ಮೈಸೂರು: ‘ದಸರಾ ಉದ್ಘಾಟನೆಯಿಂದ ಸಾಹಿತಿ ಬಾನು ಮುಷ್ತಾಕ್ ಹಿಂದೆ ಸರಿಯಲಿ’ ಎಂದು ಶಾಸಕ ಬಸನಗೌಡ ಪಾಟೀಲ ಯತ್ನಾಳ ಹೇಳಿದರು.
ಇಲ್ಲಿನ ಚಾಮುಂಡಿ ಬೆಟ್ಟದ ಚಾಮುಂಡೇಶ್ವರಿ ದೇವಸ್ಥಾನದಲ್ಲಿ ಶುಕ್ರವಾರ ವಿಶೇಷ ಪೂಜೆ ಸಲ್ಲಿಸಿದ ನಂತರ ಮಾಧ್ಯಮ ಪ್ರತಿನಿಧಿಗಳೊಂದಿಗೆ ಅವರು ಮಾತನಾಡಿದರು.
‘ಇಸ್ಲಾಂ ಪ್ರಕಾರ, ಮೂರ್ತಿ ಪೂಜೆ ಮಾಡುವವರು ಕಾಫೀರರು. ಅಂಥವರನ್ನು ಕೊಲ್ಲಿ ಎಂದು ಇಸ್ಲಾಂ ಹೇಳುತ್ತದೆ. ಈಗ ಬಾನು ಮುಷ್ತಾಕ್ ಚಾಮುಂಡೇಶ್ವರಿ ಮೂರ್ತಿಗೆ ಪುಷ್ಪಾರ್ಚನೆ ಮಾಡಲು ಮುಂದಾಗಿದ್ದಾರೆ. ಮೌಲ್ವಿಗಳು ಈ ಬಗ್ಗೆ ಮಾತನಾಡಬೇಕು. ಮೂರ್ತಿ ಪೂಜೆಗೆ ಬರುತ್ತಿರುವ ಬಾನು ವಿರುದ್ಧ ಏನು ಕ್ರಮ ಕೈಗೊಳ್ಳಲಾಗುತ್ತದೆ ಎಂಬುದನ್ನು ಮೌಲ್ವಿಗಳು ತಿಳಿಸಬೇಕು. ಇಲ್ಲವೇ, ಬಾನು ನಾನೀಗ ಮುಸ್ಲಿಂ ಧರ್ಮದಲ್ಲಿಲ್ಲ (ಎಕ್ಸ್ ಮುಸ್ಲಿಂ) ಎಂದಾದರೂ ಘೋಷಿಸಿಕೊಳ್ಳಬೇಕು. ಇಸ್ಲಾಂ ಬಗ್ಗೆ ನನಗೆ ನಂಬಿಕೆ ಇಲ್ಲವೆಂದು ತಿಳಿಸಿ ಉದ್ಘಾಟಿಸಲಿ. ಇಲ್ಲವೇ, ಸಾಂಸ್ಕೃತಿಕ ಕಾರ್ಯಕ್ರಮಗಳನ್ನು ಮಾತ್ರವೇ ಉದ್ಘಾಟಿಸಲಿ’ ಎಂದು ಒತ್ತಾಯಿಸಿದರು.
‘ಸಿದ್ದರಾಮಯ್ಯ ನೇತೃತ್ವದ ಸರ್ಕಾರದಲ್ಲಿ ಭ್ರಷ್ಟಾಚಾರ ಮುಗಿಲು ಮುಟ್ಟಿದೆ. ನೇಪಾಳದ ಪರಿಸ್ಥಿತಿ ಇಲ್ಲೂ ಬರಲಿದ್ದು, ಜನರಿಂದ ಕ್ರಾಂತಿ ಆಗಲಿದೆ. ಸಿದ್ದರಾಮಯ್ಯ ಇದೇ ದೋರಣೆ ಮುಂದುವರಿಸಿದರೆ ಸರ್ಕಾರ ಪತನವಾಗಲಿದೆ’ ಎಂದು ಹೇಳಿದರು.
‘ಬಿಜೆಪಿಯ ಕೆಲವರು ಕಾಂಗ್ರೆಸ್ ನಾಯಕರ ಜೊತೆ ಸೇರಿಕೊಂಡಿದ್ದಾರೆ. ಹೀಗಾಗಿ ರಾಜ್ಯದಲ್ಲಿ ಪಕ್ಷದ ರಿಪೇರಿ ಅಗತ್ಯವಿದೆ’ ಎಂದರು.
‘ನನ್ನನ್ನು ಪಕ್ಷದಿಂದ ತೆಗೆದಿದ್ದಕ್ಕೆ ಹೈಕಮಾಂಡ್ಗೆ ತಪ್ಪಿನ ಅರಿವಾಗಿದೆ. ಕೇಂದ್ರ ಗೃಹ ಸಚಿವ ಅಮಿತ್ ಶಾ ಅವರೇ ಈ ಬಗ್ಗೆ ಮಾತನಾಡಿದ್ದಾರೆ. ನಾವು ತಪ್ಪು ಮಾಡಿದೆವು ಎಂದು ಹೇಳಿಕೊಂಡಿದ್ದಾರೆ. ಅಪ್ಪ– ಮಕ್ಕಳ ಬ್ಲಾಕ್ಮೇಲ್ ತಂತ್ರದ ಕಾರಣದಿಂದ ನನ್ನನ್ನು ಉಚ್ಚಾಟಿಸಲಾಯಿತು. ಇದರಿಂದಾಗಿ ನನಗೆ ರಾಜ್ಯದಾದ್ಯಂತ ಉತ್ತಮ ಬೆಂಬಲ ವ್ಯಕ್ತವಾಗುತ್ತಿದೆ. ನಾನು ಹೈಕಮಾಂಡ್ ಭೇಟಿ ಮಾಡುವುದಿಲ್ಲ’ ಎಂದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.