
ಮೈಸೂರು: ಸಫಾರಿ ಆರಂಭಿಸಲು ಅನುಮತಿ ನೀಡಿರುವುದನ್ನು ಖಂಡಿಸಿ ಕರ್ನಾಟಕ ರಾಜ್ಯ ಕಬ್ಬು ಬೆಳೆಗಾರರ ಸಂಘದ ಮುಖಂಡರು ಅರಣ್ಯ ಭವನಕ್ಕೆ ಮುತ್ತಿಗೆ ಹಾಕಲು ಯತ್ನಿಸಿದರು.
'ಬೇಡ ಬೇಡ ಸಫಾರಿ ಬೇಡ', 'ಬೇಕೆ ಬೇಕು ನ್ಯಾಯ ಬೇಕು' 'ಸಫಾರಿ ಆರಂಭಿಸಿರುವ ಸರ್ಕಾರಕ್ಕೆ ದಿಕ್ಕಾರ' ಎಂದು ಘೋಷಣೆ ಕೂಗಿ ಆಕ್ರೋಶ ವ್ಯಕ್ತಪಡಿಸಿದರು.
'ಅರಣ್ಯ ಸಚಿವರು ಹಂತ- ಹಂತವಾಗಿ ಸಫಾರಿ ಆರಂಭಿಸುತ್ತೇವೆ ಎಂದು ಹೇಳಿಕೆ ನೀಡಿದ್ದಾರೆ. ರಾಜಕಾರಣಿಗಳ ಮಕ್ಕಳು ಬೆಳಿಗ್ಗೆ ಕಾಡು ನೋಡಿ ಮಜಾ ಮಾಡಿ ಮನೆಯಲ್ಲಿ ಆರಾಮವಾಗಿ ಮಲಗುತ್ತಾರೆ. ಆದರೆ ಅನ್ನ ನೀಡುವ ರೈತ ಕಾಡಂಚಿನಲ್ಲಿ ಬೆಳಿಗ್ಗೆ ವ್ಯವಸಾಯ ಮಾಡಿ, ರಾತ್ರಿ ಫಸಲು ಕಾದು ಕಾಡುಪ್ರಾಣಿಗಳಿಗೆ ಬಲಿಯಾಗುತ್ತಿದ್ದಾರೆ. ಸಫಾರಿಯಿಂದ ಯಾರಿಗೂ ಲಾಭವಿಲ್ಲ. ದೇವಸ್ಥಾನದ ಪೂಜೆಗೆ ಕಾಡಿಗೆ ಹೋಗಲು ಅವಕಾಶವಿಲ್ಲ. ಆದರೆ ಮದ್ಯ, ಡಿಜೆ ಹಾಕುವವರಿಗೆ ಅವಕಾಶ ನೀಡುತ್ತಿರುವುದು ಖಂಡನೀಯ' ಎಂದರು.
'ರೈತರು ಭಿಕ್ಷೆ ಬೇಡಿ ನೂರು ಕೋಟಿ ಕೊಡುತ್ತೇವೆ ನೀವು ಕುಟುಂಬ ಸಮೇತರಾಗಿ ಬಂದು ಬದುಕಿತ್ತೀರೇ. ಮೈಸೂರು, ಚಾಮರಾಜನಗರ ಜಿಲ್ಲಾ ಉಸ್ತುವಾರಿ ಸಚಿವರು ಯಾಕೆ ಮಾತನಾಡುತ್ತಿಲ್ಲ. ಸಫಾರಿ ನಿಂತ ಬಳಿಕ ಕಾಡು ಪ್ರಾಣಿಗಳ ಹಾವಳಿ ನಿಂತಿದೆ. ಹೀಗಾಗಿ ತಕ್ಷಣವೇ ಸಫಾರಿ ನಿಲ್ಲಿಸಬೇಕು' ಎಂದು ಒತ್ತಾಯಿಸಿದರು.
'ಸಫಾರಿಯಿಂದ ಸಾಕಷ್ಟು ಅನ್ಯಾಯವಾಗುತ್ತಿದೆ. ಬಂಡವಾಳಶಾಹಿ ಒತ್ತಡಕ್ಕೆ ಬಲಿಯಾಗಿ ರೆಸಾರ್ಟ್ ಮಾಡುತ್ತಿರುವ ಗುಲಾಮಗಿರಿಗೆ ಒಲಗಾಗಿ ಸಫಾರಿ ಆರಂಭಿಸುತ್ತಿದ್ದಾರೆ. ಸಫಾರಿಯಿಂದ ಕಾಡು ಪ್ರಾಣಿಗಳು ನಾಡಿಗೆ ಬರುತ್ತಿದ್ದು, ರೈತರನ್ನು ಬಲಿ ಪಡೆಯುತ್ತಿದೆ. ಹೆಣ್ಣು ಮಕ್ಕಳು ವಿಧವೆಯರಾಗುತ್ತಿದ್ದಾರೆ' ಎಂದು ಆಕ್ರೋಶ ವ್ಯಕ್ತಪಡಿಸಿದರು.
'ಸಫಾರಿ ಆರಂಭಿಸುವ ನಿರ್ಧಾರದಿಂದ ಹಿಂದೆ ಸರಿಯದಿದ್ದರೆ ಅರಣ್ಯ ಸಚಿವರು ಮೈಸೂರಿಗೆ ಪ್ರವೇಶಿಸಲು ಬಿಡುವುದಿಲ್ಲ. ಮುಖ್ಯಮಂತ್ರಿ ಸಿದ್ದರಾಮಯ್ಯ ಅವರಿಗೆ ಕಪ್ಪು ಬಾವುಟ ಪ್ರದರ್ಶಿಸುತ್ತೇವೆ' ಎಂದು ಎಚ್ಚರಿಕೆ ನೀಡಿದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.