭುದೇವ, ಪುಣ್ಯ ಆಸ್ಪತ್ರೆ ಸ್ತ್ರೀ ರೋಗ ತಜ್ಞೆ ಪುಣ್ಯವತಿ ನಾಗರಾಜ್, ಕ್ರೀಡಾ ಸಾಧಕಿ ಬಿಂದುರಾಣಿ, ರಾಜ್ಯ ಚುಂಚಾದ್ರಿ ಮಹಿಳಾ ಪ್ರತಿಷ್ಠಾನದ ಅಧ್ಯಕ್ಷೆ ಭಾರತಿಶಂಕರ ಉಪಸ್ಥಿತರಿದ್ದರು.
ರಾಜ್ಯದ ವಿವಿಧ ಭಾಗಗಳಿಂದ ಮಹಿಳೆಯರು ಸಮಾವೇಶದಲ್ಲಿ ಪಾಲ್ಗೊಂಡಿದ್ದರು.
ಭೈರವಿ ಪ್ರಶಸ್ತಿ ಪುರಸ್ಕೃತರು ರಾಜ್ಯಮಟ್ಟದ ಚುಂಚಾದ್ರಿ ಮಹಿಳಾ ಸಮಾವೇಶದಲ್ಲಿ ಒಕ್ಕಲಿಗ ಸಮುದಾಯದ ವಿವಿಧ ಕ್ಷೇತ್ರದ ಸಾಧಕಿಯರನ್ನು ಸನ್ಮಾನಿಸಲಾಯಿತು. ಆರೋಗ್ಯ ಕ್ಷೇತ್ರದಲ್ಲಿ ಸತ್ಯಪ್ರಭ ಕೃಷಿ ಕ್ಷೇತ್ರದಲ್ಲಿ ರತ್ನಮ್ಮ ಸಾಂಸ್ಕೃತಿಕ ಕ್ಷೇತ್ರದಿಂದ ನಿರೂಪಕಿ ದಿವ್ಯ ಆಲೂರು ಶಿಕ್ಷಣa ಕ್ಷೇತ್ರದಲ್ಲಿ ಮೇಘವಿ ಹಾಗೂ ಸಮಾಜ ಸೇವೆಗಾಗಿ ದಿವಂಗತ ಮಹದೇವಮ್ಮ ಅವರ ಪರವಾಗಿ ಪುತ್ರಿ ಶುಭ ಅವರಿಗೆ ಭೈರವಿ ಪ್ರಶಸ್ತಿ ನೀಡಿ ಗೌರವಿಸಲಾಯಿತು. ಜಿಲ್ಲಾ ಸಂಘಗಳ ಅಧ್ಯಕ್ಷೆಯರು ನಿರ್ದೇಶಕಿಯರನ್ನು ಸನ್ಮಾನಿಸಲಾಯಿತು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.