ಮೈಸೂರು: ಲಾಕ್ಡೌನ್ ಕಾರಣ ಎರಡು ತಿಂಗಳಿನಿಂದ ಸ್ಥಗಿತಗೊಂಡಿದ್ದ ವಿಮಾನ ಸಂಚಾರವು ಸೋಮವಾರ ಪುನರಾರಂಭವಾಗಲಿದ್ದು, ಮೈಸೂರಿನ ಮಂಡಕಳ್ಳಿ ವಿಮಾನ ನಿಲ್ದಾಣದಿಂದ ಬೆಂಗಳೂರು ಹಾಗೂ ಬೆಳಗಾವಿಗೆ ಸಂಪರ್ಕ ಇರಲಿದೆ.
ಏರ್ ಇಂಡಿಯಾದ ಅಲಯನ್ಸ್ ಏರ್ ಸಂಸ್ಥೆ ಹಾಗೂ ಟ್ರುಜೆಟ್ ಏರ್ಲೈನ್ಸ್ ಈ ಸೇವೆ ಒದಗಿಸಲಿವೆ. ಎಟಿಆರ್ 72 ಆಸನಗಳ ಎರಡು ವಿಮಾನಗಳು ಕಾರ್ಯಾಚರಣೆ ನಡೆಸಲಿವೆ.
ಅಲಯನ್ಸ್ ಏರ್ ಸಂಸ್ಥೆಯ ವಿಮಾನವು ಮೈಸೂರಿನಿಂದ ಸಂಜೆ 6.15ಕ್ಕೆ ಹೊರಟು 7.15ಕ್ಕೆ ಬೆಂಗಳೂರು ತಲುಪಲಿದೆ. ಇದಕ್ಕೂ ಮೊದಲು ಈ ವಿಮಾನವು ಸಂಜೆ 4.30ಕ್ಕೆ ಬೆಂಗಳೂರಿನಿಂದ ಹೊರಟು 5.30ಕ್ಕೆ ಮೈಸೂರಿಗೆ ಬರಲಿದೆ.
ಮಂಗಳವಾರ ಮಧ್ಯಾಹ್ನ 3.30ಕ್ಕೆ ಬೆಂಗಳೂರಿನಿಂದ ಹೊರಟು 4.30ಕ್ಕೆ ಮೈಸೂರು ಸೇರಲಿದೆ. ಅಂದು ರಾತ್ರಿ 9.45ಕ್ಕೆ ಮೈಸೂರಿನಿಂದ ಹೊರಟು 10.45ಕ್ಕೆ ಬೆಂಗಳೂರು ಸೇರಲಿದೆ.
ಏರ್ ಇಂಡಿಯಾ ವೆಬ್ಸೈಟ್ ಪ್ರಕಾರ ಮೈಸೂರಿನಿಂದ ಬೆಂಗಳೂರಿಗೆ ₹ 1,730 ದರವಿದೆ.
‘ಕೇಂದ್ರ ಸರ್ಕಾರದ ಮಾರ್ಗಸೂಚಿ ಪ್ರಕಾರ ಸಿದ್ಧತೆ ಮಾಡಿಕೊಂಡಿದ್ದೇವೆ. ಅಂತರ ಕಾಯ್ದುಕೊಳ್ಳಲು ವ್ಯವಸ್ಥೆ ಮಾಡಿದ್ದೇವೆ. ಪ್ರವಾಸಿಗರ ತಪಾಸಣೆಗೆ ಮೊದಲ ಆದ್ಯತೆ ನೀಡಿದ್ದೇವೆ. ಸ್ಯಾನಿಟೈಸರ್ ಹಾಕಲಾಗುವುದು. ಬೇರೆ ಕಡೆಯಿಂದ ಬರುವವರು ಆರೋಗ್ಯ ಕ್ಷಮತೆ ಕುರಿತು ಸ್ವಯಂ ದೃಢೀಕರಣ ಪತ್ರ ನೀಡಬೇಕು’ ಎಂದು ವಿಮಾನ ನಿಲ್ದಾಣ ನಿರ್ದೇಶಕ ಆರ್.ಮಂಜುನಾಥ್ ‘ಪ್ರಜಾವಾಣಿ’ಗೆ ಪ್ರತಿಕ್ರಿಯಿಸಿದರು.
ಬೆಳಗಾವಿಗೆ ವಿಮಾನ: ಟ್ರುಜೆಟ್ ಏರ್ಲೈನ್ಸ್ ವಿಮಾನವು ಮೈಸೂರಿನಿಂದ ಸೋಮವಾರ ಸಂಜೆ 4.55ಕ್ಕೆ ಹೊರಟು 6.15ಕ್ಕೆ ಬೆಳಗಾವಿ ತಲುಪಲಿದೆ. ಇದಕ್ಕೂ ಮೊದಲು ಬೆಳಗಾವಿಯಿಂದ ಮಧ್ಯಾಹ್ನ 3 ಕ್ಕೆ ಹೊರಟು ಸಂಜೆ 4.20ಕ್ಕೆ ಮೈಸೂರಿಗೆ ಬರಲಿದೆ. ಈ ವಿಮಾನ ಸೇವೆ ನಿತ್ಯ ಇರಲಿದೆ.
ಟ್ರುಜೆಟ್ ವೆಬ್ಸೈಟ್ ಪ್ರಕಾರ ಮೈಸೂರಿನಿಂದ ಬೆಳಗಾವಿಗೆ ₹ 2,809 ದರವಿದೆ.
ಲಾಕ್ಡೌನ್ಗೆ ಮುನ್ನ ಮೈಸೂರಿನ ಈ ನಿಲ್ದಾಣದಿಂದ ನಿತ್ಯ ಎಂಟು ವಿಮಾನಗಳು, 16 ಟ್ರಿಪ್ಗಳಲ್ಲಿ ಹಾರಾಟ ನಡೆಸುತ್ತಿದ್ದವು.
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.