ಮಂಡ್ಯ: ಪಿಯುಸಿ ಓದಿ ಗಾರ್ಮೆಂಟ್ ಕಾರ್ಖಾನೆಯಲ್ಲಿ ದುಡಿಯುತ್ತಿದ್ದ ಗೌರಿ ಈಗ ಸ್ವಂತ ಉದ್ಯೋಗದಿಂದ ಬೆಳಕು ಕಂಡಿದ್ದಾರೆ. ನಗರದ ಆಸ್ಪತ್ರೆ ರಸ್ತೆಯಲ್ಲಿ ದಿನಕ್ಕೆ 150 ಎಳನೀರು ಕೊಚ್ಚಿ, ಮಾರಾಟ ಮಾಡುವ ಅವರು ಸ್ವಾಭಿಮಾನದ ಬದುಕು ಕಟ್ಟಿಕೊಂಡಿದ್ದಾರೆ.
ಹನಿಯಂಬಾಡಿ ಗ್ರಾಮದ ಗೌರಿ ಎರಡು ಹೆಣ್ಣುಮಕ್ಕಳ ತಾಯಿ. ಮೂರು ವರ್ಷಕ್ಕೂ ಮೊದಲು ಅವರು ಬೆಳಿಗ್ಗೆ ಗಾರ್ಮೆಂಟ್ ಕಾರ್ಖಾನೆಗೆ ತೆರಳಿದರೆ ರಾತ್ರಿ ಮನೆಗೆ ಮರಳುತ್ತಿದ್ದರು. ಹೀಗಾಗಿ ಮಕ್ಕಳ ಶಿಕ್ಷಣ, ಆರೋಗ್ಯದ ಕಡೆ ಗಮನ ಕೊಡಲು ಸಾಧ್ಯವಾಗುತ್ತಿರಲಿಲ್ಲ. ತಮ್ಮಿಬ್ಬರೂ ಹೆಣ್ಣುಮಕ್ಕಳಿಗೆ ಉತ್ತಮ ಶಿಕ್ಷಣ ಕೊಡಿಸಬೇಕು ಎಂದು ನಿರ್ಧಾರ ಮಾಡಿಕೊಂಡಿದ್ದ ಅವರು ಸ್ವಂತ ಉದ್ಯೋಗ ಮಾಡುವ ಯೋಚನೆಯಲ್ಲಿದ್ದರು.
ಶೈಕ್ಷಣಿಕ ಹಂತದಲ್ಲಿ ಗೌರಿ ಕ್ರೀಡಾಪಟುವಾಗಿದ್ದರು, ಕಬಡ್ಡಿ, ಓಟದಲ್ಲಿ ಸಾಧನೆ ಮಾಡಿದ್ದರು. ಆಲಹಳ್ಳಿ ಅವರ ತವರು ಮನೆ. ಹನಿಯಂಬಾಡಿಯ ಶ್ರೀನಿವಾಸ್ ಅವರ ಕೈಹಿಡಿದ ಅವರು ಸ್ವಂತ ಉದ್ಯೋಗ ಮಾಡಲು ಪತಿಗೂ ಸ್ಫೂರ್ತಿಯಾದರು. ಗಾರೆ ಕೆಲಸ ಮಾಡುತ್ತಿದ್ದ ಶ್ರೀನಿವಾಸ್ ಅವರಲ್ಲೂ ಕನಸುಗಳನ್ನು ಬಿತ್ತಿದರು. ಅದರ ಪರಿಣಾಮವಾಗಿ ಶ್ರೀನಿವಾಸ್– ಗೌರಿ ದಂಪತಿ ಆಸ್ಪತ್ರೆ ರಸ್ತೆಯಲ್ಲಿ ಎಳನೀರು ಮಾರಾಟ ಮಾಡುವ ಸಣ್ಣ ಉದ್ಯೋಗ ಆರಂಭಿಸಿದರು.
ಪತಿ ರೈತರಿಂದ ಎಳನೀರು ಖರಿದಿಸಿ ತಂದುಕೊಟ್ಟರೆ ರಸ್ತೆಯಲ್ಲಿ ಗೌರಿ ಕೊಚ್ಚಿ, ಮಾರಾಟ ಮಾಡುತ್ತಾರೆ. ಯಾವುದೇ ಅಂಜಿಕೆ, ಅಳುಕು ಅವರಲ್ಲಿ ಇಲ್ಲ. ಎಲ್ಲರ ಜೊತೆಗೂ ನಗುನಗುತ್ತಾ ಮಾತನಾಡುವ ಅವರು ಮಚ್ಚು ಹಿಡಿದು ನಿಂತರೆ ಹದವಾಗಿ ಎಳನೀರು ಕೊಚ್ಚಿ ಕೊಡುತ್ತಾರೆ. ಪುರಷರು ಮಾಡುವ ಕೆಲಸವನ್ನು ಗೌರಿಯವರು ಮಾಡುತ್ತಿರುವುದಕ್ಕೆ ಕೆಲವರು ಆಶ್ಚರ್ಯ ವ್ಯಕ್ತಪಡಿಸುತ್ತಾರೆ. ಅವರೊಳಗಿರುವ ಅಂತಃಶಕ್ತಿಯನ್ನು ಕಂಡು ಬರಗಾಗುತ್ತಾರೆ.
ಮಿಮ್ಸ್ ಆಸ್ಪತ್ರೆ ರಸ್ತೆಯಲ್ಲಿ ಬಹುತೇಕ ಗ್ರಾಹಕರು ರೋಗಿಗಳು, ರೋಗಿಗಳ ಸಂಬಂಧಿಕರೇ ಆಗಿರುತ್ತಾರೆ. ತಾಯಿ ಹೃದಯದ ಗೌರಿ ಬಡ ರೋಗಿಗಳಿಗೆ ಎಳನೀರು ಬೆಲೆಯಲ್ಲಿ ರಿಯಾಯಿತಿ ನೀಡುತ್ತಾರೆ. ಸ್ವಂತ ಉದ್ಯೋಗದಿಂದ ಉತ್ತಮ ಜೀವನ ಕಟ್ಟಿಕೊಂಡಿರುವ ಗೌರಿ ಅವರು ತಮ್ಮ ಹಿರಿಯ ಮಗಳನ್ನು ಸೇಂಟ್ ಜೋಸೆಫ್ ಶಾಲೆಯಲ್ಲಿ ಓದಿಸುತ್ತಿದ್ದಾರೆ.
‘ಸ್ವಾಭಿಮಾನದ ಜೀವನದಿಂದ ನನಗೆ ಹೆಮ್ಮೆ ಇದೆ. ಎಳನೀರು ಕೊಚ್ಚುತ್ತಿದ್ದರೆ ಎಷ್ಟೋ ಜನರು ಆಶ್ಚರ್ಯದಿಂದ ನೋಡುತ್ತಾರೆ. ಮಹಿಳೆಗೆ ಆಗದಿರುವ ಯಾವ ಕೆಲಸವೂ ಇಲ್ಲ’ ಎಂದು ಗೌರಿ ಹೇಳಿದರು.
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.