
ಮೈಸೂರಿನ ಊಟಿ ರಸ್ತೆಯ ಜೆಎಸ್ಎಸ್ ಕಲಾ, ವಾಣಿಜ್ಯ ಮತ್ತು ವಿಜ್ಞಾನ ಕಾಲೇಜಿನಲ್ಲಿ ಮಂಗಳವಾರ ನಡೆದ 18ನೇ ಪದವೀಧರ ದಿನಾಚರಣೆಯಲ್ಲಿ ಪದವೀಧರರು ಫಲಕ ಹಿಡಿದು ಸಂಭ್ರಮಿಸಿದರು. ಪ್ರೊ.ಬಿ.ವಿ.ಸಾಂಬಶಿವಯ್ಯ, ಡಾ.ಸಿ.ಜಿ.ಬೆಟಸೂರಮಠ, ಎಂ.ಪ್ರಭು, ಬಿ.ಪ್ರಭುಸ್ವಾಮಿ, ಎನ್.ರಾಜೇಂದ್ರ ಪ್ರಸಾದ್ ಪಾಲ್ಗೊಂಡಿದ್ದರು
ಪ್ರಜಾವಾಣಿ ಚಿತ್ರ
ಮೈಸೂರು: ‘ಅಚ್ಚರಿಯ ವೇಗದಲ್ಲಿ ಬೆಳೆಯುತ್ತಿರುವ ತಂತ್ರಜ್ಞಾನ ಯುಗದಲ್ಲಿ ಎಷ್ಟು ಕೌಶಲವಿದ್ದರೂ ಸಾಲದು. ನಾವು ಬದುಕಿನುದ್ದಕ್ಕೂ ಅಧ್ಯಯನಶೀಲರಾಗಬೇಕು’ ಎಂದು ಆದರ್ಶ್ ಗ್ರೂಪ್ ಕಂಪನಿಯ ಅಧ್ಯಕ್ಷ ಬಿ.ಎಂ. ಜಯಶಂಕರ್ ಸಲಹೆ ನೀಡಿದರು.
ಜೆಎಸ್ಎಸ್ ವಿಜ್ಞಾನ ಮತ್ತು ತಂತ್ರಜ್ಞಾನ ವಿಶ್ವವಿದ್ಯಾಲಯದ ಎಂಟನೇ ಘಟಿಕೋತ್ಸವದಲ್ಲಿ ಬುಧವಾರ ನೂತನ ಪದವೀಧರರಿಗೆ ಪದವಿ ಪ್ರದಾನ ಮಾಡಿ ಅವರು ಮಾತನಾಡಿದರು. ‘ಇಂದಿನ ಉದ್ಯೋಗಗಳು ನಾಳೆ ಇಲ್ಲದಿರಬಹುದು. ಇಂತಹ ಪರಿಸ್ಥಿತಿಯಲ್ಲಿ ತಾಂತ್ರಿಕ ಜ್ಞಾನ ಮಾತ್ರ ಸಾಕಾಗುವುದಿಲ್ಲ. ಕಲಿಯುವ, ಮರೆತುಬಿಡುವ ಮತ್ತು ಮರುಕಲಿಯುವ ಸಾಮರ್ಥ್ಯವೇ ಅತ್ಯಂತ ಮುಖ್ಯ’ ಎಂದರು.
‘ಜಿಜ್ಞಾಸೆಯನ್ನು ಉಳಿಸಿಕೊಳ್ಳಿ. ಪ್ರಸ್ತುತತೆಯನ್ನು ಕಾಪಾಡಿಕೊಳ್ಳಿ. ನಿಮ್ಮ ಮೇಲೆ ಹೂಡಿಕೆ ಮಾಡುವುದನ್ನು ಎಂದಿಗೂ ನಿಲ್ಲಿಸಬೇಡಿ. ಪದವಿ ಎಂಬುದು ನಿಮ್ಮ ಭವಿಷ್ಯದ ಅಡಿಪಾಯವಷ್ಟೇ, ಅದೇ ಗೋಪುರದ ಮೇಲ್ಮಹಡಿ ಅಲ್ಲ. ನಿಮ್ಮ ಜ್ಞಾನಕ್ಕೆ ಹೊಸ ಮಹಡಿಗಳನ್ನು ಸೇರಿಸಿ. ನಿಮ್ಮ ಕೌಶಲಗಳನ್ನು ಬಲಪಡಿಸಿ. ನಿರಂತರವಾಗಿ ಸಾಮರ್ಥ್ಯವನ್ನು ವೃದ್ಧಿಸಿಕೊಳ್ಳಿ’ ಎಂದು ವಿದ್ಯಾರ್ಥಿಗಳಿಗೆ ಕಿವಿಮಾತು ಹೇಳಿದರು.
‘ಶಿಸ್ತು, ಬೌದ್ಧಿಕ ಕಟ್ಟುನಿಟ್ಟು ಮತ್ತು ಮೌಲ್ಯಗಳು ನಮ್ಮ ಬದುಕನ್ನು ಇನ್ನಷ್ಟು ಸುಂದರವಾಗಿ ರೂಪಿಸುತ್ತವೆ. ಪದವಿ ಎಂಬುದು ನಿಮ್ಮ ಕಲಿಕೆಯ ಅಂತ್ಯವಲ್ಲ, ಹೊಣೆಗಾರಿಕೆಯ ಆರಂಭ’ ಎಂದರು.
ವಿಶ್ವವಿದ್ಯಾಲಯದ ಕುಲಾಧಿಪತಿ ಶಿವರಾತ್ರಿ ದೇಶಿಕೇಂದ್ರ ಸ್ವಾಮೀಜಿ ಸಾನ್ನಿಧ್ಯ ವಹಿಸಿದ್ದರು. ಜೆಎಸ್ಎಸ್ ಮಹಾವಿದ್ಯಾಪೀಠದ ಕಾರ್ಯನಿರ್ವಾಹಕ ಕಾರ್ಯದರ್ಶಿ ಸಿ.ಜಿ. ಬೆಟಸೂರಮಠ, ತಾಂತ್ರಿಕ ಶಿಕ್ಷಣ ವಿಭಾಗದ ನಿರ್ದೇಶಕ ಬಿ. ಸುರೇಶ್, ಜೆಎಸ್ಎಸ್ ಎಸ್ಟಿಯು ಕುಲಪತಿ ಎ.ಎನ್. ಸಂತೋಷ್ಕುಮಾರ್, ಕುಲಸಚಿವ ಎಸ್.ಎ. ಧನರಾಜ್, ಪರೀಕ್ಷಾ ನಿಯಂತ್ರಣಾಧಿಕಾರಿ ಪಿ. ನಂಜುಂಡಸ್ವಾಮಿ ಪಾಲ್ಗೊಂಡರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.