
ಮೈಸೂರು: ಜಿಲ್ಲೆಯಾದ್ಯಂತ ದೀಪಾವಳಿ (ಬಲಿಪಾಡ್ಯಮಿ) ಹಬ್ಬವನ್ನು ಜನರು ಬುಧವಾರ ಸಂಭ್ರಮದಿಂದ ಆಚರಿಸಿದರು.
ಮಳಿಗೆಗಳು, ಅಂಗಡಿಗಳು, ಹೋಟೆಲ್ಗಳು, ಕಾರ್ಖಾನೆಗಳು ಹಾಗೂ ಮನೆಗಳಲ್ಲಿ ಲಕ್ಷ್ಮಿಪೂಜೆ ನೆರವೇರಿಸಿದ ಜನರು ಸಿಹಿ ಖಾದ್ಯ ತಯಾರಿಸಿ ಸವಿದರು. ಸಂಜೆಯಾಗುತ್ತಿದ್ದಂತೆ ಮನೆಯಂಗಳದಲ್ಲಿ ಹಣತೆಗಳನ್ನು ಸಾಲಾಗಿ ಹಚ್ಚಿದರು.
ದಿನವಿಡೀ ಮಳೆ: ಇಡೀ ಮಳೆ ಸುರಿದ ಕಾರಣ ಚಳಿಯ ವಾತಾವರಣವಿತ್ತು. ರಾತ್ರಿ 9 ಗಂಟೆ ಮೇಲೆ ಮಳೆ ಬಿಡುವು ನೀಡಿದ್ದರಿಂದ ಚಿಣ್ಣರು, ಯುವಕರು ವಿವಿಧ ಬಗೆಯ ಪಟಾಕಿಗಳನ್ನು ಹಚ್ಚಿ ಬೆಳಕಿನ ಚಿತ್ತಾರ ಮೂಡಿಸಿದರು. ಮಧ್ಯರಾತ್ರಿ ವರೆಗೂ ಪಟಾಕಿಗಳ ಸದ್ದು ಜೋರಾಗಿತ್ತು. ಆಕಾಶ ಬುಟ್ಟಿಗಳನ್ನು ಬಿಟ್ಟ ಮಕ್ಕಳು ಸಂತಸ ಪಟ್ಟರು.
ಗ್ರಾಮೀಣ ಪ್ರದೇಶದ ಅಲ್ಲಲ್ಲಿ ರಾಸುಗಳಿಗೆ ಕಿಚ್ಚು ಹಾಯಿಸಲಾಯಿತು. ಬಣ್ಣದ ಬಲೂನು, ಬಣ್ಣಗಳಿಂದ ರಾಸುಗಳನ್ನು ಅಲಂಕರಿಸಲಾಗಿತ್ತು. ಎತ್ತಿನಗಾಡಿ ಸ್ಪರ್ಧೆಗಳೂ ನಡೆದವು.
ಚಾಮುಂಡಿ ಬೆಟ್ಟದ ದೇಗುಲದಲ್ಲಿ ಸಂಜೆ ಅರ್ಚಕ ಶಶಿಶೇಖರ್ ದೀಕ್ಷಿತ್ ನೇತೃತ್ವದಲ್ಲಿ ಪೂಜಾ ಕೈಂಕರ್ಯ ಆರಂಭವಾಯಿತು. ದರ್ಶನಕ್ಕೆ ಅಪಾರ ಸಂಖ್ಯೆಯಲ್ಲಿ ಭಕ್ತಾದಿಗಳು ಬಂದಿದ್ದರು. ಹೂವಿನಿಂದ ಗೋವನ್ನು ಅಲಂಕರಿಸಲಾಗಿತ್ತು. ಅಕ್ಕಿ, ಬೆಲ್ಲ, ಹಣ್ಣು, ಸಿಹಿ ತಿಂಡಿಯನ್ನು ಗೋವಿಗೆ ತಿನಿಸಲಾಯಿತು.
ನಂಜನಗೂಡಿನ ನಂಜುಂಡೇಶ್ವರ, ತಲಕಾಡಿನ ವೈದ್ಯನಾಥೇಶ್ವರ, ಮುಡುಕುತೊರೆ ಮಲ್ಲಿಕಾರ್ಜುನ ಸ್ವಾಮಿ ದೇವಾಲಯ ಸೇರಿದಂತೆ ಮುಜರಾಯಿ ಇಲಾಖೆ ವ್ಯಾಪ್ತಿಯ ದೇಗುಲಗಳಲ್ಲಿಯೂ ವಿಶೇಷ ಪೂಜೆ ನಡೆಯಿತು.
11 ಮಂದಿಗೆ ಗಾಯ: ಮೂರು ದಿನಗಳ ದೀಪಾವಳಿ ಹಬ್ಬದಲ್ಲಿ ಪಟಾಕಿ ಸಿಡಿತದಿಂದ 11 ಮಂದಿ ಗಾಯಗೊಂಡಿದ್ದಾರೆ. ಅವರಲ್ಲಿ 6 ಮಂದಿ ತೀವ್ರವಾಗಿ ಗಾಯಗೊಂಡಿದ್ದು, ಕೆ.ಆರ್.ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ.
ಗಾಯಗೊಳ್ಳುವವರ ಚಿಕಿತ್ಸೆಗೆ ಆಸ್ಪತ್ರೆಯ ಕಣ್ಣಿನ ವಿಭಾಗದಲ್ಲಿ ವಿಶೇಷ ಚಿಕಿತ್ಸಾ ಘಟಕ ತೆರೆಯಲಾಗಿತ್ತು. ಕೆಲವರಿಗೆ ಸುಟ್ಟ ಗಾಯಗಳಾಗಿದ್ದು, ಸ್ಥಳೀಯ ಖಾಸಗಿ ಆಸ್ಪತ್ರೆಗಳಲ್ಲಿ ಚಿಕಿತ್ಸೆ ಪಡೆದು ವಾಪಸಾಗಿದ್ದಾರೆ.
ಹೊಗೆ: ದೀಪಾವಳಿ ಹಬ್ಬದ ಕಡೇ ದಿನ ಮಧ್ಯರಾತ್ರಿ ವರೆಗೂ ಎಲ್ಲ ಪಟಾಕಿಗಳನ್ನು ಹೊಡೆದ ಕಾರಣ ನಗರವು ಹೊಗೆಯಿಂದ ಆವರಿಸಿತ್ತು. ಮುಂಜಾನೆಯ ಮಂಜು ಮುಸುಕಿದಂತೆ ನಾಗರಿಕರಿಗೆ ಭಾಸವಾಯ್ತು. ಹಳ್ಳದ ಭಾಗವಿದ್ದ ಭಾಗಗಳಲ್ಲಿ ಹೊಗೆಯು ತುಂಬಿತ್ತು.
ಹೊಗೆಯಿಂದ ತುಂಬಿದ್ದ ಕುವೆಂಪುನಗರದ ವಿಶ್ವಮಾನವ ಜೋಡಿರಸ್ತೆ
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.