ಮೈಸೂರು: ‘ರಾಸಾಯನಿಕಮುಕ್ತ ಕೃಷಿಗೆ ಆದ್ಯತೆ ನೀಡಿದರೆ ಆರೋಗ್ಯಕರ ಸಮಾಜ ನಿರ್ಮಾಣ ಸಾಧ್ಯ’ ಎಂದು ರೈತ ಕಲ್ಯಾಣ ಸಂಘದ ರಾಜ್ಯಾಧ್ಯಕ್ಷ ಸಿ.ಚಂದನ್ ಗೌಡ ತಿಳಿಸಿದರು.
ವರುಣ ವಿಧಾನಸಭಾ ಕ್ಷೇತ್ರ ವ್ಯಾಪ್ತಿಯ ರಾಯನಹುಂಡಿ ಗ್ರಾಮದಲ್ಲಿ ರೈತ ಕಲ್ಯಾಣ ನಾಮಫಲಕ ಅನಾವರಣ, ಸಂಘದ ನೂತನ ಘಟಕ ಉದ್ಘಾಟನೆ ಹಾಗೂ ಮಣ್ಣಿಗೆ ಮರುಜೀವ ಅಭಿಯಾನಕ್ಕೆ ಚಾಲನೆ ನೀಡಿ ಮಾತನಾಡಿದರು.
‘ಕೃಷಿಯಲ್ಲಿ ನಿರಂತರ ರಾಸಾಯನಿಕ ಬಳಕೆಯಿಂದ ಮಣ್ಣಿನ ಫಲವತ್ತತೆ ತೀವ್ರ ಕುಸಿದಿದ್ದು, ಸೂಕ್ತ ಬೆಳೆ ಬೆಳೆಯಲಾಗದೇ ಅನ್ನದಾತ ಸಂಕಷ್ಟದ ಪರಿಸ್ಥಿತಿ ಎದುರಿಸುವಂತಾಗಿದೆ. ಮಣ್ಣನ್ನು ಸಂರಕ್ಷಿಸಬೇಕಾದ ಜವಾಬ್ದಾರಿ ನಮ್ಮ ಮೇಲಿದೆ. ಅದನ್ನು ಪಾಲಿಸೋಣ’ ಎಂದು ಸಲಹೆ ನೀಡಿದರು.
‘ಮಣ್ಣನ್ನು ಪೂಜಿಸುವ ವಿಶಿಷ್ಟ ಸಂಸ್ಕಾರ ನಮ್ಮಲ್ಲಿದೆ. ಆದರೆ, ಆ ಭಾವನೆ ಧಾರ್ಮಿಕವಾಗಿ ಮಾತ್ರ ಇರದೆ, ಕಾರ್ಯ ರೂಪಕ್ಕೂ ಬರಬೇಕು. ಭೂಮಿಗೆ ವಿಷವುಣಿಸುವ ಕೆಲಸ ಮಾಡದೆ, ಅದರ ರಕ್ಷಣೆಗೆ ಮುಂದಾಗಬೇಕು. ಇದರಿಂದ ಮುಂದಿನ ಪೀಳಿಗೆಗೆ ಉತ್ತಮ ವಾತಾವರಣ ಕಲ್ಪಿಸಬಹುದು’ ಎಂದು ಹೇಳಿದರು.
ಸಂಘಟನೆ ಪದಾಧಿಕಾರಿಗಳಾದ ಹೇಮಂತ್ ಕುಮಾರ್, ಜಗದೀಶ್ ಕಣೆನೂರು, ಪ್ರತಾಪ್, ಹರೀಶ್ ಪಿ.ಗೌಡ, ಅನಿಲ್, ಕಂದಸ್ವಾಮಿ, ಪುನೀತ್, ಮಾದೇಗೌಡ್ರು, ಸಂಜಯ್, ಲೋಕೇಶ್, ದಾಸೇಗೌಡ, ನವೀನ್ ಪಟೇಲ್, ಮಂಜು ದೇವನೂರು, ಶ್ರೀನಿವಾಸ್, ಕೆಂಡಗಣ್ಣ ಭಾಗವಹಿಸಿದ್ದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.