ADVERTISEMENT

ನನ್ನನ್ನು ಬಿಜೆಪಿಗೆ ಸೇರಿಸಿಕೊಳ್ಳಲು ಹಣ ಕೊಡಲು ಬಂದಿದ್ದ ವಿಜಯೇಂದ್ರ: ವಿಶ್ವನಾಥ್

ನನ್ನನ್ನು ಬಿಜೆಪಿ ಹೆಬ್ಬಾಗಿಲಿಗೆ ಕರೆದುಕೊಂಡು ಬಂದು ಕಡಿದವರೇ ಸಂಸದ ವಿ.ಶ್ರೀನಿವಾಸ ಪ್ರಸಾದ್: ವಿಶ್ವನಾಥ್

​ಪ್ರಜಾವಾಣಿ ವಾರ್ತೆ
Published 15 ಡಿಸೆಂಬರ್ 2022, 9:59 IST
Last Updated 15 ಡಿಸೆಂಬರ್ 2022, 9:59 IST
ಎಚ್‌ ವಿಶ್ವನಾಥ್‌ (ಕಡತ ಚಿತ್ರ)
ಎಚ್‌ ವಿಶ್ವನಾಥ್‌ (ಕಡತ ಚಿತ್ರ)   

ಮೈಸೂರು: ‘ನಾನು ಬಿಜೆಪಿ ಸೇರುವುದಕ್ಕಾಗಿ ಬಿ.ಎಸ್.ಯಡಿಯೂರಪ್ಪ ಅವರ ಪುತ್ರ ಬಿ.ವೈ.ವಿಜಯೇಂದ್ರ ನನಗೆ ದುಡ್ಡು ಕೊಡಲು ಬಂದಿದ್ದರು. ಅವರ ಅಪಾರ್ಟ್‌ಮೆಂಟ್‌ನಲ್ಲೇ ಮಾತುಕತೆ ನಡೆದಿತ್ತು’ ಎಂದು ವಿಧಾನಪರಿಷತ್‌ ಸದಸ್ಯ ಎ.ಎಚ್.ವಿಶ್ವನಾಥ್‌ ಇಲ್ಲಿ ಗುರುವಾರ ತಿಳಿಸಿದರು.

‘ಶೀಘ್ರದಲ್ಲೇ ಹೊರಬರಲಿರುವ ನನ್ನ ‘ಬಾಂಬೆ ಡೇಸ್’ ಪುಸ್ತಕದ ಮೊದಲ ಅಧ್ಯಾಯದಲ್ಲೇ ಇದೆಲ್ಲ ಅಂಶಗಳೂ ಇರಲಿವೆ. ವಿವರಗಳೆಲ್ಲ ಅದರಲ್ಲೇ ಇರಲಿವೆ’ ಎಂದು ಸುದ್ದಿಗೋಷ್ಠಿಯಲ್ಲಿ ತಿಳಿಸಿದರು.

‘ನನ್ನನ್ನು ಬಿಜೆಪಿ ಹೆಬ್ಬಾಗಿಲಿಗೆ ಕರೆದುಕೊಂಡು ಬಂದು ಕಡಿದವರೇ ಸಂಸದ ವಿ.ಶ್ರೀನಿವಾಸ ಪ್ರಸಾದ್. ವಿಜಯೇಂದ್ರನ ಮನೆಯಲ್ಲಿ ಮಾತುಕತೆ ನಡೆದಿತ್ತು. ಬಿ.ಎಸ್.ಯಡಿಯೂರಪ್ಪ, ರಮೇಶ ಜಾರಕಿಹೊಳಿ, ವಿಜಯೇಂದ್ರ ಇದ್ದರು. ಯಡಿಯೂರಪ್ಪ ಅವರನ್ನು ಮುಖ್ಯಮಂತ್ರಿ ಮಾಡುವುದಕ್ಕಾಗಿ ನೀವು ಬಿಜೆಪಿಗೆ ಬರಬೇಕು ಎಂದು ನನ್ನನ್ನು ಕರೆದಿದ್ದರು. ಆ ಸ್ನೇಹಕ್ಕೆ ಕಟ್ಟುಬಿದ್ದು ಬಂದೆ’ ಎಂದು ಹೇಳಿದರು.

ADVERTISEMENT

‘‌ಶ್ರೀನಿವಾಸಪ್ರಸಾದ್ ಹಾಗೂ ಯಡಿಯೂರಪ್ಪ ನನ್ನ ಕೈಬಿಟ್ಟರು. ನಾನು ಸಚಿವನಾಗಲು ಯಾರೂ ಸಹಕಾರ ಕೊಡಲಿಲ್ಲ. ವಿಧಾನಪರಿಷತ್‌ ಸದಸ್ಯ ಸ್ಥಾನ ಸಿಗುವುದಕ್ಕೂ ಅವರಾರೂ ಕಾರಣವಾಗಲಿಲ್ಲ. ಸಹಾಯವನ್ನೂ ಮಾಡಲಿಲ್ಲ. ನನ್ನನ್ನು ವಿಧಾನಪರಿಷತ್‌ ಸದಸ್ಯರನ್ನಾಗಿ ಮಾಡಿದವರು ಆರ್‌ಎಸ್‌ಎಸ್ ರಾಜ್ಯ ಪ್ರಮುಖ ಮುಕುಂದ. ಅವರಿಲ್ಲದಿದ್ದರೆ ನನಗೆ ಮೋಸವಾಗುತ್ತಿತ್ತು’ ಎಂದು ಪ್ರತಿಕ್ರಿಯಿಸಿದರು.

‘ಎಐಸಿಸಿ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ, ವಿಧಾನಸಭೆಯ ವಿರೋಧಪಕ್ಷದ ನಾಯಕ ಸಿದ್ದರಾಮಯ್ಯ, ಕೆಪಿಸಿಸಿ ಅಧ್ಯಕ್ಷ ಡಿ.ಕೆ.ಶಿವಕುಮಾರ್ ಅವರನ್ನು ಸೌಹಾರ್ದದಿಂದ ಭೇಟಿಯಾಗಿದ್ದೇನಷ್ಟೆ. ಅದೇನು ಘೋರ ಅಪರಾಧವೇ? ರಾಜಕೀಯ ‌ಸಹಿಷ್ಣುತೆ ಯಾಕಿರಬಾರದು? ನಾನೀಗ ಸಂಪೂರ್ಣವಾಗಿ, ಮಾನಸಿಕವಾಗಿ ‌ಬಿಜೆಪಿಯಲ್ಲಿದ್ದೇನೆ. ಚುನಾವಣೆಯ ಯೋಚನೆಯಲ್ಲಿಲ್ಲ. ನಾನು ಅವಕಾಶವಾದಿ ರಾಜಕಾರಣಿಯಲ್ಲ’ ಎಂದು ಹೇಳಿದರು.

ಇವನ್ನೂ ಓದಿ...

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.