ADVERTISEMENT

ಬಿಕ್‌ಟೆಕ್ ಶೋ–2024 | 4ನೇ ಆವೃತ್ತಿ ಅನಾವರಣ; ಇಎಸ್‌ಡಿಎಂ ಬ್ರ್ಯಾಂಡ್ ಉದ್ಘಾಟನೆ

​ಪ್ರಜಾವಾಣಿ ವಾರ್ತೆ
Published 6 ಆಗಸ್ಟ್ 2024, 14:30 IST
Last Updated 6 ಆಗಸ್ಟ್ 2024, 14:30 IST
ನಗರದಲ್ಲಿ ಮಂಗಳವಾರ ‘ಬಿಕ್‌ಟೆಕ್ ಶೋ-2024’ ಕಾರ್ಯಕ್ರಮದ ನಾಲ್ಕನೇ ಆವೃತ್ತಿ ಅನಾವರಣ ಕಾರ್ಯಕ್ರಮದಲ್ಲಿ ಐಇಎಸ್‌ಎ ಅಧ್ಯಕ್ಷ ವಿ. ವೀರಪ್ಪನ್‌ ಮಾತನಾಡಿದರು. ಸಂಜೀವ ಗುಪ್ತ, ಬಿ.ವಿ. ನಾಯ್ಡು, ಜಿತೇಂದ್ರ ಚಡ್ಡಾ ಹಾಗೂ ಏಕ್‌ರೂಪ್ ಕೌರ್ ಪಾಲ್ಗೊಂಡರು –ಪ್ರಜಾವಾಣಿ ಚಿತ್ರ
ನಗರದಲ್ಲಿ ಮಂಗಳವಾರ ‘ಬಿಕ್‌ಟೆಕ್ ಶೋ-2024’ ಕಾರ್ಯಕ್ರಮದ ನಾಲ್ಕನೇ ಆವೃತ್ತಿ ಅನಾವರಣ ಕಾರ್ಯಕ್ರಮದಲ್ಲಿ ಐಇಎಸ್‌ಎ ಅಧ್ಯಕ್ಷ ವಿ. ವೀರಪ್ಪನ್‌ ಮಾತನಾಡಿದರು. ಸಂಜೀವ ಗುಪ್ತ, ಬಿ.ವಿ. ನಾಯ್ಡು, ಜಿತೇಂದ್ರ ಚಡ್ಡಾ ಹಾಗೂ ಏಕ್‌ರೂಪ್ ಕೌರ್ ಪಾಲ್ಗೊಂಡರು –ಪ್ರಜಾವಾಣಿ ಚಿತ್ರ   

ಮೈಸೂರು: ‘ಸೆಮಿಕಂಡಕ್ಟರ್, ಎಲಿಮೆಂಟ್ ಮ್ಯಾನೇಜ್‌ಮೆಂಟ್ ಸಿಸ್ಟಂ ಸೇರಿದಂತೆ 20ಕ್ಕೂ ಹೆಚ್ಚು ಇಎಸ್‌ಡಿಎಂ ಕಂಪನಿಗಳು ಮೈಸೂರು ಕ್ಲಸ್ಟರ್‌ಗೆ ಸೇರ್ಪಡೆಗೊಳ್ಳುತ್ತಿದ್ದು, ಇದರಿಂದ ₹600 ಕೋಟಿ ಹೊಸ ಹೂಡಿಕೆ ಹರಿದು ಬರುತ್ತಿದೆ’ ಎಂದು ಮಾಹಿತಿ ಮತ್ತು ತಂತ್ರಜ್ಞಾನ ಸಚಿವ ಪ್ರಿಯಾಂಕ್ ಖರ್ಗೆ ತಿಳಿಸಿದ್ದಾರೆ.

ಇಲ್ಲಿನ ಖಾಸಗಿ ಹೋಟೆಲ್‌ನಲ್ಲಿ ಮಂಗಳವಾರ ಮಾಹಿತಿ ಮತ್ತು ತಂತ್ರಜ್ಞಾನ ಇಲಾಖೆ, ಕರ್ನಾಟಕ ಡಿಜಿಟಲ್ ಎಕಾನಮಿ ಮಿಷನ್ (ಕೆಡಿಇಎಂ) ಮತ್ತು ಇಂಡಿಯಾ ಎಲೆಕ್ಟ್ರಾನಿಕ್ಸ್ ಮತ್ತು ಸೆಮಿಕಂಡಕ್ಟರ್ ಅಸೋಸಿಯೇಷನ್ (ಐಇಎಸ್‌ಎ) ಸಹಯೋಗದಲ್ಲಿ ‘ಬಿಕ್‌ಟೆಕ್ ಶೋ-2024’ ಕಾರ್ಯಕ್ರಮದ ನಾಲ್ಕನೇ ಆವೃತ್ತಿ ಅನಾವರಣ ಹಾಗೂ ಕರ್ನಾಟಕ ಇಎಸ್‌ಡಿಎಂ ಬ್ರ್ಯಾಂಡ್ ಉದ್ಘಾಟನೆ ಕಾರ್ಯಕ್ರಮದಲ್ಲಿ ಸಚಿವರ ಅನುಪಸ್ಥಿತಿಯಲ್ಲಿ ಅವರ ಸಂದೇಶವನ್ನು ಓದಲಾಯಿತು.

‘ಮೈಸೂರನ್ನು ಉದ್ಯೋಗಶೀಲ ನಗರವನ್ನಾಗಿ ವರ್ಧಿಸಲು ಮಾಹಿತಿ ತಂತ್ರಜ್ಞಾನ ಇಲಾಖೆ ಯೋಜಿಸಿದೆ. ಸುಮಾರು 150 ಎಕರೆಗಳಷ್ಟು ಜಾಗದಲ್ಲಿ ಪಿಸಿಬಿ ಕ್ಲಸ್ಟರ್ ಸ್ಥಾಪಿಸುವ ಗುರಿ ಹೊಂದಲಾಗಿದೆ. ಅಲ್ಲದೆ ಪ್ರಸ್ತುತ ಇರುವ ಪರೀಕ್ಷಾ ಸೌಲಭ್ಯವನ್ನು ವಿಸ್ತರಿಸಲು, ಮಲ್ಟಿಟೆನೆನ್ಸಿ ಕ್ಲೀನ್ ರೂಮ್ ಸ್ಥಾಪಿಸಲು ತೀರ್ಮಾನಿಸಲಾಗಿದೆ. ಇದರಿಂದ 5 ಸಾವಿರ ಹೊಸ ಉದ್ಯೋಗ ಸೃಷ್ಟಿಯಾಗಿಲಿದೆ. ಅದರಲ್ಲಿಯೂ ಮಹಿಳಾ ಉದ್ಯೋಗಿಗಳಿಗೆ ಅವಕಾಶ ಸಿಗಲಿದೆ. ಈ ಎಲ್ಲ ಬೆಳವಣಿಗೆಯಿಂದ ಜಾಗತಿಕ ಕಂಪನಿಗಳು ಮೈಸೂರಿನಲ್ಲಿ ಬೆಳೆಯಲು ಇದು ಉತ್ತಮ ಸಮಯವಾಗಿದೆ’ ಎಂದು ಸಚಿವರು ತಮ್ಮ ಸಂದೇಶದಲ್ಲಿ ತಿಳಿಸಿದ್ದಾರೆ.

ADVERTISEMENT

ಐಇಎಸ್‌ಎ ಅಧ್ಯಕ್ಷ ವಿ. ವೀರಪ್ಪನ್‌ ಮಾತನಾಡಿ, ‘ಮೈಸೂರಿನಲ್ಲಿ ಉದ್ಯಮ ಸ್ನೇಹಿ ವಾತಾವರಣ ಇದೆ. ಹೀಗಾಗಿ ಇಲ್ಲಿ ಉದ್ಯಮ ಸ್ಥಾಪನೆಗೆ ಸಹಕಾರ ನೀಡಲಾಗುವುದು’ ಎಂದರು.

ಕೆಡಿಇಎಂ ಅಧ್ಯಕ್ಷ ಬಿ.ವಿ. ನಾಯ್ಡು ಮಾತನಾಡಿ, ‘ಮೈಸೂರಿನಲ್ಲಿ 1.6 ಲಕ್ಷ ಚದರಡಿ ವಿಸ್ತೀರ್ಣದಲ್ಲಿ ದಿ ಗ್ಲೋಬಲ್ ಟೆಕ್ನಾಲಜಿ ಕೇಂದ್ರವನ್ನು ಅಭಿವೃದ್ಧಿಪಡಿಸಲಾಗುತ್ತಿದ್ದು, ಈ ವರ್ಷದ ಕೊನೆಗೆ ಕಾರ್ಯಾಚರಣೆ ಮಾಡಲಿದೆ’ ಎಂದು ತಿಳಿಸಿದರು.

ಕೆಡಿಇಎಂ ಸಿಇಒ ಸಂಜೀವ್‌ ಗುಪ್ತ, ಗ್ಲೋಬಲ್ ಪೌಡ್ರಿ ಸಿಸಿಒ ಜಿತೇಂದ್ರ ಚೆಡ್ಡಾ, ರುಚಿ ಬಿಂದಾಲ್, ಪರಿಣಿಕ ಪವನ್ ರಾಮ್, ಕೆಡೆಮ್ ಸಂಸ್ಥೆಯ ಸುಧೀರ್, ಗೌರವ್, ಸಂಜಯ್ ಗುಪ್ತ, ಚೇತನ್ ಇದ್ದರು.

‘ಸೆಮಿಕಾನ್ ತಯಾರಿಕೆಯಲ್ಲಿ ಪ್ರಗತಿ’
ಕಾರ್ಯಕ್ರಮದಲ್ಲಿ ಮಾತನಾಡಿದ ಮಾಹಿತಿ ತಂತ್ರಜ್ಞಾನ ಇಲಾಖೆ ಕಾರ್ಯದರ್ಶಿ ಏಕರೂಪ್‌ ಕೌರ್ ‘ಮೈಸೂರು– ಬೆಂಗಳೂರನ್ನು ಸೆಮಿಕಾನ್ ಹಬ್ ಆಗಿ ಮಾಡುವಲ್ಲಿ ಜಾಗತಿಕ ಹಾಗೂ ಸ್ಥಳೀಯ ಕಂಪನಿಗಳು ಕೈಜೋಡಿಸಿರುವುದು ಉತ್ತಮ ಬೆಳವಣಿಗೆ. ಮೈಸೂರು ಸೆಮಿಕಾನ್ ತಯಾರಿಕೆ ಕ್ಷೇತ್ರದಲ್ಲಿ ಹಾಗೂ ಬೆಂಗಳೂರು ಸೆಮಿಕಾನ್ ವಿನ್ಯಾಸ ಕ್ಷೇತ್ರದಲ್ಲಿ ಜಾಗತಿಕ ಮಟ್ಟದಲ್ಲಿ ಬೆಳೆಯಲಿವೆ’ ಎಂದು ಆಶಿಸಿದರು. ‘ಈಚೆಗೆ ನಡೆದ ಏಲಿವೆಟ್ ಕಾರ್ಯಕ್ರಮವು 923 ಸ್ಟಾರ್ಟಪ್‌ಗಳಿಗೆ ₹223 ಕೋಟಿ ಬಂಡವಾಳ ಹರಿದುಬರಲು ಸಹಾಯ ಮಾಡಿದೆ. ಇದರಲ್ಲಿ 40 ಸ್ಟಾರ್ಟಪ್‌ಗಳು ಮೈಸೂರಿನವಾಗಿವೆ’ ಎಂದು ತಿಳಿಸಿದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.