ADVERTISEMENT

ಹಂಪಾಪುರ: ಮಹದೇವ ನಗರದಲ್ಲಿ ಶನೇಶ್ವರ ಸ್ವಾಮಿ ಉತ್ಸವ

​ಪ್ರಜಾವಾಣಿ ವಾರ್ತೆ
Published 3 ಮಾರ್ಚ್ 2026, 3:14 IST
Last Updated 3 ಮಾರ್ಚ್ 2026, 3:14 IST
ಹಂಪಾಪುರ ಹೋಬಳಿಯ ಮಹದೇವ ನಗರದಲ್ಲಿ ಶನೇಶ್ವರ ಸ್ವಾಮಿ ಉತ್ಸವ ವಿಜೃಂಭಣೆಯಿಂದ ಜರುಗಿತು
ಹಂಪಾಪುರ ಹೋಬಳಿಯ ಮಹದೇವ ನಗರದಲ್ಲಿ ಶನೇಶ್ವರ ಸ್ವಾಮಿ ಉತ್ಸವ ವಿಜೃಂಭಣೆಯಿಂದ ಜರುಗಿತು   

ಹಂಪಾಪುರ: ಇಲ್ಲಿನ ಮಹದೇವನಗರ ಗ್ರಾಮದ ಕಂಚಮ್ಮಳ್ಳಿ ಗೇಟ್‌ನಲ್ಲಿರುವ ಶನೇಶ್ವರಸ್ವಾಮಿ ದೇವಸ್ಥಾನದಲ್ಲಿ ಶನೇಶ್ವರಸ್ವಾಮಿ ಜಯಂತಿ, ಜಾತ್ರಾ ಮಹೋತ್ಸವ ವಿಜೃಂಭಣೆಯಿಂದ ನೆರವೇರಿತು.

ದೇವಸ್ಥಾನದಲ್ಲಿ ಬೆಳಿಗ್ಗೆಯಿಂದಲೇ ವಿವಿಧ ಪೂಜಾ ವಿಧಿ-ವಿಧಾನಗಳು ಜರುಗಿದವು. ಮೂರ್ತಿಗಳನ್ನು ಪುರ ಗ್ರಾಮದ ತೋಟಕ್ಕೆ ಕರೆದುಕೊಂಡು ಬಂದು ತೊಳೆದು ವಿಶೇಷ ಪೂಜೆ ಸಲ್ಲಿಸಿ ದೇವರನ್ನು ದೇವಸ್ಥಾನದ ಬಳಿಗೆ ಕರೆತರಲಾಯಿತು. ವೀರಗಾಸೆ ನೃತ್ಯ ಪ್ರದರ್ಶಿಸಲಾಯಿತು. ವಾದ್ಯಗೋಷ್ಠಿಗಳು ಮೊಳಗಿದವು. ದೇವಸ್ಥಾನವನ್ನು ತಳಿರು, ತೋರಣ, ತುಳಸೀಹಾರದೊಂದಿಗೆ ಹೂವುಗಳಿಂದ ಸಿಂಗರಿಸಲಾಗಿತ್ತು. ವಿದ್ಯುತ್ ದೀಪಾಲಂಕಾರವನ್ನೂ ಮಾಡಲಾಗಿತ್ತು.

ದೇವಸ್ಥಾನದ ಮುಂಭಾಗದಲ್ಲಿ ಧ್ವಜಾರೋಹಣ ಕಾರ್ಯಕ್ರಮ, ಗುರುಲಿಂಗಪ್ಪ ಅವರ ಸ್ಮರಣಾರ್ಥ ಗುರುವಂದನೆ, ಪಾದಪೂಜೆ ಸೇರಿದಂತೆ ವಿವಿಧ ಧಾರ್ಮಿಕ ಕಾರ್ಯಕ್ರಮಗಳು ಜರುಗಿದವು. ಛಾಯಾದೇವಿ, ಸೂರ್ಯದೇವರ ಕಳಸ, ಶನೇಶ್ವರಸ್ವಾಮಿ ದೇವರ ಉತ್ಸವಮೂರ್ತಿಯೂ ಮೆರವಣಿಗೆ ಮೂಲಕ ಮೈಸೂರು-ಮಾನಂದವಾಡಿ ರಸ್ತೆಯಲ್ಲಿ ಸಾಗಿ ದೇವಸ್ಥಾನ ತಲುಪಿತು.

ADVERTISEMENT

ಕುದುರೆವಾಹನ, ಸತ್ತಿಗೆ ಸೂರಪಾನಿ, ತಮಟೆವಾದ್ಯ, ಅರಮನೆ ಬ್ಯಾಂಡ್ ಸೇರಿದಂತೆ ನಾನಾ ಕಲಾಪ್ರಕಾರಗಳು ಮೆರವಣಿಗೆಗೆ ಮೆರಗು ತಂದವು. ಭಕ್ತರು ದಾರಿಯುದ್ದಕ್ಕೂ ವಿವಿಧ ಭಜನಾ ಕಾರ್ಯಕ್ರಮ ನಡೆಸಿಕೊಟ್ಟರು.

ಶ್ರೀ ಶನೇಶ್ವರಸ್ವಾಮಿ ಚಾರಿಟಬಲ್ ಟ್ರಸ್ಟ್‌ ಅಧ್ಯಕ್ಷ ಕುಮಾರಸ್ವಾಮಿ ಮಾತನಾಡಿ, ‘ಅಧ್ಯಾತ್ಮದಿಂದ ಜೀವನದಲ್ಲಿ ಸಂತೋಷ ಸಿಗಲಿದ್ದು, ಜೀವನ ಉತ್ತಮವಾಗಿರಲು ಆತ್ಮವನ್ನು ಆಧ್ಯಾತ್ಮಕ ಕಡೆಗೆ ಕೊಂಡೊಯ್ಯಬೇಕು’ ಎಂದರು.

ದೇವಸ್ಥಾನದಲ್ಲಿ ಗುರುಲಿಂಗಪ್ಪ ನೇತೃತ್ವದಲ್ಲಿ ಸ್ವಾಮಿಗೆ ಹೋಮ, ಅಭಿಷೇಕ, ಪೂಜೆಗಳು ನಡೆದವು. ಬಸವ, ಕುದುರೆ ಜತೆಗೆ ದೇವರ ಬೆಳ್ಳಿ ವಿಗ್ರಹಮೂರ್ತಿಯನ್ನು ಬೆಳ್ಳಿ ರಥದಲ್ಲಿ ಕೂರಿಸಿ ಮೆರವಣಿಗೆ ನಡೆಸಲಾಯಿತು. ದಾರಿಯಲ್ಲಿ ಮಜ್ಜಿಗೆ ಪಾನಕ ವಿತರಿಸಲಾಯಿತು. ಮೆರವಣಿಗೆಯಲ್ಲಿ ಸಾವಿರಾರು ಭಕ್ತರು ಪಾಲ್ಗೊಂಡಿದ್ದರು. ನಂತರ ದೇವರಿಗೆ ವಿಶೇಷ ಪೂಜೆ ಸಲ್ಲಿಸಿ, ಹರಕೆ ತಿರಿಸಿದರು. ಬಳಿಕ ಅನ್ನ ಸಂತರ್ಪಣೆ ನಡೆಯಿತು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.