ಮೈಸೂರು: ‘ನನ್ನ ಧ್ವನಿಯನ್ನು ಅಡಗಿಸಲು ಸಾಧ್ಯವಿಲ್ಲ. ನಾನು ಧ್ವನಿ ಎತ್ತದಿದ್ದರೆ ಸತ್ತು ಹೋಗುತ್ತೇನೆ’.
– ಹೀಗೆಂದವರು ಚಲನಚಿತ್ರ ನಟ ಪ್ರಕಾಶ್ ರಾಜ್.
ಮೈಸೂರು ಜಿಲ್ಲಾ ಪತ್ರಕರ್ತರ ಸಂಘ ಭಾನುವಾರ ಏರ್ಪಡಿಸಿದ್ದ ಸಂವಾದ ಕಾರ್ಯಕ್ರಮದಲ್ಲಿ ಮಾತನಾಡಿದ ಅವರು, ‘ಸಮಾಜದಲ್ಲಿ ಪ್ರಶ್ನಿಸುವುದು ಎಲ್ಲರ ಹೊಣೆ. ಅದು ನಮ್ಮ ಹಕ್ಕು ಕೂಡ. ಅದನ್ನು ತಪ್ಪು ಎನ್ನುವುದು ಸರಿಯಲ್ಲ. ನಾನು ಪ್ರಶ್ನಿಸಿದ ವಿಚಾರಕ್ಕೆ ನೀವು ಉತ್ತರಿಸಿ, ಕೇಳಿದ್ದು ತಪ್ಪಾಗಿದ್ದಲ್ಲಿ ಸರಿಪಡಿಸಿ’ ಎಂದು ಸರ್ಕಾರಕ್ಕೆ ಚಾಟಿ ಬೀಸಿದರು.
‘ಸಾಮಾಜಿಕ ಜಾಲತಾಣದಲ್ಲಿ ‘ಜಸ್ಟ್ ಆಸ್ಕಿಂಗ್’ ಮೂಲಕ ಪ್ರಶ್ನಿಸುತ್ತಲೇ ಇರುತ್ತೇನೆ. ಹೋರಾಟವೆಂದರೆ ಬೀದಿಗಿಳಿಯುವುದಷ್ಟೇ ಅಲ್ಲ. ಹಿಂದೆ ನಿಂತು ಮಾಡಬೇಕಾದ ಕೆಲಸಗಳು ಸಾಕಷ್ಟಿರುತ್ತವೆ. ಅದನ್ನು ಮಾಡುತ್ತಲೇ ಇರುತ್ತೇನೆ ಎಂದು ಪ್ರತಿಕ್ರಿಯಿಸಿದರು.
‘ಕೆಲ ವರ್ಷಗಳಿಂದೀಚೆಗೆ ಜನರೇ ಪ್ರಶ್ನಿಸುತ್ತಿದ್ದಾರೆ. ಇದು ಒಳ್ಳೆಯ ಬೆಳವಣಿಗೆ. ಜನರು ಸೂಕ್ಷ್ಮಮತಿಗಳಾಗಿ ಇನ್ನೂ ಹೆಚ್ಚು ಪ್ರಶ್ನಿಸಬಹುದು ಎನ್ನುವುದು ಆಳುವವರಿಗೆ ಗೊತ್ತಾದಾಕ್ಷಣ ಸಾಂಸ್ಕೃತಿಕ ಸಂಸ್ಥೆಗಳಿಗೆ ಅನುದಾನ ಕಡಿತಗೊಳಿಸುವ ಕೆಲಸಗಳಾಗುತ್ತಿವೆ. ಇದಕ್ಕೆ ಜನರೇ ಸರಿಯಾದ ಉತ್ತರ ಕೊಡಲಿದ್ದಾರೆ’ ಎನ್ನುವ ಮೂಲಕ ರಂಗಾಯಣಕ್ಕೆ ಅನುದಾನ ಕಡಿತಗೊಳಿಸಿದ್ದಕ್ಕೆ ಅಸಮಾಧಾನ ಹೊರಹಾಕಿದರು.
ಹಿಂದಿ ರಾಷ್ಟ್ರಭಾಷೆ ಅಲ್ಲ
‘ಹಿಂದಿ ರಾಷ್ಟ್ರ ಭಾಷೆ ಅಲ್ಲ. ಅದು ರಾಷ್ಟ್ರ ಭಾಷೆ ಎನ್ನುವುದಕ್ಕೆ ಆಧಾರ ಇದೆಯೇ?’ ಎಂದು ಕೇಳಿದರು.
‘ನಾನು ಯಾವುದೇ ಭಾಷೆ–ಊರಿಗೆ ಸೀಮಿತನಾಗಿಲ್ಲ. ನಟನಾಗಿ, ಒಳ್ಳೆಯ ನಟ ಎಂದು ನಿತ್ಯವೂ ಸಾಬೀತುಪಡಿಸಬೇಕಾದ ಅಗತ್ಯ ಹಿಂದಿಗಿಂಗಲೂ ಈಗ ಹೆಚ್ಚಿದೆ. ಕಲಾವಿದರ ರಾಜಕೀಯ, ವೈಯಕ್ತಿಕ ನಿಲುವು ಆಧರಿಸಿ ‘ಸಿನಿಮಾ ನಿಷೇಧಿಸಿ’ ಅಭಿಯಾನಗಳು ಹೆಚ್ಚುತ್ತಿವೆ. ಇದು ಕಲಾವಿದನ ಅನ್ನ ಕಸಿಯುವ ಪ್ರಯತ್ನ ಮತ್ತು ಅನಾರೋಗ್ಯಕರ ಬೆಳವಣಿಗೆ. ಇಂಥದ್ದಕ್ಕೆ ನಾನು ಹೆದರುವುದಿಲ್ಲ’ ಎಂದು ಹೇಳಿದರು.
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.