
ನಗರ ಬೆಳೆಯುತ್ತಾ ಹೋದಂತೆಲ್ಲಾ ಹಸಿರು ಹಾಗೂ ಆಟದ ಮೈದಾನಗಳು ಮಾಯವಾಗುತ್ತಿವೆ. ಮಕ್ಕಳಿಗೆ ಮನೆ ಬಿಟ್ಟರೆ ಆಟ ಆಡಲು ಜಾಗವೇ ಇರುವುದಿಲ್ಲ. ಹಿರಿಯರು, ಮಹಿಳೆಯರು ಸೇರಿದಂತೆ ಎಲ್ಲ ವಯೋಮಾನದವರಿಗೆ ಬೆಳಗಿನ ಹಾಗೂ ಸಂಜೆಯ ವೇಳೆಯ ವಾಕಿಂಗ್, ವ್ಯಾಯಾಮ ಮತ್ತು ವಿಶ್ರಾಂತಿಗೆ ಸ್ವಲ್ಪ ಮಟ್ಟಿಗಾದರೂ ಅನುಕೂಲವಾಗಿರುವ ಉದ್ಯಾನಗಳು ಈಗ ಸಂಜೆಯಾಗುತ್ತಿದ್ದಂತೆ ಪುಂಡ–ಪೋಕರಿಗಳ ಹಾವಳಿ, ಪಾರ್ಟಿಗಳಿಗೆ ತಾಣವಾಗುತ್ತಿವೆ. ಇದು ಬೆಳಗಿನಜಾವದ ವಾಕಿಂಗ್ ಪ್ರಿಯರಿಗೆ ಕಿರಿಕಿರಿಯನ್ನು ಉಂಟು ಮಾಡುತ್ತಿವೆ.
ಬೆಳಗಿನ ಜಾವ ಆಹ್ಲಾದಕರ ವಾತಾವರಣ ಇರುತ್ತದೆ ಎಂದು ಉದ್ಯಾನಕ್ಕೆ ಬಂದವರಿಗೆ ಕಲ್ಲಿನ ಬೆಂಚ್ ಪಕ್ಕದಲ್ಲಿ ಬೀರ್ ಮತ್ತು ಮದ್ಯದ ಬಾಟಲಿಗಳು, ಊಟ ಮಾಡಿ ಬೀಸಾಕಿದ ತಟ್ಟೆಗಳು ಅಲ್ಲಲ್ಲಿ ಕಾಣುತ್ತಿವೆ. ಜೊತೆಗೆ ಹಳಸಿದ ಆಹಾರದ ವಾಸನೆ ಕೂಡಾ ಮೂಗಿಗೆ ರಾಚುತ್ತದೆ. ಕೆಲಹೊತ್ತು ವಾಕಿಂಗ್ ಮಾಡಿ ಉದ್ಯಾನದಲ್ಲಿ ವಿಶ್ರಾಂತಿ ಸ್ಥಳದಲ್ಲಿ ಕೂಡಲು, ವ್ಯಾಯಾಮ ಮಾಡಲು ಬಂದರೇ ಅಲ್ಲಿಯೂ ಇದೇ ಹಾಡು. ಕುಡುಕರು ಕುಡಿದು ತಿಂದು ಉಳಿದಿದ್ದನ್ನು ಅಲ್ಲಿಯೇ ಬಿಟ್ಟು ಹೋಗಿರುತ್ತಾರೆ. ಅವುಗಳನ್ನು ತಿನ್ನಲು ಬೀದಿ ನಾಯಿಗಳು ಪ್ಲಾಸ್ಟಿಕ್ ಕವರ್ ಅನ್ನು ಜಗ್ಗಾಡಿ ಮತ್ತಷ್ಟು ಗಲೀಜು ಮಾಡಿರುತ್ತವೆ. ಇಂಥ ದೃಶ್ಯಗಳು ಮೈಸೂರು ನಗರದ ಹೃದಯಭಾಗವಾದ ನ್ಯಾಯಾಲಯದ ಎದುರಿಗಿರುವ ಮನುವನ ಪಾರ್ಕ್ನಲ್ಲಿ ಆಗಾಗ ಕಾಣುತ್ತಿವೆ.
‘ಯುವಕರ ಗುಂಪು ಪಾರ್ಟಿ ಮಾಡುತ್ತಿದ್ದರು ಎಂಬುದಕ್ಕೆ ಬೆಳಿಗ್ಗೆ ವಾಕಿಂಗ್ ಬಂದಾಗ ಬಿದ್ದಿರುತ್ತಿದ್ದ ಬಾಟಲಿಗಳಿಂದ ಎದ್ದು ಕಾಣುತ್ತಿತ್ತು. ಹದಿನೈದು ದಿನಗಳಿಂದ ಮಳೆಯಾಗುತ್ತಿರುವುದರಿಂದ ಓಪನ್ ಪಾರ್ಟಿ ತಪ್ಪಿವೆ. ಆದರೆ, ಸಂಜೆ ನಂತರ ಮಳೆ ಬಾರದಿದ್ದಾಗ ನಾಲ್ಕಾರು ಗುಂಪು ಸೇರುತ್ತಿರುತ್ತವೆ’ ಎನ್ನುತ್ತಾರೆ ಹಲವರು.
‘ವಾಣಿವಿಲಾಸ ರಸ್ತೆಯಲ್ಲಿ ಎರಡೂ ಬದಿಗಿರುವ ಈ ಜೋಡಿ ಉದ್ಯಾನದಲ್ಲಿ ಸಾಕಷ್ಟು ಹಸಿರಿದೆ, ವಾಕಿಂಗ್ ಪಾತ್ ಇದೆ. ಆರಾಮವಾಗಿ ಕೂಡ್ರಲು ಹುಲ್ಲಿನ ಹಾಸಿಗೆ, ಬೆಂಚ್ಗಳು ಇವೆ. ಸಂಜೆಯ ಹೊತ್ತು ಮೊಮ್ಮಕ್ಕಳನ್ನು ಕರೆದುಕೊಂಡು ಬಂದರೆ ಅವರು ಖುಷಿಯಾಗಿ ಆಟವಾಡಿದರೆ, ಅವರನ್ನು ನೋಡಿ ನಮಗೂ ಆನಂದವಾಗುತ್ತದೆ. ಅಲ್ಲದೇ ಟೈಮ್ ಪಾಸ್ ಆಗುತ್ತದೆ. ಆದರೆ, ಬೆಳಿಗ್ಗೆ ಬಂದಾಗ ಸೂರ್ಯದೇವನ ದರ್ಶನಕ್ಕೂ ಮೊದಲೇ ಬಾಟಲಿ ಕಾಣುತ್ತಿವೆ. ಹಾಗಾಗಿ ಸ್ವಲ್ಪ ತಡವಾಗಿ ಇಲ್ಲಿಗೆ ಬಂದು ವಾಕಿಂಗ್ ಮಾಡುತ್ತೇವೆ’ ಎನ್ನುತ್ತಾರೆ ಹಿರಿಯರಾದ ಶ್ರೀನಿವಾಸ್ ಮತ್ತು ಮನೋಹರ್.
ಇಲ್ಲಿ ಆಡಲು, ವಾಕಿಂಗ್ ಬಂದವರನ್ನು ರಾತ್ರಿ 8 ಗಂಟೆಗೆ ವಾಚ್ಮನ್ ಸೀಟಿ ಹೊಡೆದು ವಾಪಸ್ ಕಳಿಸುತ್ತಾರೆ. ಆದರೆ, ಆ ನಂತರ ಒಂದೊಂದೇ ಗುಂಪುಗಳು ಇಲ್ಲಿ ಬಂದು ಸೇರುತ್ತವೆ. ಅಂಥವರನ್ನು ಪೊಲೀಸರು ನಿಯಂತ್ರಿಬೇಕು, ಹಾಗೂ ಗೇಟ್ ಹಾಕಿದ ಮೇಲೆ ಪಾರ್ಕ್ ಒಳಗೆ ಬರದಂತೆ ಎತ್ತರದ ಗ್ರೀಲ್ ಅಥವಾ ತಂತಿ ಬೇಲಿ ಹಾಕಬೇಕು. ರಾತ್ರಿ ಪಾರ್ಟಿಗೆ ಕುಳಿತಾಗ ಪೊಲೀಸರು ಹಿಡಿದು, ಶಿಕ್ಷೆ, ದಂಡ ವಿಧಿಸಿದರೆ ಪಾರ್ಕ್ಗಳಲ್ಲಿನ ಕುಡುಕರ ಹಾವಳಿ ತಪ್ಪಿಸಬಹುದು. ಇದರೊಂದಿಗೆ ಜನರ ಸಹಭಾಗಿತ್ವದೊಂದಿಗೆ ಉದ್ಯಾನ ಸ್ವಚ್ಛತೆ ಕಾರ್ಯ ನಡೆಯಬೇಕು, ಬರೀ ಜಾಗೃತಿ ಮೂಡಿಸಿದರೆ ಪ್ರಯೋಜನವಿಲ್ಲ ಎನ್ನುತ್ತಾರೆ ಹಿರಿಯ ವಕೀಲ ಅಂಬಳಿ ಶಿವಾನಂದಸ್ವಾಮಿ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.